ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನಸಹಾಯ ಮಾಡಿದ ನಟ ಭುವನ್ ಪೊನ್ನಣ್ಣ
ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ವೀರ ಯೋಧ ಗುರು ಕುಟುಂಬದವರಿಗೆ ಇಂದು ಬಿಗ್ ಬಾಸ್ ಸ್ಪರ್ಧಿ, ನಟ ಭುವನ್ ಪೊನ್ನಪ್ಪ ಸಾಂತ್ವನ ಹೇಳಿದರು. ಇದೇ ವೇಳೆ ಭುವನ್ ಗುರು ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
ಭುವನ್ ಹುತಾತ್ಮ ಗುರು ಕುಟುಂಬಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಮದ್ದೂರಿನ ಗುರು ಅವರ ಸ್ವಗ್ರಾಮಕ್ಕೆ ತೆರಳಿದ ಭುವನ್, ತಮ್ಮ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಟರಾಗಿ ಅಥವಾ ಸಮಾಜದಲ್ಲಿ ಒಂದು ಹೆಸರು ಮಾಡಿದ ಮೇಲೆ ಇದು ನಮ್ಮ ಜವಾಬ್ದಾರಿ ಎಂದು ನನಗೆ ಅನಿಸುತ್ತೆ. ನಮ್ಮ ನಡುವೆ ಏನೇ ತೊಂದರೆ ಆದಾಗ ನಾವು ನಿಲ್ಲಬೇಕು. ನಾವು ಕೋಟಿಗಟ್ಟಲೆ ಸಂಭಾವನೆ ತೆಗೆದುಕೊಳ್ಳುತ್ತೇವೆ. ಆದರೆ, ಏನಾದರೂ ತೊಂದರೆಯಾದಾಗ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಬೆಂಬಲ ನೀಡಿ ಎಂದು ಹಾಕಿ ಬಿಡುತ್ತೇವೆ. ಯಾರೂ ಕೂಡ ಅಲ್ಲಿ ಹೋಗಿ ಅಲ್ಲಿನ ಪರಿಸ್ಥಿತಿ ಏನಿದೆ ಎಂದು ನೋಡಿ ಸಾಂತ್ವನ ಹೇಳುವುದು ಕಡಿಮೆ ಎಂದು ಹೇಳಿದರು.

ನಾನು ಕೊಡಗಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಕೊಡಗು ಯೋಧರ ನಾಡು. ನಮ್ಮ ಸಂಸಾರದಲ್ಲಿ ಸುಮಾರು ಜನ ಯೋಧರು ಇದ್ದಾರೆ. ಒಬ್ಬ ಯೋಧ ಕೆಲಸದಿಂದ ಬಂದು ರಜೆ ಮುಗಿಸಿಕೊಂಡು ವಾಪಸ್ ಹೋಗುವಾಗ ಅವರ ಪತ್ನಿ, ತಂದೆ-ತಾಯಿಗೆ ಎಷ್ಟು ಬೇಜಾರಾಗುತ್ತೆ ಎಂಬುದು ನಾನು ನೋಡಿದ್ದೇನೆ. ಹೀಗಿರುವಾಗ ಒಬ್ಬ ಮಗ ವಾಪಸೇ ಬರುವುದಿಲ್ಲ ಎಂದಾಗ ಅಪ್ಪ-ಅಮ್ಮ, ಪತ್ನಿಗೆ ಎಷ್ಟು ಬೇಜಾರಾಗಬಹುದು ಎಂದು ಯೋಚನೆ ಮಾಡಿ ನನಗೆ ತುಂಬಾ ದುಃಖವಾಗುತ್ತಿದೆ. ಗುರು ಅವರ ಪಾರ್ಥಿವ ಶರೀರ ಬಂದಾಗ ಅವರ ಪತ್ನಿ ಕಲಾವತಿ ಕಣ್ಣೀರು ಹಾಕುತ್ತಾ ಸೆಲ್ಯೂಟ್ ಮಾಡಿರುವ ವಿಡಿಯೋವನ್ನು ನೋಡಿದ್ದೇನೆ. ಆ ವಿಡಿಯೋ ನೋಡಿ ನನಗೆ ಕಣ್ಣೀರು ಬಂತು ಎಂದು ಭುವನ್ ಯೋಧ ತ್ಯಾಗವನ್ನು ನೆನೆದರು.


Click it and Unblock the Notifications











