ಅರ್ಜುನ ಸ್ಮಾರಕ ನಿರ್ಮಾಣ ವಿಚಾರ.. ಒಂದು ಹೆಜ್ಜೆ ಮುಂದಿಟ್ಟ ದರ್ಶನ್; ಕೈಜೋಡಿಸಿದ ಫ್ಯಾನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ-ಪಕ್ಷಿ ಕಾಳಜಿ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಈಗಾಗಲೇ ಸಾಕಷ್ಟು ಸಂದರ್ಭಗಳಲ್ಲಿ ಈ ಬಗ್ಗೆ ಗೊತ್ತಾಗಿಲ್ಲ. ತಮ್ಮ ಫಾರ್ಮ್ಹೌಸ್ನಲ್ಲಿ ಕೂಡ ಹಲವು ಪ್ರಾಣಿ, ಪಕ್ಷಿ ಸಾಕುತ್ತಿದ್ದಾರೆ. ಇನ್ನು 'ಕಾಟೇರ' ಚಿತ್ರವನ್ನು ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಅರ್ಜುನ ಆನೆಗೆ ಅರ್ಪಿಸಿದ್ದರು.
ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಳೆದ ವರ್ಷ ಸಾವಿಗೀಡಾಗಿತ್ತು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ವೇಳೆ ಒಂಟಿ ಸಲಗ ದಾಳಿ ಮಾಡಿ ಅರ್ಜುನ್ ಜೀವ ಚೆಲ್ಲಿದ್ದ. ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಸರ್ಕಾರಿ ಗೌರವಗಳೊಂದಿಗೆ ಅರ್ಜುನನಿಗೆ ವಿದಾಯ ಹೇಳಲಾಗಿತ್ತು.

ಕ್ಯಾಪ್ಟನ್ ಅರ್ಜುನ ಆನೆ ಅಗಲಿಕೆಗೆ ರಾಜ್ಯದ ಜನ ಮರುಗಿದ್ದರು. ಆದರೆ ಅರ್ಜುನ ಆನೆ ಅಂತ್ಯಕ್ರಿಯೆ ನಡೆದು 5 ತಿಂಗಳ ಬಳಿಕ ಎಲ್ಲರೂ ಮರೆತೇಬಿಟ್ಟಿದ್ದಾರೆ. ಆತನ ಸಮಾಧಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ನಟ ದರ್ಶನ್ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. "ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು" ಎಂದಿದ್ದರು.
ಇದೀಗ ದರ್ಶನ್ ಅಭಿಮಾನಿಗಳೇ ಅರ್ಜುನನ ಸಮಾಧಿಗೆ ತಾತ್ಕಾಲಿಕವಾಗಿ ರಕ್ಷಣೆಗೆ ಮುಂದಾಗಿದ್ದಾರೆ. ಅಭಿಮಾನಿಗಳೆಲ್ಲಾ ಸೇರಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಅರ್ಜುನನ ಸಮಾಧಿ ರಕ್ಷಿಸಲು ಹೊರಟಿದ್ದಾರೆ. ಮಳೆಗಾಲ ಆಗಿರುವುದರಿಂದ ಸಮಾಧಿ ಮಣ್ಣು ಕೊಚ್ಚಿ ಹೋಗುತ್ತದೆ. ಅದನ್ನು ತಡೆಯಬೇಕು ಎಂದು ಮನಸ್ಸು ಮಾಡಿದ್ದಾರೆ. ನಟ ದರ್ಶನ್ ಸಹ ಅಭಿಮಾನಿಗಳ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗ್ತಿದೆ.

ನಟ ದರ್ಶನ್ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಜನ ಅಭಿಮಾನಿಗಳು ಬಾಸ್, ನೀವೇ ಮುಂದೆ ನಿಂತು ಈ ಕೆಲಸ ಮಾಡಿ. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಕಾಮೆಂಟ್ ಮಾಡಿದ್ದರು. ಅದರಂತೆ ಈಗ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಭಿಮಾನಿಗಳೆಲ್ಲಾ ಸೇರಿ ಅರ್ಜುನ ಆನೆ ಸಮಾಧಿ ರಕ್ಷಣೆಗೆ ಮುಂದಾಗಿದ್ದಾರೆ. ಶೆಡ್ ನಿರ್ಮಿಸಲು ನಟ ದರ್ಶನ್ ಕಲ್ಲುಗಳನ್ನು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇದು ಬರೀ ಆರಂಭ ಅಷ್ಟೆ. ಮುಂದೆ ಸಂಬಂಧಪಟ್ಟವರು ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಮುಂದಾಗದಿದ್ದರೆ ಖುದ್ದು ದರ್ಶನ್ ಆ ಮಹತ್ಕಾರ್ಯ ಮಾಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
'ಕಾಟೇರ' ಚಿತ್ರವನ್ನು ಅರ್ಜುನನಿಗೆ ಅರ್ಪಿಸಲಾಗಿತ್ತು. "ನಾಡದೇವಿ ಚಾಮುಂಡಿ ಅಂಬಾರಿಯನ್ನು ಹೊತ್ತು ದಸರೆಯ ವೈಭವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಹಾಗೂ ದೈವ ಜೀವ 'ಅರ್ಜುನ'. ಇದಕ್ಕೆ ನಮ್ಮ 'ಕಾಟೇರ' ಚಿತ್ರ ಅರ್ಪಣೆ" ಎಂದು ಟೈಟಲ್ ಕಾರ್ಡ್ನಲ್ಲಿ ಹಾಕಲಾಗಿತ್ತು.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ನಟ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಣ್ಣ ಶೆಡ್ಯೂಲ್ ಚಿತ್ರೀಕರಣ ಸಹ ಮುಗಿದಿದೆ. ಶೀಘ್ರದಲ್ಲೇ 2ನೇ ಶೆಡ್ಯೂಲ್ ಆರಂಭವಾಗಲಿದೆ. ಮೊದಲ ಶೆಡ್ಯೂಲ್ ವೇಳೆ ದರ್ಶನ್ ಗಾಯಗೊಂಡಿದ್ದರು. ಸರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











