"ಡಿಬಾಸ್-ರಾಕಿಭಾಯ್ ಪಾರ್ಟಿ ವಿಡಿಯೋ ಲೀಕ್ ಆಗಿದ್ದು ನಂಗೆ ಇಷ್ಟವಾಗ್ಲಿಲ್ಲ": ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ದುನಿಯಾ ಸೂರಿ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಂಆ ಕುತೂಹಲ ಮೂಡಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರ. ಸಿನಿಮಾ ನೀಡಿ ಮೆಚ್ಚುಗೆ ಸೂಚಿಸಿದ್ದು ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.
ಸುಧೀರ್ ಕೆ. ಎಂ ನಿರ್ಮಾಣದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಚರಣ್ ರಾಜ್ ಮ್ಯೂಸಿಕ್, ಮಾಸ್ತಿ ಹಾಗೂ ಅಮ್ರಿ ಸಂಭಾಷಣೆ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. 300ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಈ ವಾರ ಸಿನಿಮಾ ರಿಲೀಸ್ ಆಗಲಿದೆ.

'ಅಮರ್' ಚಿತ್ರದ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಬ್ಯಾಡ್ ಮ್ಯಾನರ್ಸ್' ಬಗ್ಗೆ ನಿರೀಕ್ಷೆಯಿದೆ. ಇನ್ನು ಚಿತ್ರವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ಯಲು ಅಭಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಅಭಿ ಹಂಚಿಕೊಳ್ಳುತ್ತಿದ್ದಾರೆ.
ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿರುವ ಅಭಿಷೇಕ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮದುವೆ ಪಾರ್ಟಿಯ ಖಾಸಗಿ ವಿಡಿಯೋ ಲೀಕ್ ಆಗಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಮದುವೆ ಪಾರ್ಟಿ ಬಗ್ಗೆ ಕೇಳಿದ ಪ್ರಶ್ನೆಗೆ "ದರ್ಶನ್ ಹಾಗೂ ಯಶ್ ಅವರನ್ನು ಬಾಯಿ ಮಾತಿಗೆ ನಾನು ಅಣ್ಣಂದಿರು ಅಂತ ಕರಿಯಲ್ಲ. ನಮ್ಮ ಕುಟುಂಬ ಸದಸ್ಯರು ಅನ್ನಲ್ಲ. ನಿಜವಾದ ಪ್ರೀತಿ, ವಿಶ್ವಾಸ, ಸಂಬಂಧ ಹಾಗಿದೆ. ಅವರಿಬ್ಬರು ಮಾತ್ರವಲ್ಲ ಮದುವೆಗೆ ಸಾಕಷ್ಟು ಜನ ಬಂದಿದ್ದರು."
"ಅಂಬರೀಶ್ ಅಣ್ಣ ಪ್ರೀತಿಯಿಂದ ಎಲ್ಲರೂ ಬಂದಿದ್ದರು. ಸ್ಟಾರ್ ಅನ್ನೋದನ್ನೆಲ್ಲಾ ಪಕ್ಕಕ್ಕಿಟ್ಟು ಎಲ್ಲರೂ ಎಂಜಾಯ್ ಮಾಡಿದರು. ಆ ಸಂಬಂಧಕ್ಕೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. ಒಂದು ಹೇಳ್ತೀನಿ. ಎಲ್ಲರೂ ಸೇರಿದಾಗ 99% ಈ ರೀತಿನೇ ಎಂಜಾಯ್ ಮಾಡ್ತಿವಿ. ಮದುವೆ ಅಂದಾಗ ಸಾಕಷ್ಟು ಫೋಟೊಗ್ರಾಫರ್ಸ್ ಕರೆಸಿರುತ್ತೀವಿ. ಕೆಲವೊಮ್ಮೆ ಈ ರೀತಿ ವಿಡಿಯೋಗಳು ಲೀಕ್ ಆಗುತ್ತದೆ" ಎಂದು ಅಭಿ ನಕ್ಕಿದ್ದಾರೆ.

"ನನಗೆ ಆ ವಿಡಿಯೋಗಳು ಲೀಕ್ ಆಗಿದ್ದು ಇಷ್ಟವಾಗಲಿಲ್ಲ. ಅವರೆಲ್ಲಾ ಅಷ್ಟು ಕಂಫರ್ಟ್ ಆಗಿ ಇದ್ದಾಗ ಅದು ಈ ರೀತಿ ಹೊರಬಂದಿದ್ದು ಸರಿ ಅನ್ನಿಸಲಿಲ್ಲ. ಲಕ್ಕಿಲೀ ಬಂದವ್ರು ಯಾರೂ ಬೇಸರ ಮಾಡಿಕೊಳ್ಳಲಿಲ್ಲ. ಅವ್ರು ಅರ್ಥ ಮಾಡಿಕೊಂಡ್ರು. ಅವರಿಗೆ ಗೊತ್ತು ಹೀಗೆಲ್ಲಾ ಆಗುತ್ತೆ ಅಂತ. ವೈಯಕ್ತಿಕವಾಗಿ ನನಗೆ ಇಷ್ಟವಾಗಲಿಲ್ಲ."
ನಟ ದರ್ಶನ್ ಅಂದು ಪಾರ್ಟಿಯಲ್ಲಿ ಅವಿವಾ ಎದುರು ಮಂಡಿಯೂರಿ ಮನವಿ ಮಾಡಿದ್ದ ಬಗ್ಗೆ ಅಭಿ ಮಾತನಾಡುತ್ತಾ "ದರ್ಶನ್ ಅವ್ರು ನಮ್ಮ ಮಡದಿಯನ್ನು ತಂಗಿ ಅಂತಾರೆ. ಅದೇ ರೀತಿ ನೋಡ್ತಾರೆ. ಏನೋ ತುಂಬಾ ವೈಯಕ್ತಿಕವಾಗಿ ತೆರೆದ ಹೃದಯದಿಂದ ಒಂದು ಸಲಹೆ ಕೊಟ್ಟಿದ್ದರು. ಅಷ್ಟೇ. ಅದು ಖಾಸಗಿಯಾಗಿ ಇರಬೇಕಿತ್ತು. ಪಬ್ಲಿಕ್ ಆಗೋಗಿದೆ. ಅದನ್ನು ಮತ್ತಷ್ಟು ಪಬ್ಲಿಕ್ ಮಾಡೋಕೆ ಹೋಗಲ್ಲ" ಎಂದಿದ್ದಾರೆ.
ಕ್ಲಬ್ ಅಭಿವಾ ಹೆಸರಿನಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆದ ಆ ಪಾರ್ಟಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾರ್ಯಕ್ರಮದ ಕೊನೆಗೆ ನವ ಜೋಡಿಗೆ ದರ್ಶನ್ ಹಾಗೂ ಯಶ್ ಕಿವಿ ಮಾತು ಹೇಳಿದ್ದರು. ದರ್ಶನ್ "ಅಂಬಿ ರೀತಿಯ ತಂದೆ ಸಿಗೋಕೆ ಯಾರಿಗೂ ಸಾಧ್ಯವಿಲ್ಲ. ಆ ಫ್ಯಾಮಿಲಿಗೆ ನೀನು ಹೋಗ್ತಿದ್ದಿಯಾ, ಎಲ್ಲಾ ಹೊಣೆ ನಿನ್ನದೇ, ನಮ್ಮ ಮನೆಯಲ್ಲಿ ಏನೇ ತೊಂದರೆಯಾದರೂ ಚೆನ್ನಾಗಿರಲ್ಲ. ಇದು ನನ್ನ ಕಳಕಳಿಯ ಮನವಿ. ಅಭಿ ಏನಾದರೂ ತಪ್ಪು ಮಾಡಿದರೆ ನನಗೆ ಹೇಳು, ನಾನು ನೋಡಿಕೊಳ್ತೀನಿ. ಅಂಬರೀಶ್ ಎನ್ನುವ ಹೆಸರಿಗೆ ಯಾವತ್ತು ಧಕ್ಕೆ ತರಬೇಡ" ಎಂದು ಅವಿವಾ ಬಳಿ ಮಂಡಿಯೂರಿ ಕೇಳಿಕೊಂಡಿದ್ದರು.


Click it and Unblock the Notifications











