'ಯೂಟ್ಯೂಬ್ ಸಿನಿಮಾ ವಿಮರ್ಶಕರ' ಮೇಲೆ ನಟ ಆದಿತ್ಯ ಗರಂ
ನಟ ಆದಿತ್ಯಗೆ ಬಹಳವೇ ಸಿಟ್ಟು ಬಂದಿದೆ. ಆದಿತ್ಯ ನಟನೆಯ ಹೊಸ ಸಿನಿಮಾದ ಬಗ್ಗೆ ಕೆಲವರು ವಿಮರ್ಶೆ ಮಾಡಿ ಯೂಟ್ಯೂಬ್ನಲ್ಲಿ ಪ್ರಕಟಿಸಿರುವುದು ಆದಿತ್ಯ ಅವರ ಸಿಟ್ಟಿಗೆ ಕಾರಣ.
ಆದಿತ್ಯ ನಟನೆಯ 'ಮುಂದುವರೆದ ಅಧ್ಯಾಯ' ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಮಾಮೂಲಿನಂತೆಯೇ ಕೆಲವು ಸಿನಿಪ್ರೇಮಿಗಳು ವಿಮರ್ಶೆ ಮಾಡಿದ್ದಾರೆ. ಕೆಲವು ಯೂಟ್ಯೂಬರ್ಗಳು ಸಹ ವಿಮರ್ಶೆ ಮಾಡಿ ಅವರಿಗೆ ಅನಿಸಿದಂತೆ ಸಿನಿಮಾ ಬಗ್ಗೆ ನಕಾರಾತ್ಮಕ ಅಂಶಗಳನ್ನು ವೀಕ್ಷಕರ ಮುಂದಿಟ್ಟಿದ್ದಾರೆ. ಇದು ಆದಿತ್ಯ ಅವರಿಗೆ ಸಿಟ್ಟು ತರಿಸಿದೆ.
ಇದೇ ಕಾರಣವಾಗಿ ಇಂದು ಫಿಲಂ ಚೇಂಬರ್ಗೆ ನಟ ಆದಿತ್ಯ ಹಾಗೂ 'ಮುಂದುವರೆದ ಅಧ್ಯಾಯ' ಚಿತ್ರತಂಡ ದೂರು ನೀಡಿದೆ. ಈ ಸಮಯದಲ್ಲಿ ಮಾತನಾಡಿದ ನಟ ಆದಿತ್ಯ, 'ಯೂಟ್ಯೂಬ್ ನಲ್ಲಿ ಕೆಲವರು ಕನ್ನಡ ಸಿನಿಮಾಗಳನ್ನು ಗುರಿಯಾಗಿಟ್ಟುಕೊಂಡು ನಕಾರಾತ್ಮಕವಾಗಿ ವಿಮರ್ಶೆ ಮಾಡುತ್ತಿದ್ದಾರೆ. ಹೀಗೆ ಯೂಟ್ಯೂಬ್ನಲ್ಲಿ ಮಾತನಾಡುತ್ತಿರುವವರಿಗೆ ಸಿನಿಮಾ ವಿಮರ್ಶೆ ಮಾಡಲು ಇರುವ ಅರ್ಹತೆ ಏನು? ಇವರ್ಯಾರೂ ಪತ್ರಕರ್ತರಲ್ಲ. ಕ್ಯಾಮೆರಾ ಮುಂದೆ ಕುಳಿತುಕೊಂಡು ಮಾಫಿಯಾ ನಡೆಸುತ್ತಿದ್ದಾರೆ' ಎಂದಿದ್ದಾರೆ ಆದಿತ್ಯ.

ಕೊರೊನಾ ಸಮಯದಲ್ಲಿ ಕನ್ನಡ ಸಿನಿಮಾರಂಗ ಎಷ್ಟು ಸಂಕಷ್ಟ ಅನುಭವಿಸಿದೆ. ಈಗಷ್ಟೆ ಚಿತ್ರಮಂದಿರಗಳು ತೆರೆದು ಸಿನಿಮಾ ಬಿಡುಗಡೆ ಆರಂಭವಾಗಿರುವ ಹೊತ್ತಿನಲ್ಲಿ ಇಂಥಹಾ ಕನ್ನಡಿಗರೇ, ಕನ್ನಡ ಸಿನಿಮಾದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಆದಿತ್ಯ.
'ಇದನ್ನು ತಡೆಯಬೇಕೆಂಬ ಉದ್ದೇಶದಿಂದ ಇಂದು ಫಿಲಂ ಚೇಂಬರ್ಗೆ ಬಂದು ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿದ್ದೇವೆ. 'ಇನ್ಮೇಲೆ ಕನ್ನಡ ಸಿನಿಮಾ ಬಗ್ಗೆ ಮಾತನಾಡುವ ಧಂ ಯಾರಿಗೂ ಇರಬಾರದು. ಇನ್ನು ಮುಂದೆ ಯೂಟ್ಯೂಬರ್ಗಳು ಸಿನಿಮಾ ವಿಮರ್ಶೆ ಮಾಡಬಾರದು. ಇದಕ್ಕೆ ಒಂದು ನಿಯಮ ಮಾಡಬೇಕು, ಇದಕ್ಕೆ ಕಡಿವಾಣ ಹಾಕಲೇಬೇಕು, ಯೂಟ್ಯೂಬ್ನಲ್ಲಿ ಕನ್ನಡ ಸಿನಿಮಾ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೆ ಅವರಿಗೆ ದಂಡ ಹಾಕಿ ಅವರನ್ನು ಶಿಕ್ಷೆಗೆ ಗುರಿಪಡಿಸಿ' ಎಂದಿದ್ದಾರೆ ನಟ ಆದಿತ್ಯ.
Recommended Video
ನಟ ಆದಿತ್ಯ ಅವರ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿವೆ.


Click it and Unblock the Notifications











