ವಿಚಾರಣೆ ಮುಗಿಸಿದ ಚೇತನ್: 'ನನ್ನ ಹೋರಾಟ ಜಾತಿ ವಿರುದ್ಧವಲ್ಲ, ವ್ಯವಸ್ಥೆ ವಿರುದ್ಧ'
ಬ್ರಾಹ್ಮಣ ಸಮುದಾಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು ಎಂಬ ಆರೋಪದಲ್ಲಿ ಬಸವನಗುಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟ-ಸಾಮಾಜಿಕ ಹೋರಾಟಗಾರ ಚೇತನ್ಗೆ ನೋಟಿಸ್ ನೀಡಿದ್ದರು.
Recommended Video
ಪೊಲೀಸರ ನೋಟಿಸ್ ಹಿನ್ನೆಲೆ ಬುಧವಾರ ಬಸವನಗುಡಿ ಠಾಣೆಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ವಿಚಾರಣೆಯಲ್ಲಿದ್ದ ಚೇತನ್ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದು, ತಮ್ಮ ಪೋಸ್ಟ್ಗಳನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ಮುಗಿಸಿ ಹೊರಬಂದ ಚೇತನ್ ಮಾಧ್ಯಮದವರು ಜೊತೆ ಮಾತನಾಡಿ ''ಮನುಷ್ಯ-ಮನುಷ್ಯರ ನಡುವೆ ಭೇದ-ಭಾವ ಬೇಕಾಗಿಲ್ಲ, ಅಸಮಾನತೆ ಬೇಕಾಗಿಲ್ಲ. ಅಂಬೇಡ್ಕರ್ ತೋರಿಸಿಕೊಟ್ಟಿರುವ ಮಾರ್ಗದಲ್ಲಿ ನಾವು ಹೋರಾಟ ಮುಂದುವರಿಸುತ್ತೇವೆ'' ಎಂದಿದ್ದಾರೆ. ಮುಂದೆ ಓದಿ...

ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ
''ನಮ್ಮ ಹೋರಾಟ ಯಾವುದೇ ಜಾತಿ-ಜನಾಂಗದ ವಿರುದ್ಧವಲ್ಲ. ಭೇದ-ಭಾವದ ವ್ಯವಸ್ಥೆ ವಿರುದ್ಧ. ಸಮಾನತೆ, ನ್ಯಾಯಕ್ಕಾಗಿ ನಮ್ಮ ಹೋರಾಟ. ತಮ್ಮ ಶ್ರೇಷ್ಠತೆ ಪ್ರದರ್ಶಿಸಲು ಹಾಗೂ ಅಸಮಾನತೆ ಉಳಿಸಲು ಇಂತಹ ದೂರು ದಾಖಲಿಸಿದ್ದಾರೆ. ಅದರ ವಿರುದ್ಧ ನಾವು ನಮ್ಮ ನ್ಯಾಯಸಮ್ಮತ ಹೋರಾಟ ಮುಂದುವರಿಸುತ್ತೇವೆ'' ಎಂದು ತಿಳಿಸಿದರು.

ನನ್ನ ಹೇಳಿಕೆಯಿಂದ ಹಿಂದೆ ಸರಿಯಲ್ಲ
ಇನ್ನು ಬ್ರಾಹ್ಮಣರನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿದೆ, ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಚೇತನ್ ''ಇದು ಸುಳ್ಳು, ನಾನು ಯಾವ ಜಾತಿಯವರ ವಿರುದ್ಧ ಹೋರಾಟ ಮಾಡ್ತಿಲ್ಲ. ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ, ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ'' ಎಂದು ಹೇಳಿದರು.

ರಕ್ಷಿತ್ ಶೆಟ್ಟಿ ನನ್ನ ವಿರುದ್ಧ ಏನೂ ಹೇಳಿಲ್ಲ
ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರ ಬಗ್ಗೆ ಉತ್ತರಿಸಿದ ಚೇತನ್ ''ರಕ್ಷಿತ್ ನನ್ನ ವಿರುದ್ಧ ಏನೂ ಹೇಳಿಲ್ಲ. ಅವರು ಹೇಳೋಕೆ ಖಂಡಿತ ಹಕ್ಕಿದೆ. ಅವರು ಹೇಳಿದ್ರಲ್ಲಿ ಏನಾದರೂ ಸರಿ ಎನಿಸಿದರೆ ತಿದ್ದುಕೊಳ್ಳುತ್ತೇವೆ'' ಎಂದರು. ಈ ಹಿಂದೆ ಚೇತನ್ ಪೋಸ್ಟ್ವೊಂದಕ್ಕೆ ಪ್ರತಿಕ್ರಿಯಿಸಿದ್ದ ರಕ್ಷಿತ್ ಶೆಟ್ಟಿ, ''ಚೇತನ್ ನಟನೆ ಇಷ್ಟವಾಗುತ್ತದೆ, ಆದರೆ ನಿಮ್ಮ ಮನಸ್ಥಿತಿ ಸರಿಪಡಿಸಿಕೊಳ್ಳಿ'' ಎಂದಿದ್ದರು.

ಸಿನಿಮಾದವರು ಜಾಸ್ತಿ ಮಾತಾಡಲಿ
''ಸಿನಿಮಾದವರು ಜಾಸ್ತಿ ಮಾತಾಡಲಿ. ಜಾತಿ ವ್ಯವಸ್ಥೆ ಬಗ್ಗೆ ಹೇಳಿಕೆ ಕೊಡಲಿ. ಸಿನಿಮಾ ಇಂಡಸ್ಟ್ರಿಯಲ್ಲಿ ಭೇದ-ಭಾವದ ಬಗ್ಗೆ ಪ್ರಶ್ನಿಸಲಿ. ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ. ಸ್ಟಾರ್ ಸಂಸ್ಕೃತಿ ಬೆಳೆಸುವುದು, ಸ್ಟಾರ್ಗಳಿಂದ ಬೆದರಿಕೆ ಹಾಕುವುದು ಬಿಡಲಿ, ಸಿನಿಮಾ ಹಿಟ್ ಆಗುವುದು ನಿರ್ದೇಶಕ-ಬರಹಗಾರರಿಂದ. ಕಾರ್ಮಿಕರ, ತಂತ್ರಜ್ಞರ ಕಷ್ಟಕ್ಕೆ ಸ್ಪಂದಿಸಲಿ'' ಎಂದು ಚೇತನ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











