ರಾಜವರ್ಧನ್ ಗಜರಾಮ ಮುಹೂರ್ತ; ಕ್ಲಾಪ್ ಮಾಡಿದ ಅಭಿಷೇಕ್ ಅಂಬರೀಶ್
2020ರಲ್ಲಿ ಬಿಚ್ಚುಗತ್ತಿ ದಳವಾಯಿ ದಂಗೆ ಚಾಪ್ಟರ್ 1 ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಇದೀಗ 'ಗಜರಾಮ,ನಾಗಿದ್ದಾರೆ. ಇಂದು ( ಸೆಪ್ಟೆಂಬರ್ 28 ) ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಮುಹೂರ್ತ ಸಮಾರಂಭದಲ್ಲಿ ನಟ ಅಭಿಷೇಕ್ ಅಂಬರೀಶ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಇನ್ನು ಇದೇ ದಿನ ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ.
ಕ್ಲಾಪ್ ಮಾಡಿ ಮಾತನಾಡಿದ ಅಭಿಷೇಕ್ ಅಂಬರೀಶ್ ನನ್ನ ತಂದೆ ಗಜೇಂದ್ರ ಎಂಬ ಸಿನಿಮಾ ಮಾಡಿದ್ರು, ಇದೀಗ ನನ್ನ ಸ್ನೇಹಿತ ಗಜರಾಮ ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ, ರಾಜವರ್ಧನ್ ಮೋಷನ್ ಪೋಸ್ಟರ್ನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದಾರೆ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇನ್ನು ಈ ಚಿತ್ರಕ್ಕೆ ಸುನಿಲ್ ಕುಮಾರ್ ವಿ.ಎ ನಿರ್ದೇಶನವಿರಲಿದ್ದು, ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಮೂರ್ತಿ ವಿ ಅವರು ಬಂಡವಾಳ ಹೂಡಿದ್ದಾರೆ.

ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ನಿರ್ದೇಶನವಿದ್ದು, ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಟಿಸಿದ್ದ ನಟಿ ತಪಸ್ವಿನಿ ಚಿತ್ರಕ್ಕೆ ಪೂಣಚ್ಚ ನಾಯಕಿಯಾಗಿದ್ದಾರೆ ಮತ್ತು ಶಿಷ್ಯ ದೀಪಕ್ ಕೂಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನು ಮುಹೂರ್ತ ಸಮಾರಂಭದ ನಂತರ ಮಾತನಾಡಿದ ನಟ ರಾಜವರ್ಧನ್ ನಿರ್ದೇಶಕ ಸುನಿಲ್ ಕುಮಾರ್ ಅವರು ಹೇಳಿದ ಕತೆ ತನಗೆ ಸಖತ್ ಇಷ್ಟವಾಯಿತು ಎಂದಿದ್ದಾರೆ ಹಾಗೂ ಒಂದೊಳ್ಳೆ ಕತೆ ಸಿಕ್ಕಾಗ ಬಿಡಬಾರದು ಎಂದೂ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕತೆ ಜತೆಗೆ ಒಳ್ಳೆಯ ನಿರ್ದೇಶಕ, ಒಳ್ಳೆಯ ನಿರ್ಮಾಪಕ ಹಾಗೂ ಒಳ್ಳೆಯ ಬ್ಯಾನರ್ ಜತೆ ಕೆಲಸ ಮಾಡುವ ಅವಕಾಶ ಕೈಚೆಲ್ಲಬಾರದು ಎನ್ನುತ್ತಾರೆ ರಾಜವರ್ಧನ್.
ಇನ್ನು ತನ್ನ ಟೀಸರ್ ಹಾಗೂ ಟ್ರೈಲರ್ನಿಂದ ನಿರೀಕ್ಷೆ ಮೂಡಿಸಿದ್ದ ಬಿಚ್ಚುಗತ್ತಿ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬಂದ ನಂತರ ಆ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಇನ್ನು ಬಿಚ್ಚುಗತ್ತಿ ಸಿನಿಮಾದ ಎರಡನೇ ಭಾಗದ ಕುರಿತು ಯಾವುದೇ ಸುದ್ದಿ ಹೊರಬೀಳದ ನಡುವೆಯೇ ರಾಜವರ್ಧನ್ ಅವರ ಒಟ್ಟು ಮೂರು ಚಿತ್ರಗಳು ಘೋಷಣೆಯಾಗಿವೆ. ಸದ್ಯ ಸೆಟ್ಟೇರಿರುವ ಗಜರಾಮ ರಾಜವರ್ಧನ್ ಅಭಿನಯದ ನಾಲ್ಕನೇ ಸಿನಿಮಾವಾಗಿದ್ದು, ಪ್ರಣಯಂ ಹಾಗೂ ಹಿರಣ್ಯ ಚಿತ್ರಗಳೂ ಸಹ ಈಗಾಗಲೇ ಘೋಷಿಸಲ್ಪಟ್ಟಿವೆ


Click it and Unblock the Notifications











