ಜಮೀರ್ ಮನೆಯಲ್ಲಿ ದರ್ಶನ್, ಇಫ್ತಾರ್ ಕೂಟದಲ್ಲಿ ಭಾಗಿ: ಭಾವೈಕ್ಯತೆ ಮೆರೆದ ನಟ
ನಟ ದರ್ಶನ್, ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಜಮೀರ್ ಅಹ್ಮದ್, ಅವರ ಪುತ್ರ ಜೈದ್ ಖಾನ್ ಸೇರಿದಂತೆ ಇನ್ನೂ ಕೆಲವರು ಒಟ್ಟಿಗೆ ಸೇರಿ ಇಫ್ತಾರ್ ಕೂಟ ಮಾಡಿದ್ದಾರೆ. ಇಫ್ತಾರ್ ಕೂಟದ ವಿಡಿಯೋವನ್ನು, ಕೆಲವು ಚಿತ್ರಗಳನ್ನು ಜಮೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ರಿಗೆ ದೊಡ್ಡ ಹೂಗುಚ್ಛ ನೀಡಿ ಸ್ವಾಗತಿಸಿದ ಜಮೀರ್, ಬಳಿಕ ಅವರಿಗೆ ಶಾಲು, ಟೋಪಿ ಹಾಕಿ, ಸಂಪ್ರದಾಯದಂತೆ ಎಲ್ಲರೂ ನೆಲ ಹಾಸಿನ ಮೇಲೆ ಕುಳಿತು ಭೋಜನ ಸವಿದಿದ್ದಾರೆ.
Recommended Video


ಜಮೀರ್, ದರ್ಶನ್ ಹಲ ವರ್ಷಗಳಿಂದಲೂ ಆತ್ಮೀಯ ಗೆಳೆಯರಾಗಿದ್ದು, ಬಹುತೇಕ ಪ್ರತಿ ವರ್ಷ ಜಮೀರ್ ಆಯೋಜಿಸುವ ಇಫ್ತಾರ್ ಕೂಟದಲ್ಲಿ ದರ್ಶನ್ ಭಾಗವಹಿಸುತ್ತಾರೆ.
ಇದೀಗ ರಾಜ್ಯದಲ್ಲಿ ಧರ್ಮದ ವಿಷಯವಾಗಿ ಬಹಳ ಸೂಕ್ಷ್ಮ ಪರಿಸ್ಥಿತಿ ಇದೆ. ಧರ್ಮ ಭಾವೈಕ್ಯತೆಯ ಮಾತುಗಳನ್ನಾಡುವುದು ಸಹ ಧರ್ಮ ದ್ರೋಹ, ದೇಶ ದ್ರೋಹ ಎಂದು ಹಣೆಪಟ್ಟಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹಾ ಸಮಯದಲ್ಲಿ ಗೆಳೆತನಕ್ಕೆ ಬೆಲೆ ಕೊಟ್ಟು ದರ್ಶನ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆ. ಇಂಥಹಾ ಸೂಕ್ಷ್ಮ ಸಮಯದಲ್ಲಿ ಧರ್ಮ ಭಾವೈಕ್ಯತೆ ಸಾರುವ ಕಾರ್ಯ ಮಾಡಿದ ದರ್ಶನ್ ಅಭಿನಂದನಾರ್ಹರು.

ದರ್ಶನ್ ಪ್ರತಿ ವರ್ಷವೂ ತಪ್ಪದೆ ಮುಸ್ಲಿಂ ಹಬ್ಬಗಳಿಗೆ ಶುಭಾಶಯಗಳನ್ನು ಕೋರುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಹಿಂದು ಹಬ್ಬಗಳಿಗೂ ತಪ್ಪದೆ ಅಭಿಮಾನಿಗಳಿಗೆ ಶುಭಾಶಯ ಹೇಳುತ್ತಾರೆ.
ಇನ್ನು ಮಾಜಿ ಸಚಿವ ಜಮೀರ್ ಪುತ್ರ ಸಹ ನಟನಾಗಲು ಸಜ್ಜಾಗಿದ್ದು, ಅವರ ನಟನೆಯ ಮೊದಲ ಸಿನಿಮಾ 'ಬನಾರಸ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ವಾರಣಾಸಿಯಲ್ಲಿ ಚಿತ್ರೀಕರಣಗೊಂಡಿದ್ದು, ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ.
ಇನ್ನು ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಈ ವರ್ಷಾಂತ್ಯಕ್ಕೆ ಮುನ್ನಾ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವು ಶಿಕ್ಷಣ ವ್ಯವಸ್ಥೆಯ ಕತೆಯನ್ನು ಒಳಗೊಂಡಿರಲಿದೆ.


Click it and Unblock the Notifications











