ಅಭಿಮಾನಿಯಾಗಿ ಪರಿಚಯವಾಗಿದ್ದ ಧನ್ಯಾ, ಧನಂಜಯ್ ಬಾಳಿಗೆ ಬಂದಿದ್ದೇಗೆ? ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ
ನಟ ಧನಂಜಯ್ ಹಾಗೂ ಧನ್ಯತಾ ಮದುವೆ ದಿನ ಹತ್ತಿರವಾಗುತ್ತಿದೆ. ಮದುವೆಗೆ ತಮ್ಮ ಆಪ್ತರನ್ನೆಲ್ಲಾ ಧನಂಜಯ್ ಆಹ್ವಾನಿಸುತ್ತಿದ್ದಾರೆ. ರಾಜಕೀಯ ಮುಖಂಡರು, ಸ್ವಾಮಿಜಿಗಳು, ಸಿನಿಮಾ ತಾರೆಯರು ಹೀಗೆ ಸಾಕಷ್ಟು ಜನರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಭಾವಿ ಪತ್ನಿ ಜೊತೆ ಸುದ್ದಿಗೋಷ್ಠಿ ನಡೆಸಿ ಇದೀಗ ಧನಂಜಯ್ ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 15 ಹಾಗೂ 16ರಂದು ಧನು ಹಾಗೂ ಧನ್ಯ ಮದುವೆ ನಡೆಯಲಿದೆ. ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ವೇದಿಕೆ ಸಿದ್ಧವಾಗುತ್ತಿದೆ. ಆಮಂತ್ರಣ ನೀಡುವುದರ ಜೊತೆಗೆ ಮದುವೆ ತಯಾರಿ ನಡೆಸಿದ್ದಾರೆ. ವೃತ್ತಿಯಲ್ಲಿ ಧನ್ಯತಾ ವೈದ್ಯರು. ಪ್ರಸೂತಿ ತಜ್ಞರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಿಂಪ್ಲಿಸಿಟಿ, ವೃತ್ತಿಧರ್ಮ ಬಹಳ ಇಷ್ಟವಾಯಿತು. ಅವರೊಟ್ಟಿಗೆ ಜೀವನ ಪೂರ್ತಿ ಇರಬೇಕು ಎಂದು ಮದುವೆ ಆಗುತ್ತಿದ್ದೇನೆ ಎಂದು ಧನು ಹೇಳಿದ್ದಾರೆ.

ಧನ್ಯತಾ ಜೊತೆಗಿನ ಪರಿಚಯದ ಬಗ್ಗೆ ನಟ ಧನಂಜಯ್ ಮಾತನಾಡಿದ್ದಾರೆ. ಮನಸ್ಸಿಗೆ ಇಷ್ಟ ಆಗುವವರು ಸಿಕ್ಕರೆ ಮದುವೆ ಆಗ್ತೀನಿ ಎನ್ನುತ್ತಿದ್ದೆ. ಇವರನ್ನು ನೋಡಿದಾಗ ಹಾಗೆ ಅನ್ನಿಸಿತು. ಮೊದಲಿಗೆ ಒಬ್ಬ ಅಭಿಮಾನಿ ಆಗಿ ಧನ್ಯತಾ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಇನ್ನು ಓದುತ್ತಿದ್ದರು. ಜಯನಗರ 4ನೇ ಬ್ಲಾಕ್ನಲ್ಲಿ ಮೊದಲಿಗೆ ಭೇಟಿ ಆಗಿದ್ದೆವು. ಅವತ್ತು ಉತ್ತರ ಕರ್ನಾಟಕ ಹೋಟೆಲ್ನಲ್ಲಿ ಊಟ ಮಾಡಿಸಿ ಮಾತನಾಡಿಸಿ ಕಳುಹಿಸಿದ್ದೆ ಎಂದು ಧನಂಜಯ್ ನೆನಪಿಸಿಕೊಂಡಿದ್ದಾರೆ.
ಅಂದಿನ ಆ ಭೇಟಿ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡುತ್ತಿದ್ದರು. ನನ್ನ ಸಿನಿಮಾ ಬಿಡುಗಡೆ ಆದಾಗ, ಪ್ರಶಸ್ತಿ ಬಂದಾಗ ಕಂಗ್ರಾಟ್ಸ್ ಹೇಳುತ್ತಿದ್ದರು. ನಾನು "ಚೆನ್ನಾಗಿದ್ದೀನಿ ಡಾಕ್ಟ್ರೇ" ಎಂದು ರಿಪ್ಲೇ ಸುಮ್ಮನಾಗುತ್ತಿದ್ದೆ. ವರ್ಷದ ಹಿಂದೆ ಮತ್ತೆ ಭೇಟಿ ಮಾಡೋಣ ಅಂತ ಅನ್ನಿಸಿ ಭೇಟಿ ಮಾಡಿದ್ದೆ. ಆ ಬಳಿಕ ಜರ್ನಿ ಶುರುವಾಯಿತು. ಬಳಿಕ ಸ್ನೇಹಿತರಿಗೆ ಪರಿಚಯ ಮಾಡಿಸಿದೆ. ಅವ್ರು ನಮ್ಮ ತಂದೆ ತಾಯಿಗೆ ಪರಿಚಯಿಸಿದ್ರು ಎಂದು ಧನಂಜಯ್ ಲವ್ ಸ್ಟೋರಿ ಹೇಳಿದ್ದಾರೆ.
ನಮ್ಮ ತಂದೆ ನನ್ನ ಹಿಂದೆ ಬಿದ್ರು. ಅವರ ಮನೆಯಲ್ಲಿ ಮಾತನಾಡಬೇಕು ಅಂದ್ರು. ಹಾಗೆ ಮದುವೆವರೆಗೂ ಬಂದು ನಿಂತಿದೆ. ನಮ್ಮ ಅಜ್ಜಿಗೆ ಧನ್ಯಾ ಅವರನ್ನು ಭೇಟಿ ಮಾಡಿಸಿದ್ದೆ. ಅದು ಖುಷಿ ಇದೆ. ಈಗ ಅವರು ಇಲ್ಲ ಎಂದು ಧನಂಜಯ್ ಹೇಳಿದ್ದಾರೆ. ಧನ್ಯತಾ ಮಾತನಾಡಿ "ಭೇಟಿಯಾದ ಬಳಿಕ ಅವರ ಆಲೋಚನೆ ರೀತಿ ಬಹಳ ಇಷ್ಟ ಆಯಿತು, ನಮ್ಮಿಬ್ಬರದ್ದು ಒಂದೇ ರೀತಿ ಇದೆ. ಧನಂಜಯ್ ಸಿಂಪ್ಲಿಟಿಸಿ ನನಗಿಷ್ಟ" ಎಂದಿದ್ದಾರೆ.

ಧನಂಜಯ್ ನನಗೆ ಹತ್ತಿರವಾದಂತೆ ಅವರ ಕುಟುಂಬ ಸದಸ್ಯರು ನನಗೆ ಹತ್ತಿರವಾದರು. ನಾನು ಸಿನಿಮಾಗಳಿಂದ ಕೊಂಚ ದೂರ. ಕಾರಣ ನನ್ನ ವೃತ್ತಿ ಅಂಥಾದ್ದು. ಇಷ್ಟು ದಿನ ಅಷ್ಟೇನು ಸಿನಿಮಾಗಳು ನೋಡಿರಲಿಲ್ಲ. ಈಗ ನೋಡುತ್ತಿದ್ದೇನೆ. ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನನಗೆ ಬಹಳ ಇಷ್ಟ. ಪಾಸಿಟಿವ್, ನೆಗೆಟಿವ್ ಎರಡೂ ಪಾತ್ರಗಳನ್ನು ಚೆನ್ನಾಗಿ ಮಾಡ್ತಾರೆ. ನೆಗೆಟಿವ್ ಪಾತ್ರದಲ್ಲಿರುವ ಕ್ರೂರತೆಯನ್ನು ಒಬ್ಬ ನಟನಾಗಿ ಚೆನ್ನಾಗಿ ನಟಿಸಿ ತೋರಿಸುತ್ತಾರೆ ಎಂದು ಧನ್ಯತಾ ಹೇಳಿಕೊಂಡಿದ್ದಾರೆ.
ಸಿಂಪಲ್ ಆಗಿ ಮದುವೆ ಆಗೋಣ ಎಂದುಕೊಂಡೆ. ಆಮೇಲೆ ಸುಮ್ಮನೆ ಅದಕ್ಕೆ ಏನೆನೋ ಪ್ರಶ್ನೆಗಳು ಬರುತ್ತವೆ. ಮದುವೆ ಅಂದರೆ ಸಂಭ್ರಮ. ಹಾಗಾಗಿ ಸಂಭ್ರಮವಾಗಿರಲಿ ಎಂದು ನಿರ್ಧರಿಸಿದೆ. ಸಿಂಪಲ್ ಆಗಿ ಮದುವೆ ಆಗಿದ್ದರೆ ಇಂತಹ ಒಳ್ಳೆ ಅನುಭವ ಆಗುತ್ತಿರಲಿಲ್ಲ. ಜನರ ಪ್ರೀತಿ ಮಿಸ್ ಮಾಡಿಕೊಳ್ಳುತ್ತಿದ್ದೆ ಎನಿಸುತ್ತದೆ. ಎಲ್ಲರೂ ಈಗಲೇ ಮದುವೆಗೆ ಹಾರೈಸುತ್ತಿರುವುದು ಬಹಳ ಖುಷಿಯಿದೆ ಎಂದು ಧನಂಜಯ್ ಹೇಳಿದ್ದಾರೆ.


Click it and Unblock the Notifications











