ನಟ ಬಿರಾದರ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ: ಅಮಿತಾಬ್ ಬಚ್ಚನ್ ರಿಂದ ಶ್ಲಾಘನೆ
ಸ್ಯಾಂಡಲ್ ವುಡ್ ನ ಅದ್ಭುತ ಪ್ರತಿಭೆ ವೈಜನಾಥ್ ಬಿರಾದರ್. ಸಿನಿಮಾಗಳಲ್ಲಿ ಹೆಚ್ಚಾಗಿ ಕುಡುಕ, ಭಿಕ್ಷುಕ, ಬಡವನ ಪಾತ್ರಗಳಿಗೆ ಜೀವ ತುಂಬುತ್ತಾ ಚಿತ್ರಪ್ರಿಯರನ್ನು ರಂಜಿಸುತ್ತಿರುವ ಬಿರಾದರ್ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ.
ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬೋ ಕುದುರೆಯನೇರಿ' ಸಿನಿಮಾದಲ್ಲಿ ಬಿರಾದರ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ನಟನೆಗೆ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಿರಾದರ್ ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಕನ್ನಡದ ನಟನಿಗೆ ಈ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರವಾಗಿದೆ.
ಪ್ರಶಸ್ತಿ ಬಂದಿರುವ ಖುಷಿ ಒಂದೆಡೆಯಾದರೆ, ಬಿಗ್ ಬಿ ಅಮಿತಾಬ್ ಅವರಿಂದ ಸಿಕ್ಕ ಶ್ಲಾಘನೆ ಪ್ರಶಸ್ತಿ ಪಡೆದಷ್ಟೆ ಸಂತಸ ಮೂಡಿಸಿದೆ. ಬಿರಾದರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎನ್ನುವ ವಿಷಯ ತಿಳಿದ ಕೂಡಲೇ ಅಮಿತಾಬ್ ಬಚ್ಚನ್ ಕರೆ ಮಾಡಿದ್ದಾರೆ. 'ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ' ಎಂದು ಅಭಿನಂದಿಸಿದ್ದಾರೆ.

'ಕನಸೆಂಬೋ ಕುದುರೆಯನೇರಿ' ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ. 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಬಸಂತ್ ಕುಮಾರ್ ಪಾಟೀಲ ನಿರ್ಮಾಣದ ಈ ಚಿತ್ರದಲ್ಲಿ ವೈಜನಾಥ್ ಬಿರಾದರ್ ಹಾಗೂ ಉಮಾಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ.
ನಟ ಬಿರಾದರ್ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. '90 ಹೊಡಿ ಮನೀಗ್ ನಡಿ' ಬಿರಾದರ್ ನಟನೆಯ 500ನೇ ಸಿನಿಮಾವಿದು.


Click it and Unblock the Notifications











