ಕುಂಟುತ್ತಲೇ ಬಳ್ಳಾರಿ ಜೈಲಿನಿಂದ ಹೊರಬಂದ ದರ್ಶನ್ ಮಾಡಿದ್ದೇನು?
ನಟ ದರ್ಶನ್ 131 ದಿನಗಳ ಬಳಿಕ ಜೈಲಿನಿಂದ ಹೊರಗಡೆ ಬಂದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಚಿಕಿತ್ಸೆಗಾಗಿ ಹೈಕೋರ್ಟ್ ದರ್ಶನ್ಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎಲ್ಲಾ ಬಿಡುಗಡೆ ಪ್ರಕ್ರಿಯೆ ಮುಗಿಸಿ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ.
ಸಂಜೆ 6 ಗಂಟೆ 10 ನಿಮಿಷದ ಸುಮಾರಿಗೆ ದರ್ಶನ್ ಬಳ್ಳಾರಿ ಜೈಲು ಸೇಲ್ನಿಂದ ಹೊರಗೆ ಬಂದಿದ್ದರು. ಕುಂಟುತ್ತಲೇ ಅವರು ಪೊಲೀಸರ ಜೊತೆ ನಡೆದು ಬಂದಿದ್ದು ಗೊತ್ತಾಗುತ್ತಿತ್ತು. ಬಳಿಕ ಸಂದರ್ಶಕರ ಕೊಠಡಿಗೆ ಹೋಗಿ ಕೆಲ ಸೆಕೆಂಡ್ಗಳ ಬಳಿಕ ದರ್ಶನ್ ಜೈಲಿನ ಮುಖ್ಯದ್ವಾರದ ಬಳಿ ಬಂದರು. ಅಲ್ಲಿಗೆ ಹೋಗಿ ಸುಶಾಂತ್ ನಾಯ್ಡು ದರ್ಶನ್ ಜೊತೆ ಹೊರ ಬಂದರು. ಅಷ್ಟರಲ್ಲಿ ಪತ್ನಿ ವಿಜಯಲಕ್ಷ್ಮಿ ಟೋಯೋಟಾ ವೆಲ್ಫೈರ್ ಕಾರಿನಲ್ಲಿ ಜೈಲಿನ ಮುಂಭಾಗದಲ್ಲಿ ಕಾಯುತ್ತಿದ್ದರು. ಅಷ್ಟರಲ್ಲಾಗಲೇ ಸಾಕಷ್ಟು ಜನ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು.

ನಟ ದರ್ಶನ್ ಜೈಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಜೈಕಾರ ಹಾಕಿದರು. ಮಾಧ್ಯಮಗಳು ಕೂಡ ಚಿತ್ರೀಕರಣಕ್ಕೆ ಮುಂದಾಗಿದ್ದರು. ಅಭಿಮಾನಿಯೊಬ್ಬರು ದೃಷ್ಟಿ ತೆಗೆದರು. ಆದರೆ ದರ್ಶನ್ ಸೈಲೆಂಟ್ ಆಗಿ ಕಾರ್ ಏರಿ ಹೊರಟರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಒಂದೇ ಕಾರಿನಲ್ಲಿ ಬೆಂಗಳೂರಿನತ್ತ ಹೊರಟರು. ಒಂದಷ್ಟು ಅಭಿಮಾನಿಗಳು ಬೇರೆ ಬೇರೆ ವಾಹನಗಳಲ್ಲಿ ದರ್ಶನ್ ಕಾರನ್ನು ಹಿಂಬಾಲಿಸಿದರು. ಅಭಿಮಾನಿಗಳು ಹಾಗೂ ದರ್ಶನ್ ಆಪ್ತರ ಒಟ್ಟು 10ಕ್ಕೂ ಹೆಚ್ಚು ಕಾರುಗಳು ಬಳ್ಳಾರಿಯಿಂದ ಬೆಂಗಳೂರಿನತ್ತ ಹೊರಟಿತ್ತು.
ಕಾರಿನ ಹಿಂಬದಿ ಸೀಟ್ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಕೂತು ಪ್ರಯಾಣಿಸಿದರು. ಟ್ರಾಫಿಕ್ನಲ್ಲಿ ಕಾರು ನಿಂತಾಗ ದರ್ಶನ್ ಕಾರಿನ ಡೋರ್ ತೆಗೆದು ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಕಾರನ್ನು ಸುತ್ತುವರಿದ ಅಭಿಮಾನಿಗಳು ಜೈಕಾರ ಹಾಕಿದ ಸನ್ನಿವೇಶವೂ ಕಂಡುಬಂತು. ಪೊಲೀಸರು ದರ್ಶನ್ ಬಳ್ಳಾರಿ ಗಡಿ ದಾಟುವವರೆಗೆ ಭದ್ರತೆ ನೀಡಿದರು. ಬಳ್ಳಾರಿಯಿಂದ ಅನಂತಪುರ ಮಾರ್ಗವಾಗಿ ದರ್ಶನ್ ಬೆಂಗಳೂರಿನ ಕಡೆ ಹೊರಟರು.
ನಟ ದರ್ಶನ್ಗೆ ಹೆಲ್ತ್ ಗ್ರೌಂಡ್ನಲ್ಲಿ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. ಒಂದಷ್ಟು ಷರತ್ತುಗಳನ್ನು ವಿಧಿಸಿ ಜೈಲಿನಿಂದ ಹೊರ ಬರಲು ಅವಕಾಶ ನೀಡಲಾಗಿದೆ. ದರ್ಶನ್ ಬೆನ್ನುಹುರಿಯಿಂದ ಬಳಲುತ್ತಿದ್ದಾರೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದರು. ಹಾಗಾಗಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲ, ಜಾಮೀನು ದುರುಪಯೋಗ ಮಾಡಿಕೊಳ್ಳುವಂತಿಲ್ಲ, ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ, ಬೆದರಿಕೆ ಒಡ್ಡುವಂತಿಲ್ಲ, ವಿದೇಶಕ್ಕೆ ತೆರಳುವಂತಿಲ್ಲ. ಹೀಗೆ ಹಲವು ಷರತ್ತು ವಿಧಿಸಿ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ ಪಾಸ್ಪೋರ್ಟ್ ಅನ್ನು ಈಗಾಗಲೇ ನ್ಯಾಯಾಲಯಕ್ಕೆ ಸರೆಂಡರ್ ಮಾಡಲಾಗಿದೆ. ಸಹೋದರ ದಿನಕರ್ ಹಾಗೂ ಆಪ್ತ ಧನ್ವೀರ್ ಗೌಡ ಶ್ಯೂರಿಟಿ ನೀಡಿ ದರ್ಶನ್ ಬಿಡುಗಡೆ ಆಗಿದ್ದಾರೆ.
ಎರಡು ಲಕ್ಷ ಹಣವನ್ನು ಡೆಪಾಸಿಟ್ ಮಾಡಿದ್ದಾರೆ. ಸೆಷನ್ ನ್ಯಾಯಾಲಯಕ್ಕೆ ದರ್ಶನ್ ಪಾಸ್ಪೋರ್ಟ್ ನೀಡಲಾಗಿದೆ. ಇನ್ನು ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಸಿಕ್ಕಿದೆ. ಆದರೆ ವಾರದ ಒಳಗೆ ಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ. ಈ-ಮೇಲ್ ಮೂಲಕ ಜಾಮೀನು ಪ್ರತಿ ಬಳ್ಳಾರಿ ಜೈಲಿಗೆ ತಲುಪಿಸಲಾಯಿತು. ಬಳಿಕ ಬಿಡುಗಡೆ ಪ್ರಕ್ರಿಯೆ ಮುಗಿಸಿ ದರ್ಶನ್ ಹೊರ ಬಂದರು.
ಮೊದಲಿಗೆ ದರ್ಶನ್ ಮೈಸೂರಿಗೆ ತೆರಳುತ್ತಾರೆ. ತಾಯಿ ಮನೆಗೆ ಭೇಟಿ ನೀಡುತ್ತಾರೆ. ಬಳಿಕ ಅಲ್ಲೇ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎನ್ನಲಾಗಿತ್ತು. ಬಳಿಕ ಅವರು ಬೆಂಗಳೂರಿಗೆ ಬರುವುದು ಖಚಿತವಾಯಿತು. ಇನ್ನು ದರ್ಶನ್ ನಟನೆಯ 'ನವಗ್ರಹ' ಸಿನಿಮಾ ನವೆಂಬರ್ 8ಕ್ಕೆ ರೀ ರಿಲೀಸ್ ಆಗಲಿದೆ.


Click it and Unblock the Notifications











