Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಸಾವಿನ ಜೊತೆ ಭವಿಷ್ಯವೂ ಕೊನೆಯಾಗುತ್ತಿದೆ: ಮನವಿ ಮಾಡಿದ 'ಭಜರಂಗಿ 2' ನಟ
ಕನ್ನಡ ಸಿನಿಮಾ ಪ್ರೇಮಿಗಳು ದಿನಾಂಕ ಅಕ್ಟೋಬರ್ 29ನ್ನು ಮರೆಯಲು ಸಾಧ್ಯವಿಲ್ಲ. ಕನ್ನಡಿಗರ ಪ್ರೀತಿಯ ಅಪ್ಪು ನಿಧನವಾದ ದಿನವದು. ಬೆಳಿಗ್ಗೆ 'ಭಜರಂಗಿ 2' ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದ ಚಿತ್ರರಂಗ ಹಾಗೂ ಅಭಿಮಾನಿಗಳು ಮೊದಲ ಶೋ ಮುಗಿಯುವ ವೇಳೆಗೆ ಆಘಾತಕ್ಕೆ ಒಳಗಾಗಿಬಿಟ್ಟರು.
ಅಪ್ಪುವಿನ ನಿಧನದಿಂದ ಹಲವರು ಆಘಾತಕ್ಕೆ ಒಳಗಾಗಿದ್ದಾರೆ, ಆದರೆ 'ಭಜರಂಗಿ 2' ಚಿತ್ರತಂಡ ನೋವು, ದುಃಖದ ಜೊತೆಗೆ ದೊಡ್ಡ ನಷ್ಟವನ್ನೂ ಅನುಭವಿಸುತ್ತಿದೆ. 'ಭಜರಂಗಿ 2' ಸಿನಿಮಾದ ಮೊದಲ ಶೋ ಮುಗಿಯುವ ವೇಳೆಗೆ ಪುನೀತ್ ಆಸ್ಪತ್ರೆ ಸೇರಿ ಆಗಿತ್ತು. ಅದಾದ ಬಳಿಕ ಆ ದಿನದ ಎಲ್ಲ ಶೋಗಳನ್ನು ರಾಜ್ಯದಾದ್ಯಂತ ಸಿನಿಮಾ ಮಂದಿರಗಳು ರದ್ದು ಮಾಡಿದವು.
ಮಾರನೇಯ ದಿನ ಪುನಃ ಶೋ ಆರಂಭವಾಯಿತಾದರೂ ಪುನೀತ್ ಅಗಲಿಕೆಯ ದುಃಖದಲ್ಲಿದ್ದ ಅಭಿಮಾನಿಗಳು ಚಿತ್ರಮಂದಿರದ ಕಡೆ ಕಾಲಿಡಲಿಲ್ಲ. ಸಿನಿಮಾ ಬಗ್ಗೆ ಎಲ್ಲೂ ಚರ್ಚೆಯೂ ಆಗಲಿಲ್ಲ. ಇದೀಗ ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬಂದಿದೆಯಾದರೂ ಸಿನಿಮಾದ ಬಗ್ಗೆ ಸಣ್ಣ ಸುದ್ದಿಯೂ ಇಲ್ಲ. ಚಿತ್ರತಂಡ ಸಹ ಪ್ರಚಾರ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಭವಿಷ್ಯ ಮುಗಿಯಿತು ಎನಿಸುತ್ತಿದೆ: ಚೆಲುವರಾಜ್
'ಭಜರಂಗಿ 2'ನಲ್ಲಿ ಪಾತ್ರ ಮಾಡಿದ್ದ ನಟ-ನಟಿಯರು, ತಂತ್ರಜ್ಞರು ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ತಮ್ಮ ಮೂರು ವರ್ಷದ ಶ್ರಮಕ್ಕೆ ಪ್ರತಿಫಲ ಸಿಗುತ್ತದೆಂಬ ಆಸೆ ಅವರಲ್ಲಿತ್ತು ಆದರೆ ಅದೆಲ್ಲ ಮಣ್ಣಾಗಿದೆ. 'ಭಜರಂಗಿ 2' ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಚೆಲುವರಾಜ್ ಈ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಕಣ್ಣೀರು ಸುರಿಸುತ್ತಾ, ''ನಮ್ಮ ಭವಿಷ್ಯ ಮುಗಿದು ಹೋಯಿತು ಎನಿಸುತ್ತಿದೆ'' ಎಂದಿದ್ದಾರೆ.
ನಮ್ಮ ಸಿನಿಮಾ ಕೈಬಿಡಬೇಡಿ: ಚೆಲುವರಾಜ್ ಮನವಿ
''ಭಜರಂಗಿ 2' ಸಿನಿಮಾ ಮೂರು ವರ್ಷದ ಶ್ರಮದ ಫಲ. ಸಾವಿರಾರು ಮಂದಿ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡಿದ ಯಾರಿಗೂ ಯಾವ ರೀತಿಯ ಪ್ರತಿಕ್ರಿಯೆಯೂ ಸಿಗುತ್ತಿಲ್ಲ. ನಮ್ಮ ಭವಿಷ್ಯ ಇಲ್ಲಿಗೇ ಕೊನೆಯಾಯ್ತೇನೊ ಎಂದೆನಿಸುತ್ತಿದೆ. ದಯವಿಟ್ಟು ನಮ್ಮ ತಂಡದ ಕೈಹಿಡಿಯಿರಿ, 'ಭಜರಂಗಿ 2' ಸಿನಿಮಾವನ್ನು ಕೈಬಿಡಬೇಡಿ. ನಮ್ಮ ಬದುಕು ಈ ಸಿನಿಮಾ ಮೇಲೆ ನಿಂತಿದೆ. ನೀವು ಕೈಬಿಟ್ಟರೆ ನಮ್ಮ ಜೀವನವನೇ ಮುಗಿದು ಹೋಗುತ್ತದೆ'' ಎಂದು ಚೆಲುವರಾಜ್ ಮನವಿ ಮಾಡಿದ್ದಾರೆ.
ಚೆಲುವರಾಜ್ ನಟನೆ ಮೆಚ್ಚಿದ್ದ ಶಿವಣ್ಣ
ಚೆಲುವರಾಜ್ 'ಭಜರಂಗಿ 2' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಚೆಲುವರಾಜ್ ನಟನೆಯ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ಕೇಳಿಬಂದಿದ್ದವು. ಸಿನಿಮಾ ಬಿಡುಗಡೆಗೆ ಮುನ್ನಾ ಸ್ವತಃ ಶಿವರಾಜ್ ಕುಮಾರ್, ''ಚೆಲುವರಾಜ್ ಅದ್ಭುತವಾಗಿ ನಟಿಸಿದ್ದಾರೆ, ಅವರ ನಟನೆ ನೋಡಿ ನನಗೇ ಭಯವಾಯ್ತು'' ಎಂದಿದ್ದರು. ಚೆಲುವರಾಜ್ ಸಹ ಈ 'ಭಜರಂಗಿ 2' ಸಿನಿಮಾದ ತಮ್ಮ ವೃತ್ತಿ ಜೀವನಕ್ಕೆ ತಿರುವು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅಪ್ಪು ನಿಧನದಿಂದ ಅವರ ನಿರೀಕ್ಷೆಗಳೆಲ್ಲ ಪಲ್ಲಟವಾಗಿದೆ.
'ಭಜರಂಗಿ 2' ಸಿನಿಮಾ ಬಿಡುಗಡೆ ದಿನವೇ ಅಪ್ಪು ನಿಧನ
ಶಿವರಾಜ್ ಕುಮಾರ್, ಭಾವನಾ, ಶ್ರುತಿ, ಲೋಕಿ ಇನ್ನೂ ಕೆಲವು ಪ್ರಮುಖ ನಟರು ನಟಿಸಿರುವ 'ಭಜರಂಗಿ 2' ಸಿನಿಮಾವನ್ನು ಹರ್ಷ ನಿರ್ದೇಶಿಸಿದ್ದು, ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಸಿನಿಮಾವು ಹಲವು ಅಡೆ-ತಡೆಗಳನ್ನು ಎದುರಿಸಿ ಬಿಡುಗಡೆ ಆಗಿತ್ತು. ಸಿನಿಮಾ ಪ್ರಾರಂಭವಾಗಿ ಮೂರು ವರ್ಷಗಳ ನಂತರ ಸಿನಿಮಾ ಬಿಡುಗಡೆ ಆಯ್ತು. ಆದರೆ ಬಿಡುಗಡೆ ಆದ ದಿನವೇ ಅಪ್ಪು ನಿಧನ ಹೊಂದಿದ ಕಾರಣ ಸಿನಿಮಾಕ್ಕೆ ಜನರೇ ಇಲ್ಲದಂತಾದರು.