Abhishek Ambareesh birthday: ಫ್ಯಾನ್ಸ್ ಜೊತೆ ಅಭಿಷೇಕ್ ಅಂಬರೀಶ್ ಸಿಂಪಲ್ ಬರ್ತ್ಡೇ
ಕನ್ನಡ ಸಿನಿಮಾದ ಹೆಸರಾಂತ ನಟ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಅವರಿಗೆ ಮಂಗಳವಾರ (ಅಕ್ಟೋಬರ್ 3) ರಂದು ಹುಟ್ಟುಹಬ್ಬದ ಸಂಭ್ರಮ. ಅಂಬರೀಶ್ ಅವರಂತೆಯೇ ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ನಟ ಅಭಿಷೇಕ್ ಅಂಬರೀಶ್ ಈ ಮೊದಲೇ ತಾವು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಿಂಪಲ್ ಆಗಿಯೇ ಬರ್ತ್ಡೇ ಸೆಲಬ್ರೆಟ್ ಮಾಡಿಕೊಂಡಿದ್ದಾರೆ. ರಾತ್ರಿಯಿಂದಲೇ ಅಭಿಷೇಕ್ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಸಿಹಿ ಹಂಚಿ, ಪರಸ್ಪರ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಬರ್ತ್ಡೇ
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ತಮ್ಮ ಹುಟ್ಟುಹಬ್ಬ ಸರಳವಾಗಿ ಇರಬೇಕು ಎಂದು ಹೇಳಿದ್ದರು. ಆದರೆ, ಅಭಿಮಾನಿಗಳು ಮನೆಯ ಬಳಿ ಹೋಗಿ ನಟನ ಹುಟ್ಟನ್ನು ಹಬ್ಬವಾಗಿಸಿದ್ದಾರೆ. ದಿವಂಗತ ನಟ ಅಂಬರೀಶ್ ಅವರ ಫೋಟೋಗೆ ಪೂಜೆ ಮಾಡಿ ಮನೆಯ ಬಳಿ ಬಂದ ಫ್ಯಾನ್ಸ್ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ತಾಯಿ, ಸಂಸದೆ ಸುಮಲತಾ ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯನ್ನು ಅದ್ಧೂರಿಯಾಗಿ ಆಯೋಜಿಸಿದ್ದ ಅಭಿಷೇಕ್, ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ತಿಳಿಸಿದ್ದರೂ ಕೂಡ. "ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದಿರಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಚಿಸಿದ್ದೇನೆ" ಎಂದು ಹೇಳಿದ್ದರು.
ಮುಂದುವರಿದು, "ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ ಆಶೀರ್ವಾದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ" ಎಂದು ಅಭಿಷೇಕ್ ಅಂಬರೀಶ್ ಬರೆದುಕೊಂಡಿದ್ದರು.

ಅಭಿಷೇಕ್ ಅಂಬರೀಶ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳು
ನಟ ಅಭಿಷೇಕ್ ಅಂಬರೀಶ್ 2019 ರಲ್ಲಿ ಬಿಡುಗಡೆಯಾದ 'ಅಮರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಸಿನಿಮಾ ಮೇಲೆ ಸಾಕಷ್ಟು ಹೋಪ್ ಇದೆ. ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಹುಟ್ಟುಹಬ್ಬದ ಹಿನ್ನೆಲೆ ಇಂದು ಬ್ಯಾಡ್ ಮ್ಯಾನರ್ಸ್ ಸಿನಿಮಾದ ಹಾಡು ಬಿಡುಗಡೆಯಾಗಲಿದೆ.
ಇನ್ನಿ, ಬ್ಯಾಡ್ ಮ್ಯಾನರ್ಸ್ ಜೊತೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಜೊತೆ ಕಾಳಿ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಳಿಗೆ ಪೈಲ್ವಾನ್ ನಿರ್ದೇಶಕ ಕೃಷ್ಣ ಅಭಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು, ಮದುವೆಯಾದ ನಂತರ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ಗೆ ಇದು ಮೊದಲ ಹುಟ್ಟುಹಬ್ಬವಾಗಿದ್ದು, ಜೋಡಿಗೆ ವಿಶೇಷ ದಿನವಾಗಿದೆ.


Click it and Unblock the Notifications











