ದೇವರು ಒಳ್ಳೆಯವರನ್ನ ಯಾಕೆ ಇಷ್ಟು ಬೇಗ ಕರೆದುಕೊಳ್ಳುತ್ತಾನೆ: ನಾಗಾರ್ಜುನ್
ನಟ ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವಕ್ಕೆ ಮರುಳಾಗದವರಿಲ್ಲ. ಇದಕ್ಕೆ ಪರ ಭಾಷೆಯ ಸ್ಟಾರ್ ನಟರೂ ಸಹ ಹೊರತಲ್ಲ. ಅಪ್ಪು ಭೇಟಿ ಮಾಡಿದ ಅಷ್ಟು ಸ್ಟಾರ್ಗಳು ಪುನೀತ್ ಸಾವನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಗೆ ಏನೆ ಮಾಡಿದರು ಸಮಾಧಾನ ಆಗುತ್ತಿಲ್ಲ. ಈ ಕಹಿ ಸತ್ಯವನ್ನು ನಂಬಲೂ ಆಗುತ್ತಿಲ್ಲ. ಹಾಗಾಗಿ ಅಪ್ಪು ಮನೆಗೆ ಒಬ್ಬೊಬ್ಬರೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸದ್ಯ ತೆಲುಗು ಸ್ಟಾರ್ ನಟ ನಾಗಾರ್ಜನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿ ಪುನೀತ್ ಪತ್ನಿ ಮತ್ತು ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಪ್ರಭು, ಶಿವಕಾರ್ತಿಕೇಯನ್ ಬಳಿಕ ಬೆಂಗಳೂರಿಗೆ ಬಂದ ನಾಗಾರ್ಜುನ್!
ಅಪ್ಪು ಅಗಲಿಕೆಯನ್ನು ಯಾರಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇದೊಂದು ಕೆಟ್ಟ ಕನಸು. ಆದಷ್ಟು ಬೇಗ ಮುಗಿದು ಬಿಡಲಿ ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅಪ್ಪು ಎಲ್ಲರಿಗೂ ಅಚ್ಚು-ಮೆಚ್ಚು. ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಪಡೆಯಲು ಪರಭಾಷಾ ನಟರ ದಂಡೇ ಬೆಂಗಳೂರಿಗೆ ಆಗಮಿಸಿತ್ತು. ಈಗ ಅಪ್ಪು ಮಣ್ಣಲ್ಲಿ ಮಣ್ಣಾದ ಬಳಿಕವೂ ಪುನೀತ್ ಮೇಲಿನ ಪ್ರೀತಿಯಿಂದ ತಮಿಳು, ತೆಲುಗು ಚಿತ್ರರಂಗದ ತಾರೆಯರು ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ನಟ ನಾಗಾರ್ಜುನ್ ಬೆಂಗಳೂರಿಗೆ ಆಗಮಿಸಿದ್ದರು. ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಬಳಿಕ ನಾಗಾರ್ಜುನ್ ಅಪ್ಪು ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
"ಇದು ತುಂಬಾನೆ ಶಾಕಿಂಗ್ ವಿಚಾರ ಮತ್ತು ಹೃದಯ ಒಡೆದು ಹೋಗಿದೆ. ಪುನೀತ್ ಅವರು ಈ ರೀತಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಈಗಲೂ ಯೋಚಿಸಿದರೆ ಇದು ನಿಜವಾಗಲೂ ನಡೆದಿದೆಯಾ ಅನ್ನೋ ವಿಚಾರ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಏನು ಮಾತಾಡೋದು, ಶಿವಣ್ಣ ಬಳಿ ಏನು ಹೇಳಬೇಕು, ಮನೆಯವರಿಗೆ ಏನು ಹೇಳಬೇಕು ಅನ್ನೋದು ಅರ್ಥವೇ ಆಗಲಿಲ್ಲ. ಕಳೆದ ನಾಲ್ಕು ದಿನದಿಂದ ಪ್ರತಿಯೊಬ್ಬರೂ ಪುನೀತ್ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ, ಒಳ್ಳೆಯದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಆದ್ರೆ ಇಷ್ಟು ಒಳ್ಳೆಯ ಮನುಷ್ಯನನ್ನು ದೇವರು ಯಾಕೆ ಇಷ್ಟು ಬೇಗ ಕರೆದುಕೊಂಡ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಕರ್ನಾಟದ ಜನರಿಗೆ, ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ " ಎಂದು ನಾಗಾರ್ಜುನ್ ಪುನೀತ್ ರಾಜ್ಕುಮಾರ್ ಬಗ್ಗೆ ಭಾವುಕರಾಗಿ ಮಾತನಾಡಿದರು.

ಇನ್ನು ತಮಿಳು ನಟ ಪ್ರಭು ಮತ್ತು ಶಿವಕಾರ್ತಿಕೇಯನ್ ಕೂಡ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದರು. ಅವರೂ ಸಹ ಕುಟುಂಬಕ್ಕೆ ಸಾಂತ್ವನ ಹೇಳಿ, ಅಪ್ಪು ಅವರ ಸಾವನ್ನ ನಂಬಲು ಸಾಧ್ಯ ಆಗುತ್ತಿಲ್ಲ ಎನ್ನುವ ಭಾವುಕ ನುಡಿಗಳನ್ನು ಆಡಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ದಿವಂಗತ. ಪುನೀತ್ ರಾಜಕುಮಾರ್ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ವ್ಯಕ್ತಿತ್ವ. ಪ್ರತಿಯೊಬ್ಬರೂ ಕೂಡ ಸೆಳೆಯುವಂತಹ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ಹಾಗಾಗಿ ಅವರಿಗೆ ಲಕ್ಷಾಂತರ, ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೇವಲ ಅವರನ್ನು ತೆರೆಯ ಮೇಲೆ ನೋಡಿ ಮೆಚ್ಚಿಕೊಂಡು ದೇವರು ಎಂದು ಪೂಜಿಸುವ ಸಹಸ್ರಾರು ಅಭಿಮಾನಿಗಳಿದ್ದಾರೆ. ಇನ್ನು ಸಿನಿಮಾ ಇಂಡಸ್ಟ್ರಿ ಅಂತ ಬಂದಾಗ ಸಾಕಷ್ಟು ಜನ ಅಪ್ಪು ಅವರನ್ನು ಮಾದರಿಯಾಗಿ ಸ್ವೀಕರಿಸುತ್ತಾರೆ. ಇನ್ನು ಅವರನ್ನು ಅತಿ ಹೆಚ್ಚು ಪ್ರೀತಿಯಿಂದ ಕಾಣುತಿದ್ದರು. ಹಾಗಾಗಿಯೇ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲುದು ಎನ್ನುತ್ತಿದೆ ಚಿತ್ರರಂಗ.


Click it and Unblock the Notifications











