ಫ್ಯಾನ್ಸ್ ಮೇಲೆ ನಟ ದರ್ಶನ್ ಗರಂ: ಖಡಕ್ ವಾರ್ನಿಂಗ್ ಕೊಟ್ಟ ದಾಸ!
ನಟ ದರ್ಶನ್ ಅವರ ಬಗ್ಗೆ ಹೇಳಬೇಕು ಅಂದರೆ ಅವರ ಅಭಿಮಾನಿಗಳ ಬಗ್ಗೆಯೂ ಹೇಳಲೇ ಬೇಕಾಗುತ್ತದೆ. ಅಭಿಮಾನಿಗಳು ನಟ ದರ್ಶನ್ ಅವರಿಗೆ ದೊಡ್ಡ ಶಕ್ತಿ. ಹಾಗಾಗಿಯೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದೆ ಕರೆಯುತ್ತಾರೆ.
ದರ್ಶನ್ ಅವರಿಗೆ ಮಾಸ್ ಫ್ಯಾನ್ ಫಾಲೋಯಿಂಗ್ ಇದೆ. ಸಹಸ್ರಾರು ಅಭಿಮಾನಿಗಳು ದರ್ಶನ್ ಅವರನ್ನು ಫಾಲೋ ಮಾಡ್ತಾರೆ. ಆದರೆ ಈಗ ದರ್ಶನ್ ಅವರು ಅಭಿಮಾನಿಗಳ ವಿರುದ್ಧ ಮುನಿಸಿಕೊಂಡಿದ್ದಾರೆ. ಅಭಿಮಾನಿಗಳ ಆಟಕ್ಕೆ ಬೇಸತ್ತ ದಾಸ, ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಹಿಂದೆಯೂ ಇದೆ ವಿಚಾರಕ್ಕೆ ನಟ ದರ್ಶನ್ ಅವರು ಗರಂ ಆಗಿದ್ದರು. ಅಭಿಮಾನಿಗಳಿಗೆ ಹಲವು ಬಾರಿ ಬುದ್ಧಿ ಹೇಳಿದ್ದಾರೆ. ಆದರೂ ಕೂಡ ದರ್ಶನ್ ಅಭಿಮಾನಿಗಳು ಮತ್ತದೇ ತಪ್ಪು ಮಾಡಿದ್ದಾರೆ. ಹಾಗಾಗಿ ದರ್ಶನ್ ಅವರು ಮತ್ತೆ ತಮ್ಮ ಫ್ಯಾನ್ಸ್ಗೆ ಬುದ್ಧಿ ಹೇಳಿದ್ದಾರೆ. ಅಷ್ಟಕ್ಕೂ ದರ್ಶನ್ ಅಭಿಮಾನಿಗಳು ಮಾಡಿದ್ದು ಏನು ಎನ್ನುವುದನ್ನು ಮುಂದೆ ಓದಿ.

ದರ್ಶನ್ ರಸ್ತೆಗಿಳಿದರೆ ಸಾಕು ಅಭಿಮಾನಿಗಳಿಗೆ ಹಬ್ಬ!
ನಟ ದರ್ಶನ್ ಹೊರಗೇ ಎಲ್ಲೇ ಕಾಣಿಸಿಕೊಂಡರು ಕೂಡ, ಅವರ ಒಂದಷ್ಟು ಅಭಿಮಾನಿಗಳು ಸುತ್ತುವರೆಯುತ್ತಾರೆ. ಸಾರ್ವಜನಿಕವಾಗಿ ದರ್ಶನ್ ಅವರು ಕಾಣಿಸಿಕೊಂಡರೇ ಸಾಕು, ಅವರು ಅಭಿಮಾನಿ ಸೇನೆ ಅವರನ್ನು ಮುತ್ತಿಕೊಂಡು ಬಿಡುತ್ತದೆ. ಹಾಗೇ ದರ್ಶನ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗಲೂ, ಯಾರ ಕಣ್ಣಿಗಾದರೂ ಬಿದ್ದರೇ ಸಾಕು ಅವರು ದಚ್ಚು ಅಭಿಮಾನಿಯಾಗಿದ್ದರೆ ಅಂತು ಕಥೆ ಮುಗಿದೆ ಹೋಯ್ತು. ದರ್ಶನ್ ಅವರು ಕಾರಿನ ಗ್ಲ್ಯಾಸ್ ಇಳಿಸಿ ವಿಶ್ ಮಾಡಬೇಕು, ಇಲ್ಲ ಫೋಟೋ ಕೊಡಬೇಕು, ಅಲ್ಲಿ ತನಕ ಅಭಿಮಾನಿಗಳು ಅವರನ್ನು ಹಿಂಬಾಲಿಸುತ್ತಾರೆ. ತಮ್ಮ ನೆಚ್ಚಿನ ಹೀರೋನನ್ನು ನೋಡಲು ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ.
ಕಾರು ಬೆನ್ನತ್ತಿದ ಫ್ಯಾನ್ಸ್: ಎಚ್ಚರಿಕೆ ಕೊಟ್ಟ ದರ್ಶನ್!
ಈ ಬಾರಿಯೂ ದರ್ಶನ್ ಅವರ ಅಭಿಮಾನಿಗಳು ಅದೇ ಕೆಲಸ ಮಾಡಿದ್ದಾರೆ. ದರ್ಶನ್ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ, ಅವರ ಕಾರನ್ನು ಹಿಂಬಾಲಿಸಿದ್ದಾರೆ. ಹಾಗಾಗಿ ನಟ ದರ್ಶನ್ ಅವರು ಕಾರು ಇಳಿದು ಬಂದು ಅಭಿಮಾನಿಗಳಿಗೆ ಎಚ್ಚರಿಗೆ ನೀಡಿದ್ದಾರೆ. "ಸಾವಿರ ಸಲಿ ಹೇಳಿದಿ, ಗಾಡಿಗಳಲ್ಲಿ ಬೇರೆಯವರಿಗೆ ತೊಂದರೆ ಮಾಡೋದಲ್ಲ. ನಿಮಗೆ ಮಜಾ ಕಣ್ರೋ, ಅದರಿಂದ ಬೇರೆಯವರಿಗೆ ತೊಂದರೆ ಆಗುತ್ತೆ. ತಪ್ಪು ಚಿನ್ನ ಅದೆಲ್ಲಾ ಮಾಡಬಾರದು." ಎಂದು ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ದರ್ಶನ್ ಬಳಿ ಕ್ಷಮೆ ಕೇಳಿದ ಅಭಿಮಾನಿಗಳು!
ನಟ ದರ್ಶನ್ ಅಭಿಮಾನಿಗಳು ಮಾಡಿದ್ದು ತಪ್ಪು ಎಂದು ಹೇಳಿದ ಕೂಡಲೇ, ಅಭಿಮಾನಿಗಳು ದರ್ಶನ್ ಬಳಿ ಕ್ಷಮೆ ಕೇಳಿದ್ದಾರೆ. ತಪ್ಪಾಯಿತು ಬಾಸ್, ಸಾರಿ ಬಾಸ್ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ದರ್ಶನ್ಗೆ ಜೈಕಾರ ಹಾಕಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿ ಹುಟ್ಟುಹಬ್ಬಕ್ಕೂ ಅಭಿಮಾನಿಗಳು ದರ್ಶನ್ ಅವರನ್ನು ಭೇಟಿ ಮಾಡುವ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿ ದರ್ಶನ್ ಅವರನ್ನು ನೋಡಿದಾಕ್ಷಣ ಅವರನ್ನು ಭೇಟಿ ಮಾಡಲು ಬೆನ್ನು ಹತ್ತಿದ್ದಾರೆ.

ದರ್ಶನ್ ಕೂಡ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು!
ಇನ್ನು ಹುಟ್ಟು ಹಬ್ಬದ ಬಳಿಕ ನಟ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ''ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆಯಿರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ. ನಿಮ್ಮ ಪ್ರೀತಿ- ಪ್ರೋತ್ಸಾಹಕ್ಕೆ ಸದಾ ಚಿರಋಣಿ'' ಎಂದಿದ್ದಾರೆ ದರ್ಶನ್. ಅಂದಹಾಗೆ ದರ್ಶನ್ ತಮ್ಮ ಅಭಿಮಾನಿಗಳನ್ನು ಗೌರವದಿಂದ ಸೆಲೆಬ್ರಿಟಿಗಳೆಂದು ಕರೆಯುತ್ತಾರೆ.


Click it and Unblock the Notifications











