"ಹಿಂಗೆ ಆಗ್ತಿದ್ರೆ, ಮುಂದೆ ಯಾರು ಹೆಣ್ಣು ಕೊಡಲ್ಲ ಅನ್ಸುತ್ತೆ": ಎಂಗೇಜ್ಮೆಂಟ್ ಸುದ್ದಿ ಬಗ್ಗೆ ಅಭಿ ಪ್ರತಿಕ್ರಿಯೆ!
ನಟ ಅಭಿಷೇಕ್ ಅಂಬರೀಶ್ ಮದುವೆ ಫಿಕ್ಸ್ ಆಗಿದೆಯಂತೆ, ಡಿಸೆಂಬರ್ 11ಕ್ಕೆ ಎಂಗೇಜ್ಮೆಂಟ್, ಅಮ್ಮ ನೋಡಿದ ಹುಡುಗಿಯನ್ನು ಅಭಿ ಕೈ ಹಿಡಿಯುತ್ತಿದ್ದಾರಂತೆ, ಹೀಗೆ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಅಭಿ ಹಾಗೂ ಸುಮಲತಾ ಅಂಬರೀಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್, ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗಶೇಖರ್ ನಿರ್ದೇಶನದ 'ಅಮರ್' ಸಿನಿಮಾ ಮೂಲಕ ಅಭಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸದ್ಯ 'ಕಾಳಿ' ಹಾಗೂ ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆಯೇ ಅಭಿ ಮದುವೆ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿಂದೆ ಕೂಡ ಇಂತಹ ಅಂತೆ ಕಂತೆ ಸುದ್ದಿಗಳು ಹರಿದಾಡಿದ್ದವು.
ಇಂದು ನಟ ಅಂಬರೀಶ್ 4ನೇ ವರ್ಷದ ಪುಣ್ಯಸ್ಮರಣೆ. ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ.

ಎಂಗೇಜ್ಮೆಂಟ್ ಎಲ್ಲಾ ಗಾಳಿಸುದ್ದಿ
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಎಂಗೇಜ್ಮೆಂಟ್ ರೂಮರ್ಸ್ ಬಗ್ಗೆ ಸ್ವತಃ ಅಭಿಷೇಕ್ TV9 ಸುದ್ದಿವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ. "ಹುಡುಗಿ ಯಾರು ಅಂತಲೂ ನೀವೇ ಹೇಳಬೇಕು, ಪ್ರತಿವರ್ಷ ಎಂಗೇಜ್ಮೆಂಟ್ ಮಾಡಿಸುತ್ತೀರಾ. ಹಿಂಗೆ ಆಗ್ತಿದ್ರೆ, ಮುಂದೆ ಯಾರು ಹೆಣ್ಣು ಕೊಡಲ್ಲ ಅನ್ಸುತ್ತೆ. ಎಂಗೇಜ್ಮೆಂಟ್ ಇನ್ನುವುದಿಲ್ಲ ಸುಳ್ಳು" ಎಂದು ಅಭಿ ತಮಾಷೆ ಮಾಡಿದ್ದಾರೆ.

ಎಲ್ಲಾ ನಿರ್ಧಾರ ಅಭಿಗೆ ಬಿಡ್ತೀನಿ
ಇನ್ನು ಅಭಿಷೇಕ್ ಎಂಗೇಜ್ಮೆಂಟ್ ಗಾಸಿಪ್ ಬಗ್ಗೆ ತಾಯಿ ಸುಮಲತಾ ಅಂಬರೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿವರ್ಷ ಇಂತಹ ಸುದ್ದಿ ನನಗೆ ನೀವು ಕೊಡುತ್ತಿದ್ದೀರಾ. ಒಳ್ಳೆ ವಿಷಯಗಳು ಆಗಲಿ. ಅದು ಆದಾಗ ಖಂಡಿತ ನಾನು ತಿಳಿಸುತ್ತೇನೆ. ಇನ್ನು ಮದುವೆ ಬಗ್ಗೆ ಏನೇ ನಿರ್ಧಾರ ಇದ್ದರೂ ಎಲ್ಲವನ್ನು ಅಭಿಗೆ ಬಿಡ್ತೀನಿ. ನನ್ನ ನಿರ್ಧಾರ ಅವನು ಅನುಸರಿಸಬೇಕು ಎಂದು ಇಲ್ಲ. ಅಂತಹ ಸಿಹಿಸುದ್ದಿ ಇದ್ದರೆ ನಾನೇ ತಿಳಿಸ್ತೀನಿ" ಎಂದಿದ್ದಾರೆ.

ಕುತೂಹಲ ಕೆರಳಿಸಿದ 'ಕಾಳಿ' ಚಿತ್ರ
'ಪೈಲ್ವಾನ್' ನಂತರ ನಿರ್ದೇಶಕ ಕೃಷ್ಣ ಅಭಿಷೇಕ್ ಅಂಬರೀಶ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಕಾಳಿ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಚಿತ್ರದಲ್ಲಿ ಹಳ್ಳಿ ಕಾಲೇಜು ಹುಡುಗನ ಪಾತ್ರದಲ್ಲಿ ಅಭಿ ನಟಿಸ್ತಿದ್ದು, 'ಕಾಂತಾರ' ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಕಾವೇರಿ ಗಲಾಟೆ ಹಿನ್ನಲೆಯಲ್ಲಿ ಈ ರೆಟ್ರೋ ಸಿನಿಮಾವನ್ನು ಕಟ್ಟಿಕೊಡಲಾಗುತ್ತಿದೆ. ನವೆಂಬರ್ 28ಕ್ಕೆ ಬಂಡೆ ಮಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.

4ನೇ ಚಿತ್ರಕ್ಕೂ ಅಭಿ ಗ್ರೀನ್ ಸಿಗ್ನಲ್
'ಅಮರ್' ನಂತರ ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿಷೇಕ್ ನಟಿಸ್ತಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿತ್ತು. ಇನ್ನು ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೂ ಅಭಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿದ್ದು ಮುಂದಿನ ವರ್ಷ ಸೆಟ್ಟೇರಲಿದೆ.


Click it and Unblock the Notifications











