ಸಿನಿಮಾದಲ್ಲಿ ನಟಿಸಲು ಅಧಿಕಾರಿಗಳಿಗೆ ನಿರ್ಬಂಧ ಸಲ್ಲ : ಅಂಬರೀಶ್
ದಾವಣಗೆರೆ : ಸರಕಾರಿ ಅಧಿಕಾರಿಗಳು ಚಲನಚಿತ್ರಗಳಲ್ಲಿ ನಟಿಸದಂತೆ ನಿರ್ಬಂಧ ಹೇರುವುದು ತರವಲ್ಲ ಎಂದು ಸಂಸತ್ ಸದಸ್ಯ ಹಾಗೂ ಚಿತ್ರನಟ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ. ಸರಕಾರಿ ಅಧಿಕಾರಿಗಳು ಚಲನಚಿತ್ರಗಳಲ್ಲಿ ನಟಿಸದಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರನಟ ಶಿವರಾಮು ಜಿಲ್ಲಾಧಿಕಾರಿಯಾಗಿರುವ ದಾವಣಗೆರೆಯಲ್ಲಿ ಏರ್ಪಡಿಸಲಾಗಿದ್ದ ತಮ್ಮ 49ನೇ ಜನ್ಮದಿನದ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅಂಬರೀಶ್ ಸೃಜನಶೀಲವಾದ ಕಲೆಗೆ ಯಾವುದೇ ನಿರ್ಬಂಧ ಇರಬಾರದು ಎಂದು ಹೇಳಿದರು.
ಅಂಬರೀಶ್ ಜತೆಗಿದ್ದ ವಿಷ್ಣುವರ್ಧನ್ ಕೂಡ ಅಂಬರೀಶ್ ಅವರ ಅಭಿಪ್ರಾಯವನ್ನು ಅನುಮೋದಿಸಿದರು. ಸರಕಾರಿ ಅಧಿಕಾರಿಗಳು ಚಿತ್ರಗಳಲ್ಲಿ ನಟಿಸಬೇಕೇ ಬೇಡವೇ ಎಂಬುದನ್ನು ಚಿತ್ರ ನೋಡುವ ಮಂದಿ ನಿರ್ಧರಿಸುತ್ತಾರೆ. ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದರು.
ಈ ಮಧ್ಯೆ ಐಎಎಸ್ ಅಧಿಕಾರಿ ಕಂ ನಾಯಕ ನಟ ಕೆ. ಶಿವರಾಮು ಅವರಿಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ, ಅವರ ಅಭಿಮಾನಿಗಳು ಪೋಸ್ಟ್ಕಾರ್ಡ್ ಚಳವಳಿಯನ್ನೇ ಆರಂಭಿಸಿದ್ದಾರೆ. ಈ ಸಂಬಂಧ ಅವರು ಸಾವಿರಾರು ಪತ್ರಗಳನ್ನು ಸರಕಾರಕ್ಕೂ ಬರೆದಿದ್ದಾರೆ.
ನಿಮಗೆ ಮತ್ತೊಂದು ವಿಷಯ ಗೊತ್ತೆ? ನಟ ಶಿವರಾಮು ಕೂಡ ಬಾಲ್ಯದಲ್ಲಿ 'ತಮಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ಕೊಡಿಸಿ ಎಂದು ಕೋರಿ ಪದ್ಮಭೂಷಣ ಡಾ. ರಾಜ್ಕುಮಾರ್ ಹಾಗೂ ಅಭಿನಯ ಶಾರದೆ ಜಯಂತಿ ಅವರಿಗೆ ಪತ್ರ ಬರೆಯುತ್ತಿದ್ದರಂತೆ" ಆದರೆ, ರಾಜ್ಕುಮಾರ್ ಅವರಾಗಲೀ, ಜಯಂತಿ ಅವರಾಗಲೀ ಶಿವರಾಮುಗೆ ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸಲಿಲ್ಲ ಎಂಬುದು ಬೇರೆ ಮಾತು.


Click it and Unblock the Notifications