'ಕುರುಕ್ಷೇತ್ರ'ದ ಭೀಮ ಪಾತ್ರಧಾರಿ ಡ್ಯಾನಿಶ್ ಮಗಳ ಜೀವ ಉಳಿಸಲು ನಟ ದರ್ಶನ್ ನೆರವು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಇದನ್ನು ಕೆಲವರು ಹೇಳಿಕೊಂಡಿದ್ದಾರೆ. ಆದರೆ ಬಲಗೈಲಿ ಮಾಡಿದ್ದು ಎಡಗೈಗೂ ಗೊತ್ತಾಗಬಾರದು ಅನ್ನೋದು ಅವರ ಷರತ್ತು. ನಟ ಡ್ಯಾನಿಶ್ ಅಖ್ತರ್ ಸೈಫಿ ಮಗಳ ಚಿಕಿತ್ಸೆಗೂ ದರ್ಶನ್ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಡ್ಯಾನಿಶ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಡ್ಯಾನಿಶ್ ಅಖ್ತರ್ 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ದರ್ಶನ್ ಭೀಮನ ಪಾತ್ರದಲ್ಲಿ ಅಬ್ಬರಿಸಿದ್ದರು. ಆ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದ್ದು ಕೂಡ ನಟ ದರ್ಶನ್. 'ಕುರುಕ್ಷೇತ್ರ' ನಂತರ 'ಕೋಟಿಗೊಬ್ಬ- 2' ಚಿತ್ರದಲ್ಲೂ ಡ್ಯಾನಿಶ್ ನಟಿಸಿದ್ದರು. ಇತ್ತೀಚೆಗೆ ಬಂದ 'ಕಬ್ಜ' ಚಿತ್ರದಲ್ಲೂ ಬಿಹಾರ ಮೂಲದ ನಟ ಕಾಣಿಸಿಕೊಂಡಿದ್ದರು. ಹಿಂದಿ ಕಿರುತೆರೆ ಪೌರಾಣಿಕ ಧಾರಾವಾಹಿಗಳಲ್ಲಿ ಹನುಮಂತ, ಭೀಮ ಪಾತ್ರಗಳಲ್ಲಿ ನಟಿಸಿ ಡ್ಯಾನಿಶ್ ಗಮನ ಸೆಳೆದಿದ್ದರು.

ನಟ ಡ್ಯಾನಿಶ್ಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವಿದೆ. ಕನ್ನಡದಲ್ಲಿ ಆಗಾಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಸದ್ಯ ಟ್ವೀಟ್ ಮಾಡಿ "ಕೆಲವು ದಿನಗಳ ಹಿಂದೆ ನನ್ನ ಹೆಣ್ಣು ಮಗುವಿಗೆ ತುಂಬಾ ಅನಾರೋಗ್ಯವಾಗಿತ್ತು. ರಾಕ್ಲೈನ್ ವೆಂಕಟೇಶ್ ಸರ್ ನನ್ನ ಹೆಣ್ಣು ಮಗುವಿನ ಜೀವ ಉಳಿಸಲು ಸಾಕಷ್ಟು ಸಹಾಯ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಕೂಡ ತುಂಬಾ ಸಹಾಯ ಮಾಡಿದ್ದಾರೆ. ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ 'ಕುರುಕ್ಷೇತ್ರ' ಚಿತ್ರದ ಭೀಮನ ಪಾತ್ರಕ್ಕೆ ಡ್ಯಾನಿಶ್ ಆಯ್ಕೆ ಮಾಡಿದ್ದು ದರ್ಶನ್. ಒಮ್ಮೆ ಸಿನಿಮಾ ಚಿತ್ರೀಕರಣಕ್ಕಾಗಿ ದರ್ಶನ್ ಹೈದರಾಬಾದ್ಗೆ ಹೋಗಿದ್ದರು. ಅಲ್ಲೇ ಧಾರಾವಾಹಿ ಚಿತ್ರೀಕರಣಕ್ಕಾಗಿ ಡ್ಯಾನಿಶ್ ಕೂಡ ಇದ್ದರು. ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಇಬ್ಬರ ಪರಿಚಯ ಆಗಿತ್ತು. ಇಬ್ಬರು ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದರು. 'ಸಿಯಾ ಕೇ' ಹಿಂದಿ ಧಾರಾವಾಹಿಯಲ್ಲಿ ಡ್ಯಾನಿಶ್ ಹನುಮಂತನ ಪಾತ್ರ ಮಾಡುತ್ತಿದ್ದಾರೆ ಅನ್ನೋದು ದರ್ಶನ್ಗೆ ಗೊತ್ತಿತ್ತು. ಹಾಗಾಗಿ ಭೀಮನ ಪಾತ್ರಕ್ಕೆ ಆಜಾನುಬಾಹು ನಟ ಬೇಕು ಎಂದಾಗ ಡ್ಯಾನಿಶ್ ಹೆಸರನ್ನು ದರ್ಶನ್ ಸೂಚಿಸಿದ್ದರು.
ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರಿಗೂ ನಟ ದರ್ಶನ್ ಇತ್ತೀಚೆಗೆ ಸಹಾಯ ಮಾಡಿದ್ದರು. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. "ಮಗನ ಕಾಲೇಜು ಅಡ್ಮಿಷನ್ಗಾಗಿ ಟೆನ್ನಿಸ್ ಕೃಷ್ಣ ಅವರು ಕೆಲವರ ಬಳಿ ಹಣದ ಸಹಾಯ ಕೇಳಿದ್ದರಂತೆ. ಆದರೆ ಯಾರು ಸಹಾಯ ಮಾಡಲಿಲ್ಲ. ಕೊನೆಗೆ ದರ್ಶನ್ ಅವರು ಸಹಾಯ ಮಾಡಿದರು" ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.


Click it and Unblock the Notifications











