ಹಿರಿಯ ನಿರ್ದೇಶಕ ಎಟಿ ರಘು-ಛಾಯಾಗ್ರಾಹಕ ಬಸವರಾಜ್ಗೆ ರಾಜ್ಯೋತ್ಸವ ಪ್ರಶಸ್ತಿ
2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಪ್ರಕಟ ಮಾಡಿದ್ದು, 65 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಚಿತ್ರರಂಗದ ಕ್ಷೇತ್ರಕ್ಕೆ ಸೇರಿದ ಇಬ್ಬರು ಗಣ್ಯರಿಗೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಸೇರಿದ ಮೂವರು ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಿತ್ರರಂಗದಿಂದ ಹಿರಿಯ ನಿರ್ದೇಶಕ ಆಪಾಡಾಂಡ ತಿಮ್ಮಯ್ಯ ರಘು (ಎ.ಟಿ ರಘು-ಕೊಡಗು) ಹಾಗೂ ಛಾಯಾಗ್ರಾಹಕ ಬಿಎಸ್ ಬಸವರಾಜ್ (ತಮಕೂರು) ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿ ಕ್ಷೇತ್ರದಿಂದ ಶ್ರೀಮತಿ ಅನುಸೂಯಮ್ಮ (ಹಾಸನ), ಎಚ್ ಷಡಾಕ್ಷರಪ್ಪ (ದಾವಣಗೆರೆ) ಹಾಗೂ ತಿಪ್ಪೇಸ್ವಾಮಿ (ಚಿತ್ರದುರ್ಗ) ಅವರನ್ನು 2020ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಟಿ ರಘು ಯಾರು? ಅವರು ಕೊಡುಗೆ ಏನು? ಮುಂದೆ ಓದಿ.....

ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ನಿರ್ದೇಶಕ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಟಿ.ರಘು ಕಳೆದ 4 ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎಟಿ ರಘು ಅವರ ಎರಡು ಕಿಡ್ನಿಗಳು ವೈಪಲ್ಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದುಕೊಂಡಿದ್ದರು.

35ಕ್ಕೂ ಹೆಚ್ಚು ಚಿತ್ರ ಮಾಡಿದ್ದ ರಘು
ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು 1990ರಲ್ಲಿ 'ಅಜಯ್-ವಿಜಯ್' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. 'ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್', 'ಪುಟ್ಟ ಹೆಂಡ್ತಿ', 'ಮೈಸೂರು ಜಾಣ', 'ಮಂಡ್ಯದ ಗಂಡು', ಮಿಡಿದ ಹೃದಯಗಳು', 'ಅಂತಿಮ ತೀರ್ಪು', 'ನ್ಯಾಯಕ್ಕಾಗಿ ನಾನು', 'ಪದ್ಮವ್ಯೂಹ', 'ಸೂರ್ಯೋದಯ' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.

ಅಂಬರೀಶ್ ಜೊತೆ ಹೆಚ್ಚು ಸಿನಿಮಾ
ವಿಶೇಷ ಅಂದ್ರೆ, ಎ.ಟಿ.ರಘು ಅವರು ನಿರ್ದೇಶನ ಮಾಡಿರುವ ಬಹುಪಾಲು ಚಿತ್ರಗಳಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರೇ ನಾಯಕನಾಗಿದ್ದಾರೆ. 35 ಚಿತ್ರಗಳಲ್ಲಿ 20 ಸಿನಿಮಾ ಅಂಬರೀಶ್ ಜೊತೆಯೇ ಮಾಡಿದ್ದಾರೆ. ಅಂಬರೀಶ್ ಗೆ 'ಮಂಡ್ಯದ ಗಂಡು' ಎಂಬ ಚಿತ್ರ ಮಾಡಿದ್ದೇ ಈ ನಿರ್ದೇಶಕ. ನಂತರ ಅಂಬರೀಶ್ ಮಂಡ್ಯದ ಗಂಡು ಅಂತಾನೆ ಗುರುತಿಸಿಕೊಂಡರು.
Recommended Video

ರಂಗಭೂಮಿ ಕ್ಷೇತ್ರದಿಂದ ಮೂವರಿಗೆ ಪ್ರಶಸ್ತಿ
ರಂಗಭೂಮಿ ಕ್ಷೇತ್ರದಿಂದ ಶ್ರೀಮತಿ ಅನುಸೂಯಮ್ಮ (ಹಾಸನ), ಎಚ್ ಷಡಾಕ್ಷರಪ್ಪ (ದಾವಣಗೆರೆ) ಹಾಗೂ ತಿಪ್ಪೇಸ್ವಾಮಿ (ಚಿತ್ರದುರ್ಗ) ಅವರನ್ನು 2020ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ (ರಾಯಚೂರು), ಅನಂತ ತೆರೆದಾಳ (ಬೆಳಗಾವಿ), ಬಿವಿ ಶ್ರೀನಿವಾಸ್ (ಬೆಂಗಳೂರು ನಗರ), ಗಿರಿಜಾ ನಾರಾಯಣ (ಬೆಂಗಳೂರು ನಗರ) ಹಾಗೂ ಲಿಂಗಪ್ಪ ಶೇರಿಗಾರ ಕಟೀಲು (ದಕ್ಷಿಣ ಕನ್ನಡ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.


Click it and Unblock the Notifications











