ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿ ಕುರಿತು ಹೇಳಿಕೆಗೆ ಬಿಸಿ ಪಾಟೀಲ್ ಪ್ರತಿಕ್ರಿಯೆ
ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಬೇಕಾ ಅಥವಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ರಾಜಕಾರಣಿ ಬಿ.ಸಿ ಪಾಟೀಲ್, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಖುಷಿ ಒಟಿಟಿಯಲ್ಲಿ ಅಥವಾ ಟಿವಿಯಲ್ಲಿ ಸಿಗಲ್ಲ ಎಂದು ಹೇಳಿದ್ದಾರೆ.
Recommended Video
ಇಂದು (ಜನವರಿ 12) ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ ಪಾಟೀಲ್, ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿಗೆ ಕುರಿತು ಹೇಳಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮಾತನ್ನು ಕೇಳಿದೆ. ಚಿತ್ರರಂಗ, ಕಲಾವಿದರು ಉಳಿಬೇಕು. ಒಟಿಟಿ ಏನು ಮಾರಕವಲ್ಲ. ಆಧುನಿಕ ಜಗತ್ತಿಗೆ ತಕ್ಕಹಾಗೆ ಬದಲಾವಣೆಯಾಗಬೇಕು ಎಂದಿದ್ದಾರೆ.

ಬಿಸಿ ಪಾಟೀಲ್ ಹೇಳಿಕೆ
'ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಖುಷಿ ಒಟಿಟಿಯಲ್ಲಿ ಸಿಗಲ್ಲ. ಒಟಿಟಿಯಲ್ಲಿ ನೋಡಿ ಶಿಳ್ಳೆ ಹೊಡೆಯಲು ಸಾಧ್ಯವಿಲ್ಲ. ನಿರ್ಮಾಪಕರು ಮನೆ-ಮಠ ಮಾರಿ ಸಿನಿಮಾ ಮಾಡಿರುತ್ತಾರೆ. ಕಲಾವಿದ ತನ್ನಲ್ಲಿದ್ದ ಸಂಪೂರ್ಣ ಶಕ್ತಿ ಹಾಕಿ ಸಿನಿಮಾ ಮಾಡುತ್ತಾರೆ. ಜನರ ಶಿಳ್ಳೆ, ಚಪ್ಪಾಳೆ ಮಧ್ಯೆ ಸಿನಿಮಾ ಇದ್ರೆ ಅದಕ್ಕೆ ಬೆಲೆ ಇರುತ್ತೆ. ಟಿವಿಯಲ್ಲಿ ಸಿನಿಮಾ ನೋಡ್ತಾ ಶಿಳ್ಳೆ ಹೊಡೆಯಲು ಸಾಧ್ಯಾನಾ? ಚಿತ್ರಮಂದಿರಗಳಲ್ಲಿ ಮನರಂಜನೆ ಇರಬೇಕು ಎಂದು ದರ್ಶನ್ ಹೇಳಿದ್ದಾರೆ ಎಂದಿದ್ದಾರೆ.

ಫೇಸ್ ಬುಕ್ ಲೈನ್ ನಲ್ಲಿ ದರ್ಶನ್ ಹೇಳಿದ್ದೇನು?
ಇತ್ತೀಚಿಗೆ ಫೇಸ್ಬುಕ್ ಲೈವ್ ಬಂದಿದ್ದ ದರ್ಶನ್, ಲೈವ್ ನಲ್ಲಿ ಮಾತನಾಡುತ್ತಾ ಮಾರ್ಕೆಟ್ ನಲ್ಲಿ, ಮದುವೆಗಳಲ್ಲಿ ಜನ ಸೇರುತ್ತಾರೆ. ಸ್ಕೂಲು-ಕಾಲೇಜುಗಳು ಸಹ ತೆರೆದಿವೆ. ಎಲ್ಲೆಡೆ ಜನ ಗುಂಪು ಸೇರುತ್ತಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ದರ್ಶನ್.

5ಜಿ ಬಗ್ಗೆ ದರ್ಶನ್ ಹೇಳಿದ್ದೇನು?
'ಸಿನಿಮಾ ಚಿತ್ರಮಂದಿರಗಳಿಗೆ ಶೇ.100 ಆಸನ ಭರ್ತಿಗೆ ಅವಕಾಶ ಯಾಕೆ ನೀಡುತ್ತಿಲ್ಲ ಎಂದರೆ, ಅಂಬಾನಿ 5ಜಿ ನೆಟ್ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನಿಸುತ್ತಿದೆ. 5ಜಿ ಓಡಬೇಕು ಎಂದರೆ ಒಟಿಟಿ ಸಿನಿಮಾಗಳು, ಆನ್ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಚಿತ್ರಮಂದಿರಗಳು ತೆರೆದು ಬಿಟ್ಟರೆ ಒಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ಕೆಲವು ದೊಡ್ಡ-ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸಿರಬಹುದು' ಎಂದು ದರ್ಶನ್ ಹೇಳಿದ್ದಾರೆ.

ಶೇ.100 ಅವಕಾಶ ಹಿಂಪಡೆದ ತಮಿಳುನಾಡು ಸರ್ಕಾರ
ಕೆಲವು ದಿನಗಳ ಹಿಂದಷ್ಟೆ ತಮಿಳುನಾಡು ಸರ್ಕಾರವು ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಆದೇಶ ಹೊರಡಿಸಿತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ತಕರಾರು ತೆಗೆದು, ಕೇಂದ್ರ ಸರ್ಕಾರ ನೀಡಿರುವ ಆದೇಶಗಳನ್ನೇ ರಾಜ್ಯ ಸರ್ಕಾರ ಪಾಲಿಸಬೇಕು, ತಮಿಳುನಾಡು ಸರ್ಕಾರ ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸೂಚಿಸಿತು. ಕೇಂದ್ರದ ಸೂಚನೆಯಂತೆ ಶೇ.100ಅವಕಾಶ ಹಿಂಪಡೆದಿದೆ.


Click it and Unblock the Notifications











