ನಟ ಚೇತನ್ರನ್ನು ಅಮೆರಿಕಾಗೆ ಗಡಿಪಾರು ಮಾಡಲು ಸಿದ್ಧತೆ!
ಕನ್ನಡದ ನಟ ಆದಿನಗಳು ಚೇತನ್ ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಅವರು ನ್ಯಾಯಾಧೀಶರ ಕುರಿತಾಗಿ ಮಾಡಿದ ಒಂದು ಟ್ವೀಟ್ನಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇದೀಗ ಚೇತನ್ ವಿಚಾರದಲ್ಲಿ ಮತ್ತೊಂದು ರೋಚಕ ಸುದ್ದಿ ಹೊರ ಬಂದಿದೆ.
ನಟ ಚೇತನ್ ಅವರನ್ನು ಗಡಿಪಾರು ಮಾಡಲು ಯೋಜನೆ ನಡೆದಿದೆ. ಈ ಹಿಂದೆ ನಟ ಚೇತನ್ ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ನಟ ಚೇತನ್ ಅವರನ್ನು ಗಡಿಪಾರು ಮಾಡಬೇಕು ಎನ್ನುವ ಬಗ್ಗೆ ಬಸವನಗುಡಿ ಪೊಲೀಸ್ ಠಾಣೆಯಿಂದ ವರಿಯನ್ನು ಡಿಜಿಪಿ ಕಚೇರಿಗೆ ಸಲ್ಲಿಸಲಾಗಿತ್ತು. ನಟ ಚೇತನ್ ಭಾರತೀಯ ಪೌರತ್ವ ಹೊಂದಿಲ್ಲ. ಚೇತನ್ ಅಮೆರಿಕಾದ ಪೌರತ್ವ ಹೊಂದಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದು ಸಮಾಜದ ಶಾಂತಿ ಕದಡುತ್ತಿದ್ದಾರೆ. ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಬಸವನಗುಡಿ ಪೊಲೀಸ್ ಠಾಣೆಯಿಂದ ಡಿಜಿಪಿ ಕಚೇರಿಯ ಮೂಲಕ ಗೃಹ ಮಂತ್ರಿ ಕಛೇರಿಯ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದೆ. ಅಮೆರಿಕದ ಪೌರತ್ವ ಹೊಂದಿರುವ ನಟ ಚೇತನ್ ಅವರನ್ನು ಗಡಿಪಾರು ಮಾಡಬೇಕೆನ್ನುವ ಫೈಲನ್ನು ಪೊಲೀಸರು ಸಿದ್ಧಪಡಿಸಿದರು. ಈ ಪತ್ರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಗೃಹ ಸಚಿವರು ಆಗಲಿ, ಎಡಿಜಿಪಿ ಪ್ರತಾಪ್ ರೆಡ್ಡಿ ಅವರಾಗಲಿ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ.

ನಟ ಚೇತನ್ಗೆ ಈ ಬಗ್ಗೆ ಮಾಹಿತಿ ಇಲ್ಲ!
ಈ ಬಗ್ಗೆ ಫಿಲ್ಮಿ ಬೀಟ್ ಜೊತೆಗೆ ಮಾತನಾಡಿದ ನಟ ಚೇತನ್, ಅವರಿಗೆ ಈ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದಿದ್ದಾರೆ. "ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ ಅಪ್ಪ, ಅಮ್ಮ ಅಮೆರಿಕಾದಲ್ಲಿ ಇದ್ದಾರೆ. ನಾನು ಅಲ್ಲಿ ಹೋಗುತ್ತಿಲ್ಲ. ನಾನು ಇಲ್ಲೆ ಇದ್ದು ನನ್ನ ಹೋರಾಟ ಮುಂದುವರೆಸುತ್ತೇನೆ. ನನ್ನ ವಕೀಲರ ಕಡೆಯಿಂದ ನನಗೆ ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ನನಗೂ ಯಾವುದೇ ಸುಳಿವು ಇಲ್ಲ" ಎಂದಿದ್ದಾರೆ.


Click it and Unblock the Notifications











