ದರ್ಶನ್ ಮಾಜಿ ಪಿಎ ಮಲ್ಲಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ ಅರ್ಜುನ್ ಸರ್ಜಾ
ನಟ ಅರ್ಜುನ್ ಸರ್ಜಾಗೆ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ್ ಮೋಸ ಮಾಡಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. 7 ವರ್ಷಗಳ ಹಿಂದೆ 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ ದರ್ಶನ್ ಪಿಎ ಆಗಿದ್ದ ಮಲ್ಲಿಕಾರ್ಜುನ್ ವಂಚಿಸಿದ್ದಾರೆ ಎಂದು ಅರ್ಜುನ್ ಸರ್ಜಾ ಆರೋಪಿಸಿದ್ದರು. ಅಂದಿನಿಂದ ಮಲ್ಲಿ ನಾಪತ್ತೆ ಆಗಿದ್ದಾರೆ.
ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ಸದ್ಯ ನಟ ಅರ್ಜುನ್ ಸರ್ಜಾ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. 7 ವರ್ಷಗಳಿಂದ ಮಲ್ಲಿ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡಿರುವ ಪರಿಣಾಮ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇದೀಗ ಉದ್ಘೋಷಣೆ ಪತ್ರ ಹೊರಡಿಸಿದೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಹಾಗೂ ಚಂದನ್ ನಟನೆಯ 'ಪ್ರೇಮ ಬರಹ' ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು.

'ಪ್ರೇಮ ಬರಹ' ಸಿನಿಮಾ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ಹಾಗೂ ಅರ್ಜುನ್ ಸರ್ಜಾ ನಡುವೆ ಕಿರಿಕ್ ಆಗಿತ್ತು. ನಟ ದರ್ಶನ್ ಪಿಎ ಆಗಿದ್ದ ಮಲ್ಲಿಕಾರ್ಜುನ್, ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಸಿನಿಮಾಗಳನ್ನು ವಿತರಣೆ ಮಾಡುತ್ತಿದ್ದರು. ಅದೇ ರೀತಿ 'ಪ್ರೇಮ ಬರಹ' ಚಿತ್ರದ ರೈಟ್ಸ್ ಕೊಂಡುಕೊಂಡಿದ್ದರು. ಬರೋಬ್ಬರಿ 1 ಕೋಟಿ ರೂ. ಕೊಡುವಂತೆ ಒಪ್ಪಂದ ಆಗಿತ್ತು. ಈ ಬಗ್ಗೆ ಸ್ವತಃ ಮಲ್ಲಿಕಾರ್ಜುನ್, ತಮ್ಮ ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಬುಕ್ಲೆಟ್ನಲ್ಲಿ ವಿತರಣೆಯ ಹಣದ ವಿಚಾರವನ್ನ ಬರೆದುಕೊಟ್ಟಿದ್ದರು. ಅದರ ಆಧಾರದಲ್ಲಿ ಅರ್ಜುನ್ ಸರ್ಜಾ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಕೆಲ ಸಿನಿಮಾಗಳನ್ನು ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು. ದರ್ಶನ್ ಆಪ್ತ ಎಂದು ಹೇಳಿಕೊಂಡು ಕೆಲವರ ಒಡನಾಟ ಬೆಳೆಸಿಕೊಂಡಿದ್ದರು. ಮಗಳಿಗಾಗಿ ಅರ್ಜುನ್ ಸರ್ಜಾ 'ಪ್ರೇಮಬರಹ' ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದರು. ಚಿತ್ರದ ಹಾಡೊಂದರಲ್ಲಿ ನಟ ದರ್ಶನ್ ಕೂಡ ಸರ್ಜಾ ಮನೆ ಹೀರೊಗಳ ಜೊತೆ ಹೆಜ್ಜೆ ಹಾಕಿದ್ದರು. ಮಲ್ಲಿಕಾರ್ಜುನ್ ಗಾಂಧಿನಗರದಲ್ಲಿ 11 ಕೋಟಿ ರೂ.ವರೆಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪವೂ ಇದೆ. ಖುದ್ದು ನಟ ದರ್ಶನ್ಗೂ 2 ಕೋಟಿ ರೂ. ವಂಚಿಸಿದ್ದಾರೆ ಎನ್ನಲಾಗಿತ್ತು.
ಮಲ್ಲಿಕಾರ್ಜುನ್ ದೋಖಾ ಪ್ರಕರಣದಲ್ಲಿ ಅರ್ಜುನ್ ಸರ್ಜಾ ಹಾಗೂ ಅವರ ಪರ ವಕೀಲರು ನ್ಯಾಯಲಯದ ಮೊರೆ ಹೋಗಿದ್ದರು. ಕಲಂ 138 ಎನ್.ಐ.ಆಕ್ಟ್ ಅಡಿಯಲ್ಲಿ ಒಂದು ಕೋಟಿ ವಸೂಲಾತಿಗಾಗಿ ಆರೋಪಿ ಮಲ್ಲಿಕಾರ್ಜುನ್ ವಿರುದ್ಧ 27-12-2018ರಲ್ಲಿ ಪ್ರಕರಣ ದಾಖಲೆ ಮಾಡಿದ್ರು. ಈಗ ಈ ಪ್ರಕರಣ ಮತ್ತೊಂದು ಹಂತಕ್ಕೆ ಹೋಗಿದೆ. ಮಲ್ಲಿಕಾರ್ಜುನ್ ವಿರುದ್ಧ ಎಸಿಎಂಎಂ ನ್ಯಾಯಾಲಯ ಪತ್ರಿಕಾ ಪ್ರಕಟಣೆಗೆ ಆರೋಪಿಗೆ ಉದ್ಘೋಷಣೆ ಪತ್ರವನ್ನ ಪ್ರಕಟಿಸಲು ಅನುಮತಿ ಕೊಟ್ಟಿದೆ. ಈ ಪತ್ರಿಕೆಯ ಪ್ರಕಟಣೆಯ ಬಳಿಕವೂ ಮಲ್ಲಿಕಾರ್ಜುನ್ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದರೆ ವಾರೆಂಟ್ ಜಾರಿ ಮಾಡುವಂತೆ ಆದೇಶ ನೀಡಿದೆ. ಈಗಾಗಲೇ ಪತ್ರಿಕಾ ಪ್ರಕಟನೆ ಕೂಡ ಆಗಿದೆ.
ಉತ್ತರ ಕರ್ನಾಟಕ ಭಾಗದ ಗದಗ್ ಜಿಲ್ಲೆಯವರಾದ ಮಲ್ಲಿಕಾರ್ಜುನ್ 2018ರಲ್ಲಿ ನಾಪತ್ತೆಯಾಗಿದ್ದರು. ಅರ್ಜುನ್ ಸರ್ಜಾ ತಂಡದವರು ಮಲ್ಲಿಕಾರ್ಜುನ್ ಪತ್ನಿ ಊರಿಗೆ ಹುಡುಕಿಕೊಂಡು ಹೋಗಿದ್ದರು. ಮಲ್ಲಿಕಾರ್ಜುನ್ ಪತ್ನಿ ತೇಜಶ್ವಿನಿ ನಮ್ಮ ಮನೆಗೂ ನನ್ನ ಪತಿ ಬಂದಿಲ್ಲ. ಇದೊಂದು ಪತ್ರ ಬರೆದು ಹೊರಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದರು.

"ಪ್ರೀತಿಯ ತೇಜಶ್ವಿನಿಗೆ.. ದಯವಿಟ್ಟು ನನ್ನನ್ನು ಕ್ಷಮಿಸು.. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕೆಂದುಕೊಂಡಿದ್ದೇನೆ. ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಮಸ್ಯೆಯಿಂದ ನಿನ್ನನ್ನು ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸು" ಎನ್ನುವುದು ಆ ಪತ್ರದ ಸಾರಾಂಶ.


Click it and Unblock the Notifications











