"ಅಯ್ಯೋ, ಅಂಬರೀಶ್ ಮನೇಲಿ ನಾನು ಹುಟ್ಟಿದ್ರೆ.. ಅಭಿ ನಾನಾಗಿದ್ರೆ ಅಂತ ಎಷ್ಟೋ ಜನ ಆಸೆಪಟ್ಟಿರ್ತಾರೆ.. ಆದ್ರೆ": ಅಭಿಷೇಕ್
ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ನವೆಂಬರ್ 23ಕ್ಕೆ ತೆರೆಗಪ್ಪಳಿಸುತ್ತಿದೆ. ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಈಗಾಗಲೇ ಸೂರಿ, ಅಭಿ ಯೂಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಅಭಿ ಸಿನಿಮಾ ಜೊತೆಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
'ಅಮರ್' ಸಿನಿಮಾ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಬಂದರು. ಆದರೆ ಮೊದಲ ಸಿನಿಮಾ ಹಿಟ್ ಆಗಲಿಲ್ಲ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಅಭಿ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನೆಪೋಟಿಸಂ ಚರ್ಚೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸ್ಟಾರ್ಗಳ ಮಕ್ಕಳು ಅಂದಾಕ್ಷಣ ಸಕ್ಸಸ್ ಸಿಗಲ್ಲ ಎಂದಿದ್ದಾರೆ.

"ಸ್ಟಾರ್ಗಳ ಮಕ್ಕಳು ಅಂದ್ರೆ ಬಹಳ ಒತ್ತಡ ಇರುತ್ತದೆ, ಎಂದು ಕೆಲವರು ಹೇಳುತ್ತಿರುತ್ತಾರೆ. ಪ್ರೈವೆಸಿ ಇರಲ್ಲ, ಸಾಮಾನ್ಯರಂತೆ ಓಡಾಡೋಕೆ ಆಗೋಲ್ಲ ಎನ್ನುತ್ತಾರೆ. ಆದರೆ ನಮ್ಮನ್ನು ಗುರ್ತಿಸುವುದು, ನಮಗೆ ಸಿಗುವ ವಿಸಿಬಲಿಟಿ ಪಾಪಾ ಹೊಸಬರಿಗೆ ಸಿಗಲ್ಲ. ಅಷ್ಟು ಸುಲಭವಾಗಿ ಸಿಗಲ್ಲ. ನಮಗೆ ಅದು ಸುಲಭವಾಗಿ ಸಿಗುತ್ತದೆ. ಇದನ್ನೆಲ್ಲಾ ತಲೆಮೇಲೆ ಹೊತ್ತುಕೊಂಡು ಕಷ್ಟ ಎಂದು ಸಿಂಪಥಿಗಾಗಿ ಬಾಯಿ ಬಡ್ಕೊಳ್ಳೋದು ತಪ್ಪು"
"ನಾವು ಯಾವಾಗ ಅನುಕೂಲ ತಗೋತ್ತೀವೋ, ಅದೇ ರೀತಿ ಅದರಿಂದ ಅನಾನುಕೂಲವನ್ನು ತಗೋಬೇಕು. ಅದೇ ಜೀವನ. ಸ್ಟಾರ್ ಮಗನಾಗಿ ಎಲ್ಲರೂ ನನ್ನನ್ನು ಗುರ್ತಿಸ್ತಾರೆ, ಚಿತ್ರರಂಗದಲ್ಲಿ ಬೆಂಬಲ ಇರುತ್ತದೆ. ಅವಕಾಶಗಳು ಸಿಗಬಹುದೇನೋ. ಆದರೆ ರಿಸಲ್ಟ್ ನನ್ನ ಮೇಲೆಯೆ ಇರುತ್ತದೆ. ನಾನು ಸಿನ್ಮಾ ಚೆನ್ನಾಗಿ ಮಾಡಿದ್ರೆ, ಸಿನ್ಮಾ ನೋಡ್ತೀರಾ"
"ಬ್ಯಾಕ್ಗ್ರೌಂಡ್ ಇಲ್ಲದವರಿಗೆ ಅವಕಾಶಗಳು ಸಿಗೋದು ಕಷ್ಟವಾಗಬಹುದು. ಅವರಿಗೂ ಬೇರೆ ಕಷ್ಟಗಳಿರುತ್ತವೆ. ನಮಗೂ ಕಷ್ಟ ಇದೆ. ಆದರೆ ನಮ್ಮದೇ ಕಷ್ಟ, ಅವರದ್ದು ಕಷ್ಟ ಅಲ್ಲ, ನಮ್ಮದು ಸುಲಭ, ಅವರದ್ದು ಕಷ್ಟ ಅನ್ನೋದು ತಪ್ಪಾಗುತ್ತೆ. ನಮ್ಮ ಕಷ್ಟ ನಮಗೆ. ಅವ್ರ ಕಷ್ಟ ಅವರಿಗೆ ಇದ್ದೆ ಇರುತ್ತೆ. ಆದರೆ ನಾವು ಎಲ್ಲವನ್ನೂ ಸ್ವೀಕರಿಸಬೇಕು, ಚಾಲೆಂಜ್ ಆಗಿ ತಗೋಬೇಕು ಮೀರಿಸಬೇಕು ಅಷ್ಟೆ. ಕಂಪ್ಲೇಂಟ್ ಹೇಳಿ ಪ್ರೇಕ್ಷಕರ ಬಳಿ ಸಿಂಪಥಿ ಗಿಟ್ಟಿಸುವ ಅಗತ್ಯ ಯಾರಿಗೂ ಇಲ್ಲ"
"ಇದು ನಮ್ಮಗೆ ಸಿಕ್ಕ ಆಶೀರ್ವಾದ. ನಮಗೆ ಸಿಕ್ಕಿದೆ. ಎಲ್ಲರಿಗೂ ಸಿಗಲ್ಲ. ಎಷ್ಟೊಂದು ಜನ ಪಾಪ ಆಸೆಪಟ್ಟಿರ್ತಾರೇನೋ, ಅಯ್ಯೋ ಅಂಬರೀಶ್ ಮನೆಯಲ್ಲಿ ನಾನು ಹುಟ್ಟಿದ್ರೆ.. ಅಭಿ ನಾನಾಗಿದ್ರೆ ಅಂತ ಎಷ್ಟೋ ಜನ ಆಸೆಪಟ್ಟಿರ್ತಾರೆ.. ಇದೆಲ್ಲ ಅದೃಷ್ಟ ನಮಗೆ. ಅದನ್ನು ಸ್ವೀಕರಿಸಬೇಕು ಹೊರತು, ಅದರ ಬಗ್ಗೆ ಕಂಪ್ಲೇಂಟ್ ಮಾಡಬಾರದು" ಎಂದು ಅಭಿಷೇಕ್ ಹೇಳಿದ್ದಾರೆ.
ಅಭಿಷೇಕ್ ಅಂಬರೀಶ್ಗೆ ತಾಳ್ಮೆ ಕಮ್ಮಿ. ಕೂಗಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ. ಈ ಬಗ್ಗೆ ಉತ್ತರಿಸಿರುವ ಅಭಿ "ನಾನು ಕೂಗಾಡೋದು ನಮ್ಮವರು ಇದ್ದಾಗ. ನಮಗೆ ಹತ್ತಿರವಾದವರು ಇದ್ದಾಗ. ಬಹುಶಃ ನೋಡುವವರಿಗೆ ಬೇರೆ ತರ ಅನ್ನಿಸಬಹುದು. ಯಾರದರೂ ಬಂದರೆ ಕೂಗಾಡುತ್ತೀನಿ ಅನ್ನೋದು ತಪ್ಪು. ನಾನು ಹಲವಾರು ವರ್ಷಗಳಿಂದ ಅವರನ್ನು ನೋಡಿರುತ್ತೀನಿ"
"ಕೆಲವ್ರು ನಾನು ಕೂಗಾಡುವುದನ್ನು ಇಷ್ಟಪಡುತ್ತಾರೆ. ಕೆಲವೊಮ್ಮೆ ಅಂಬರೀಶ್ ಅಣ್ಣನ ತರ ಕೂಗಣ್ಣ ಅಂತ ಕೇಳ್ತಾರೆ. ಅದನ್ನು ಮಾಡೋದುಂಟು. ಅದು ಬೇರೆ ರೀತಿ ಬಿಂಬಿತವಾಗುತ್ತದೆ ಅಷ್ಟೆ. ಅದರಿಂದ ನಾನು ಒರಟ ಅನ್ನಿಸಬಹುದೇನೋ. ಕೆಲವೊಮ್ಮೆ ನನಗೂ ಕೋಪ ಬರುತ್ತದೆ. ನೀವು ಚೆನ್ನಾಗಿ ಮಾತನಾಡಿಸಿದರೆ ನಾನು ಚೆನ್ನಾಗಿ ಮಾತಾಡ್ತೀನಿ. ನೀವು ಒರಟಾಗಿದ್ದರೆ ನಾನು ಅದಕ್ಕಿಂತ ಎರಡರಷ್ಟು ಒರಟಾಗಿರ್ತೀನಿ" ಎಂದು ಹೇಳಿದ್ದಾರೆ.


Click it and Unblock the Notifications











