ಕೆಲವೇ ಕ್ಷಣಗಳಲ್ಲಿ ಹಸೆಮಣೆ ಏರಲಿರುವ ಅಭಿ- ಅವಿವಾ: ಇಲ್ಲಿದೆ ಮದುವೆಗೆ ಬರಲಿರುವ ಅತಿಥಿಗಳ ಲಿಸ್ಟ್
ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿದೆ. ಅಂಬಿ ಮುದ್ದಿನ ಮಗ ಅಭಿಷೇಕ್ ಹಾಗೂ ಅವಿವಾ ಬಿಡಪ ಜೋಡಿ ಮದುವೆಗೆ ಅಂತಿಮ ಹಂತದ ಸಿದ್ಧತೆ ನಡೀತಿದೆ. ನಗರದ ಮಾಣಿಕ್ಯ ಚಾಮರ ವಜ್ರ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ನೆರವೇರಲಿದೆ. ಕಳೆದೆರಡು ದಿನಗಳಿಂದ ಮದುವೆ ಶಾಸ್ತ್ರಗಳು ಕಳೆಕಟ್ಟಿತ್ತು. ಇಂದು ಅಂತಿಮವಾಗಿ ಮಾಂಗಲ್ಯಧಾರಣೆ ನಡೆಯಲಿದೆ.
ಇಂದು (ಜೂನ್ 5) ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30-10:30ರ ನಡುವಿನ ಶುಭ ಮುಹೂರ್ತದಲ್ಲಿ ಅಭಿ- ಅವಿವಾ ಕಲ್ಯಾಣ ನೆರವೇರಲಿದೆ. ಚಿತ್ರರಂಗ, ರಾಜಕೀಯರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಶಿವಣ್ಣ, ಉಪೇಂದ್ರ ಪತ್ನಿ ಸಮೇತರಾಗಿ ಅಂಬಿ ಮನೆ ಸಂಭ್ರಮದಲ್ಲಿ ಭಾಗಿ ಆಗಲಿದ್ದಾರೆ. ಅಭಿ- ಅವಿವಾ ಮದುವೆಗೆ ಸಾಕ್ಷಿಯಾಗಿ ಶುಭ ಹಾರೈಸುವ ನಿರೀಕ್ಷೆಯಿದೆ.

ಈಗಾಗಲೇ ಅಭಿ- ಅವಿವಾ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರಗಳು ನಡೆದಿದೆ. ಚಪ್ಪರ ಪೂಜೆಯ ಫೋಟೊಗಳು ವೈರಲ್ ಆಗಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ಅಭಿ, ಅವಿವಾಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಮಂಡ್ಯ ಸಂಸದೆಯಾಗಿ ಅಭಿ ತಾಯಿ ಸುಮಲತಾ ಅಂಬರೀಶ್ ಸೇವೆ ಸಲ್ಲಿಸುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದಿದ್ದ ಸುಮಲತಾ ಇತ್ತೀಚೆಗೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಮಗನ ಮದುವೆ ಆಮಂತ್ರಣ ನೀಡಿದ್ದರು.

ಅಂಬಿ ಕನಸಿನಂತೆ ಅಭಿ ಕಲ್ಯಾಣ
ರೆಬಲ್ ಸ್ಟಾರ್ ಅಂಬರೀಶ್ ಕನಸಿನಂತೆ ಎಲ್ಲಾ ಆಪ್ತರನ್ನು ಆಮಂತ್ರಿಸಿ ಸುಮಲತಾ ಮಗನ ಮದುವೆ ಮಾಡುತ್ತಿದ್ದಾರೆ. ಗೌಡರ ಮನೆ ಸಂಪ್ರದಾಯದಂತೆ ಮದುವೆ ಶಾಸ್ತ್ರ ಸಂಪ್ರದಾಯಗಳು ನಡೀತಿದೆ.ಅಂಬಿಗೆ ದೇಶ ವಿದೇಶಗಳಲ್ಲಿ ಸ್ನೇಹಿತರಿದ್ದರು. ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲಿ ಅಂಬಿ ಆಪ್ತಮಿತ್ರರಿದ್ದಾರೆ. ಇಡೀ ಕನ್ನಡ ಚಿತ್ರರಂಗ ನಮ್ಮ ಕುಟುಂಬ ಎನ್ನುವಂತಿ ಅಂಬಿ ಎಲ್ಲರೊಟ್ಟಿಗೆ ಬೆರೆತಿದ್ದರು. ಹಾಗಾಗಿ ಎಲ್ಲರೂ ಕೂಡ ಅಭಿಷೇಕ್- ಅವಿವಾ ಜೋಡಿಯ ಮದುವೆಗೆ ಹಾಜರಾಗಲಿದ್ದಾರೆ.
ಲವ್ ಕಂ ಅರೇಂಜ್ಡ್ ಮ್ಯಾರೇಜ್
ಅಭಿ ವಿದೇಶದಲ್ಲಿ ಓದಿ ಬಂದು ಕನ್ನಡ ಚಿತ್ರರಂಗಕ್ಕೆ 'ಅಮರ್' ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಲಂಡನ್ನಲ್ಲಿ ಓದುವಾಗಲೇ ಅವಿವಾ ಕೂಡ ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ರಾಮಾಟಿಕ್ ಆರ್ಟ್ನಲ್ಲಿ ಪದವಿ ಪಡೆದಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಆಗಿತ್ತು. ಮುಂದೆ ಅದು ಸ್ನೇಹವಾಗಿ ಕೊನೆಗೆ ಪ್ರೀತಿಗೆ ತಿರುಗಿ ಈಗ ಹಸೆಮಣೆ ಏರಲಿದ್ದಾರೆ.
ಎಲ್ಲಾ ಪಕ್ಷದವರು ಮದುವೆಗೆ ಹಾಜರ್
ಅಂಬರೀಶ್ ಕೂಡ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದರು. ಕೇಂದ್ರ, ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಾಗಾಗಿ ರಾಜಕೀಯರಂಗದಲ್ಲಿ ಬಹಳ ದೊಡ್ಡ ಆಪ್ತ ಬಳಗ ಅಂಬಿ ಕುಟುಂಬಕ್ಕಿದೆ. ಇನ್ನು ಸುಮಲತಾ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದ್ದರು. ಇನ್ನು ಅಭಿ, ಮಾಜಿ ಪ್ರಧಾನಿ ದೇವೇಗೌಡರನ್ನು ಸಹ ಮದುವೆ ಆಹ್ವಾನಿಸಿದ್ದಾರೆ. ಹಾಗಾಗಿ ಎಲ್ಲಾ ಪಕ್ಷಗಳ ನಾಯಕರು ಮದುವೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಮಂಡ್ಯದಲ್ಲಿ ಬೀಗರೂಟ
ಇಂದು ಮಾಂಗಲ್ಯಧಾರಣೆ ನಂತರ ಬುಧವಾರ ಪ್ಯಾಲೇಸ್ ಗ್ರೌಂಡ್ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಕೂಡ ಸಾಕ್ಷು ಗಣ್ಯರು ಆಗಮಿಸಲಿದ್ದಾರೆ. ಜೂನ್ 17ಕ್ಕೆ ಮಂಡ್ಯದಲ್ಲಿ ಬಹಳ ದೊಡ್ಡದಾಗಿ ಬೀಗರೂಟ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಂಡ್ಯದಲ್ಲಿ ಅಭಿ ಮದುವೆ ನಡೆಯುತ್ತೆ ಎನ್ನುವ ನಿರೀಕ್ಷೆಯಿತ್ತು. ಆದರೆ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ನಡೀತಿದೆ.


Click it and Unblock the Notifications











