"ಈಗ ನಾವಿಬ್ಬರು ಹಾಳಾಗ್ತೀವಿ": ಅಂದು ದರ್ಶನ್ಗೆ ಸುದೀಪ್ ಈ ಮಾತು ಹೇಳಿದ್ಯಾಕೆ?
ಚಾಲೆಂಜಿಂಗ್ ದರ್ಶನ್.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳು. ದೊಡ್ಡ ಅಭಿಮಾನಿ ಬಳಗ ಇರುವ ಕಲಾವಿದರು. ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗ ಬಂದ ಇವರಿಬ್ಬರು ಮುಂದೆ ಒಳ್ಳೆ ಸ್ನೇಹಿತರಾದರು. ಆದರೆ ಅದೊಂದು ದಿನ ಯಾರು ನಿರೀಕ್ಷೆ ಮಾಡಿರದ ರೀತಿಯಲ್ಲಿ ಇಬ್ಬರ ಸ್ನೇಹ ಮುರಿದು ಬಿದ್ದಿತ್ತು. ಇವರಿಬ್ಬರು ಒಟ್ಟಿಗೆ ಸೇರಿ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಸಮಯದಲ್ಲಿ ಸೆರೆ ಹಿಡಿದಿದ್ದ ವಿಡಿಯೋವೊಂದು ಸದ್ಯ ಫುಲ್ ವೈರಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಸ್ನೇಹ ಎಂದಾಕ್ಷಣ ನೆನಪಾಗುತ್ತಿದ್ದದ್ದು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್. ಅವರಿಬ್ಬರ ನಂತರ ಅದೇ ರೀತಿಯಯಲ್ಲಿ ಆಪ್ತಮಿತ್ರರಾಗಿದ್ದ ಸೂಪರ್ ಸ್ಟಾರ್ಗಳು ದರ್ಶನ್ ಹಾಗೂ ಸುದೀಪ್. ಕುಚಿಕು ಗೆಳೆಯರನ್ನು ನೋಡಿ ಅಭಿಮಾನಿಗಳು ಕೂಡ ಖುಷಿಪಡುತ್ತಿದ್ದರು. ಸಾಕಷ್ಟು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ ಸೇರಿ ಊರೂರು ಸುತ್ತಾಡುತ್ತಿದ್ದರು. ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು. ಆದರೆ ಇವರ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಅಂದು ನಟ ದರ್ಶನ್ ಮಾಡಿದ್ದ ಅದೊಂದು ಟ್ವೀಟ್ ಕನ್ನಡ ಚಿತ್ರರಂಗಕ್ಕೆ ಶಾಕ್ ಕೊಟ್ಟಿತ್ತು.
ಇವತ್ತಿಗೂ ಇವರಿಬ್ಬರು ಒಂದಾಗಬೇಕು ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಆಸೆ. ಆದರೆ ಅದು ಯಾವಾಗ ಈಡೇರುತ್ತದೋ ಗೊತ್ತಿಲ್ಲ. ಸುದೀಪ್ ಹಾಗೂ ದರ್ಶನ್ ಒಟ್ಟಿಗೆ ಇರುವ ಸಾಕಷ್ಟು ಫೋಟೊಗಳು, ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ. ಈಗ ಅಂಥದ್ದೇ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ಬೈಕ್ ಏರಿ ಸುದೀಪ್ -ದರ್ಶನ್ ಜಾರಿ ರೈಡ್
ನಟ ದರ್ಶನ್ ಹಾಗೂ ಸುದೀಪ್ ಇಬ್ಬರಿಗೂ ಬೈಕ್ ಕ್ರೇಜ್ ಜಾಸ್ತಿ. ಬಿಡುವಿನ ವೇಳೆಯಲ್ಲಿ ಬೈಕ್ ಏರಿ ಊರೂರು ಸುತ್ತಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಇಬ್ಬರು ಸ್ನೇಹಿತರ ಜೊತೆ ಬೈಕ್ ರೈಡ್ ಹೋಗಿರೋದು ಅಲ್ಲಿ ತಮಾಷೆ ಮಾಡುತ್ತಾ ಎಂಜಾಯ್ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ನಟರಾದ ಆರ್ಮುಗ ರವಿಶಂಕರ್ ಹಾಗೂ ಚಿರಂಜೀವಿ ಸರ್ಜಾ ಕೂಡ ಗ್ಯಾಂಗ್ನಲ್ಲಿ ಇದ್ದಾರೆ.

"ನಾವಿಬ್ಬರು ಸೇರಿ ಹಾಳಾಗುತ್ತೀವಿ": ಸುದೀಪ್
ಸ್ನೇಹಿತರೆಲ್ಲಾ ಜಾಲಿಯಾಗಿ ಎಂಜಾಯ್ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆರ್ಮುಗ ರವಿಶಂಕರ್ ಹಾಡು ಹಾಡಿ ರಂಜಿಸಿದ್ದಾರೆ. "ಹಾಳಾಗಿರುವವರನ್ನು ಹಾಳು ಮಾಡಲು ಕೆಲವು ಹಾಳಾಗಿರುವವರಿಂದ ಮಾತ್ರ ಸಾಧ್ಯ" ಎಂದು ಸುದೀಪ್ ಹೇಳುವುದು, ನಾವು ಚಿತ್ರರಂಗದಲ್ಲಿ ಇಲ್ಲಿವರೆಗೂ ಬಂದಿದ್ವೀನಿ ಎಂದು ದರ್ಶನ್ ಹೇಳಿದಾಗ, ಹೆಂಗಿದ್ರು ಇಷ್ಟುಜನ ಹಾಳಾಗಿದ್ದೀವಿ, ಈಗ ನಾವಿಬ್ಬರು ಸೇರಿ ಹಾಳಾಗುತ್ತೀವಿ ಎಂದು ಸುದೀಪ್ ಹೇಳಿದ್ದಾರೆ. ಅಭಿಮಾನಿಯೊಬ್ಬರು ಈ ಹಳೇ ವಿಡಿಯೋವನ್ನು ಶೇರ್ ಮಾಡಿದ್ದು ವೈರಲ್ ಆಗಿದೆ.

ಶಾಕ್ ಕೊಟ್ಟಿತ್ತು ದರ್ಶನ್ ಟ್ವೀಟ್
2017 ಮಾರ್ಚ್ 17. ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಮರೆಯಲಾಗದ ದಿನ. ಅಂದು ಸಂಜೆ ನಟ ದರ್ಶನ್ ಒಂದು ಟ್ವೀಟ್ ಮಾಡಿದ್ದರು. "ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ದರ್ಶನ್ ಟ್ವೀಟ್ ಮಾಡಿ ಸುದೀಪ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡಿದ್ದರು.

ದರ್ಶನ್ ಮನಸ್ಸು ಬದಲಾಗಲಿಲ್ಲ
ಸುದೀಪ್ ಹಾಗೂ ದರ್ಶನ್ ದೂರಾಗಲು ಕಾರಣ ಏನು ಎನ್ನುವುದು ಇನ್ನು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೆ ಅಂದು ದರ್ಶನ್ ಟ್ವೀಟ್ ತಮ್ಮಿಬ್ಬರ ಸ್ನೇಹಕ್ಕೆ ತೆರೆ ಎಳೆದರು. ಸುದೀಪ್ ಮಾತ್ರ ಆ ನಂತರ ಕೂಡ ದರ್ಶನ್ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. ಸ್ನೇಹದ ಹಸ್ತ ಚಾಚಿದ್ದರು. ಆದರೆ ದರ್ಶನ್ ಮಾತ್ರ ಮನಸು ಬದಲಿಸಲೇ ಇಲ್ಲ. ಇವತ್ತಿಗೂ ಇಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಲೇ ಇದ್ದಾರೆ.


Click it and Unblock the Notifications











