ಮತ್ತೊಂದು ಆಡಿಯೋ ಬಾಂಬ್: ಪದೇ ಪದೇ ದರ್ಶನ್ಗೆ ಆಡಿಯೋ ಕಂಟಕ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಾ ಮತ್ತೊಂದು ವಿವಾದ ಸುತ್ತಿಕೊಂಡಿದೆ. ನಟ ದರ್ಶನ್ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಆಡಿಯೋವೊಂದು ಹರಿದಾಡುತ್ತಿದೆ. ಆ ಮೂಲಕ ನಟ ದರ್ಶನ್ಗೆ ಮತ್ತೊಂದು ಆಡಿಯೋ ಕಂಟಕವಾಗಿ ಪರಿಣಮಿಸಿದೆ.
Recommended Video
ನಿರ್ಮಾಪಕ ಭರತ್ ಎರಡು ವರ್ಷಗಳ ಹಿಂದೆ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಅನ್ನುವ ಸಿನಿಮಾ ಶುರು ಮಾಡಿದ್ದರು. ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್ ತಡವಾಗಿತ್ತು. ಚಿತ್ರದಲ್ಲಿ ಧ್ರುವನ್ (ಸೂರಜ್) ಹೀರೊ ಆಗಿ ನಟಿಸಬೇಕಿತ್ತು. ಅಂದ ಹಾಗೆ ಧ್ರುವನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪ್ನಲ್ಲಿ ಗುರ್ತಿಸಿಕೊಂಡಿದ್ದರು. ಇದೇ ಕಾರಣಕ್ಕೆ ಯುವನಟ ಧ್ರುವನ್, ದರ್ಶನ್ ಅವರಿಂದ ನಿರ್ಮಾಪಕ ಭರತ್ಗೆ ಕರೆ ಮಾಡಿಸಿ ಮಾತನಾಡಿಸಿದ್ದಾರೆ. ಆ ಸಮಯದಲ್ಲಿ ನಟ ದರ್ಶನ್, ನಿರ್ಮಾಪಕ ಭರತ್ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬೆದರಿಕೆ ಪ್ರಕರಣ ಸಂಬಂಧ ಆಡಿಯೋವೊಂದು ವೈರಲ್ ಆಗಿದ್ದು, "ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೆ ಕಾಣಿಸದಂತೆ ಮಾಡಿಬಿಡ್ತೀನಿ ಹುಷಾರಾಗಿರು." ಎಂದು ಆಡಿಯೋದಲ್ಲಿ ಮಾತನಾಡಿರುವುದು ದಾಖಲಾಗಿದೆ. ಆ ಧ್ವನಿ ನಟ ದರ್ಶನ್ ಅವರ ಧ್ವನಿಯನ್ನು ಹೋಲುತ್ತಿದೆ. ಇನ್ನು ಫಿಲ್ಮಿ ಬೀಟ್ ಜೊತೆ ಮಾತನಾಡಿರುವ ಯುವನಟ ಧ್ರುವನ್ "ನಿರ್ಮಾಪಕ ಭರತ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ದರ್ಶನ್ ಅವರು ಭರತ್ಗೆ ಯಾವುದೇ ಬೆದರಿಕೆ ಹಾಕಿಲ್ಲ. ಭರತ್ ಬಳಿ ಇರುವುದು ಫೇಕ್ ಆಡಿಯೋ, ಅದರಲ್ಲಿರುವುದು ದರ್ಶನ್ ಅವರ ಧ್ವನಿಯಲ್ಲ" ಎಂದಿದ್ದಾರೆ. ಹಾಗಾಗಿ ಆ ಆಡಿಯೋ ಭಾರೀ ಗೊಂದಲಕ್ಕೆ ಕಾರಣವಾಗಿದೆ.

ಮತ್ತೆ ಆಡಿಯೋ ಕಂಟಕ!
ನಟ ದರ್ಶನ್ ಮಾತನಾಡಿರುವ ಆಡಿಯೋ ಎಂದು ಕೇಳಿ ಈ ಹಿಂದೆ ಕೂಡ ಎರಡು ಆಡಿಯೋಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಭಾರೀ ಕೋಲಾಹಲವನ್ನೇ ವಿವಾದ ಸೃಷ್ಟಿಸಿದ್ದವು. ಇದೀಗ ಅಂಥದ್ದೇ ಮತ್ತೊಂದು ಆಡಿಯೋ ವೈರಲ್ ಆಗಿರುವುದು ವಿಪರ್ಯಾಸ. ಇದು ನಮ್ಮ ನೆಚ್ಚಿನ ನಟ ದರ್ಶನ್ ಆಡಿಯೋ ಅಲ್ಲ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಯಾರೋ ದರ್ಶನ್ ಅವರಂತೆ ಮಾತನಾಡಿ ಫೇಕ್ ಆಡಿಯೋ ಕ್ರಿಯೇಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಪತ್ನಿಗೆ ಬೈದಿದ್ದಾರೆ ಎನ್ನಲಾಗಿದ್ದ ಆಡಿಯೋ
ಕೆಲ ವರ್ಷಗಳ ಹಿಂದೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋವೊಂದು ಇದೇ ರೀತಿ ಹರಿದಾಡಿತ್ತು. ಅದರಲ್ಲಿದ್ದ ಅವಾಚ್ಯ ಶಬ್ಧಗಳು, ಅಶ್ಲೀಲ ಮಾತುಗಳು ವಾಕರಿಕೆ ತರಿಸುವಂತಿತ್ತು. ಕೊನೆಗೆ ಇದು ದರ್ಶನ್ ಅವರ ಧ್ವನಿ ಅಲ್ಲ ಎಂದು ಸ್ವತಃ ಪತ್ನಿ ವಿಜಯಲಕ್ಷ್ಮಿ ಮಾಧ್ಯಮವೊಂದಕ್ಕೆ ಕರೆ ಮಾಡಿ ಸ್ಪಷ್ಟನೆ ನೀಡಿದ್ದರು. ಇವತ್ತಿಗೂ ಆ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಮಾಧ್ಯಮಗಳಿಗೆ ಬೈದಿದ್ದಾರೆ ಎನ್ನಲಾಗಿದ್ದ ಆಡಿಯೋ
ಕೆಲವೇ ತಿಂಗಳುಗಳ ಹಿಂದೆ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ದರ್ಶನ್ ಮಾಧ್ಯಮದವರನ್ನು ಕೆಟ್ಟ ಪದಗಳಿಂದ ಬೈದಿದ್ದಾರೆ ಎಂದು ಆರೋಪಿಸಿದ್ದರು. ಇಂದ್ರಜಿತ್ ಆರೋಪದ ಬೆನ್ನಲ್ಲೇ ಆಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದರ ಪರಿಣಾಮವಾಗಿಯೇ ವಿದ್ಯುನ್ಮಾನ ಮಾಧ್ಯಮಗಳೆಲ್ಲಾ ದರ್ಶನ್ ಅವರನ್ನು ಬಹಿಷ್ಕರಿಸಿವೆ. ದರ್ಶನ್ ಕುರಿತ ಯಾವುದೇ ಸುದ್ದಿ ಪ್ರಸಾರ ಮಾಡದಿರಲು ನಿರ್ಧರಿಸಿವೆ.

ಆಡಿಯೋಗಳೆಲ್ಲಾ ಫೇಕ್ ಫೇಕ್ ಫೇಕ್?
ಹೇಳಿ ಕೇಳಿ ನಟ ದರ್ಶನ್ ಸ್ಟ್ರೈಟ್ ಫಾರ್ವಡ್, ಯಾವುದನ್ನು ಮುಲಾಜಿಲ್ಲದೇ ಹೇಳ್ತಾರೆ. ಅವರ ಬಗ್ಗೆ ಬೇಕು ಅಂತಲೇ ಎಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಆಡಿಯೋಗಳೆಲ್ಲಾ ಫೇಕ್ ಅನ್ನುವುದು ಅಭಿಮಾನಿಗಳ ವಾದ. ಒಟ್ನಲ್ಲಿ ಆಡಿಯೋ ಕ್ಲಿಪ್ಗಳಿಂದ ಪದೇ ಪದೇ ದರ್ಶನ್ ಸುತ್ತಾ ವಿವಾದ ಸುತ್ತಿಕೊಳ್ಳುತ್ತಿದೆ. ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಬೆದರಿಕೆ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.


Click it and Unblock the Notifications











