ಜನ ಕಾಲ್ನಡಿಗೆಯಲ್ಲಿ, ನಾಯಕರು ಕಾರಿನಲ್ಲಿ: ಮೇಕೆದಾಟು ಪಾದಯಾತ್ರೆಗೆ ಚೇತನ್ ವಿರೋಧ
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ 'ಮೇಕೆದಾಟು ಪಾದಯಾತ್ರೆ'ಗೆ ಚಿತ್ರರಂಗ ಬೆಂಬಲ ಸೂಚಿಸಿದೆ. ಆದರೆ ನಟ ಚೇತನ್ ಅಹಿಂಸ ಮೇಕೆದಾಟು ಯೋಜನೆಯನ್ನು ಹಾಗೂ ಮೇಕೆದಾಟು ಪಾದಯಾತ್ರೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಬರೆದುಕೊಂಡಿರುವ ನಟ ಚೇತನ್ ಅಹಿಂಸ, ''ಇಂದು ಮೇಕೆದಾಟವಿಗೆ ಹೋಗುವ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 9,000 ಕೋಟಿ ರೂಪಾಯಿಯ ವಿನಾಶಕಾರಿ ಅಣೆಕಟ್ಟು ಯೋಜನೆಯ ಪರವಾಗಿ ನಡೆಯುತ್ತಿದ್ದ ಪಾದಯಾತ್ರೆಯನ್ನು ಕಂಡೆ. ಹಲವಾರು ಜನರು ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳೆಲ್ಲಾ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ಜನರಿಗಷ್ಟೇ ಇದು 'ಪಾದ - ಯಾತ್ರೆ', ನೇತಾರಿಗೆ ಇದು 'ಕಾರ್-ಯಾತ್ರೆ'' ಎಂದು ಟೀಕಿಸಿದ್ದಾರೆ.
ಮೇಕೆದಾಟುವಿನ ಬಳಿ ಅಣೆಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ನಟ ಚೇತನ್, ಅಣೆಕಟ್ಟೆ ಕಟ್ಟುವುದರಿಂದ ಗುತ್ತಿಗೆದಾರರಿಗೆ ಲಾಭವಾಗುತ್ತದೆ, ರಾಜಕಾರಣಿಗಳಿಗೆ ಲಾಭವಾಗುತ್ತದೆಯೇ ಹೊರತು. ಜನರಿಗೆ ಅಣೆಕಟ್ಟೆಯಿಂದ ಲಾಭವಾಗುವುದಿಲ್ಲ. ಜನರಿಗೆ ನೀರು ಕೊಡಬೇಕು ಎಂಬುದೇ ನಿಮ್ಮ ಉದ್ದೇಶವಾಗಿದ್ದರೆ ಬೆಂಗಳೂರು ಹಾಗೂ ಅದರ ಸುತ್ತ ಮುತ್ತ ಇರುವ ಕೆರೆಗಳನ್ನು, ಕುಂಟೆಗಳ್ನು ತುಂಬಿಸಿ, ಮಳೆ ನೀರು ಸಂಗ್ರಹಕ್ಕೆ ಆದ್ಯತೆ ಕೊಡಿ, ಸಣ್ಣ-ಸಣ್ಣ ಚೆಕ್ ಡ್ಯಾಂಗಳನ್ನು ಕಟ್ಟಿ ಅದರ ಮೂಲಕ ನೀರು ಕೊಡಿ'' ಎಂದಿದ್ದಾರೆ.

''ಮೇಕೆದಾಟು ಎಂಬುದು ಬಹಳ ಸುಂದರವಾದ ಜಾಗ ಅಣೆಕಟ್ಟೆ ನಿರ್ಮಾಣ ಮಾಡಿ ಈ ಜಾಗವನ್ನು ಹಾಳು ಮಾಡಬೇಡಿ. ರಾಜಸ್ಥಾನದಂಥ ಮರಳುಗಾಡಿನಲ್ಲಿಯೇ ರಾಜೇಂದ್ರ ಸಿಂಗ್ ಎಂಬ ವ್ಯಕ್ತಿ ಮಳೆಯ ನೀರು ಬಳಸಿ ಸಾವಿರಾರು ಹಳ್ಳಿಗಳಿಗೆ ನೀರೊದಗಿಸಿದ್ದಾರೆ ಆ ಮಾದರಿಯನ್ನು ನೀವು ಇಲ್ಲಿ ತನ್ನಿ. ರಾಜ್ಯದ ಮೂರೂ ರಾಜಕೀಯ ಪಕ್ಷಗಳಿಗೆ ಮೇಕೆದಾಟು ಬಗ್ಗೆ ಕಾಳಜಿ ಇಲ್ಲ. ಪರಿಸರದ ಬಗ್ಗೆ ಕಾಳಜಿ ಇಲ್ಲ. ಈ ಸುಂದರವಾದ ಮೇಕೆದಾಟು ಪ್ರದೇಶವನ್ನು ಅಣೆಕಟ್ಟೆ ಕಟ್ಟುವ ಮೂಲಕ ಹಾಳು ಮಾಡಲು ಹೊರಟಿವೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಚೇತನ್.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿವೆ. ನಿನ್ನೆ (ಜನವರಿ 09) ರಂದು ಪಾದಯಾತ್ರೆ ಪ್ರಾರಂಭವಾಗಿದೆ. ಮೇಕೆದಾಟಿನಲ್ಲಿ ಪ್ರಾರಂಭವಾಗಿರುವ ಪಾದಯಾತ್ರೆ ಹತ್ತು ದಿನದಲ್ಲಿ ಬೆಂಗಳೂರು ತಲುಪಲಿದೆ. ಪಾದಯಾತ್ರೆಯ ನೇತೃತ್ವವನ್ನು ಡಿ.ಕೆ.ಶಿವಕುಮಾರ್ ಹೊತ್ತಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಪಾದಯಾತ್ರೆಗೆ ಬೆಂಬಲ ಸೂಚಿಸಿವೆ.


Click it and Unblock the Notifications











