"ನಮ್ದು ಏಕ್ ಮಾರ್ ಧೋ ತುಕ್ಡಾ, ಡೌವ್ ಮಾಡೋಕೆ ಬರಲ್ಲ" ಸಚಿವ ಜಮೀರ್ ಬಗ್ಗೆ ದರ್ಶನ್ ಗುಣಗಾನ
ಬಹಳ ಸಡಗರ ಸಂಭ್ರಮದಿಂದ ಹಂಪಿ ಉತ್ಸವ ನಡೀತಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾರಾ ಮೆರಗು ತುಂಬಿದರು. 5 ವರ್ಷಗಳ ಹಿಂದೆ ಕೂಡ ದರ್ಶನ್ ಹಂಪಿ ಉತ್ಸವಕ್ಕೆ ಹಾಜರಾಗಿದ್ದರು. ಬಹಳ ಬ್ಯುಸಿ ಇದ್ದರೂ ಎಲ್ಲಾ ಕೆಲಸ ಕಾರ್ಯ ಬಿಟ್ಟು ಯಾಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಎನ್ನುವುದನ್ನು ದರ್ಶನ್ ಬಿಚ್ಚಿಟ್ಟರು.
"ಕೃಷ್ಣದೇವರಾಯ ಆಳಿದ ನಾಡಿದು. ಅವ್ರು ಕಟ್ಟಿಸಿದ ಸಾಮ್ರಾಜ್ಯ ಇದು. ಈ ಸಾಮ್ರಾಜ್ಯ ಹೇಗೆಲ್ಲಾ ಇತ್ತು ಎನ್ನುವುದು ನಿಮಗೂ ಚೆನ್ನಾಗಿ ಗೊತ್ತು. ಕೃಷ್ಣದೇವರಾಯ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಎಲ್ಲರೂ ಈ ನಾಡಿಗಾಗಿ ಹೋರಾಡಿದವರು. ಅಂತಹವರು ಹುಟ್ಟಿದ ನಾಡಿಗೆ ಹೋದಾಗ ಅವರ ಬಗ್ಗೆ ಓದಿದಾಗ ಅವರ ಆತ್ಮ ಹೋಗಿರಲ್ಲ ಎನ್ನಿಸುತ್ತೆ. ಬಹಳ ಕಷ್ಟಬಿದ್ದು ಇದನ್ನೆಲ್ಲಾ ಸಾಧಿಸಿದ್ದಾರೆ. ಅವರ ಆತ್ಮ ಇಲ್ಲೇ ಎಲ್ಲೋ ನಮ್ಮ ಜೊತೆ ಇರುತ್ತದೆ"

ಮೈಸೂರು ದಸರಾ, ಹಂಪಿ ಉತ್ಸವ ಬಹಳ ಸಡಗರ ಸಂಭ್ರಮದಿಂದ ನಡೆಯುತ್ತದೆ. ಆ ಉತ್ಸವಗಳು ಅಲ್ಲಿನ ಶ್ರೇಷ್ಠ ನಾಯಕರ ಸುತ್ತ ಸುತ್ತುವಂತದ್ದು. ನಾವು ಇಲ್ಲಿ ಸೇರಿರುವುದಕ್ಕೂ ಬಲವಾದ ಕಾರಣ ಇದೆ. ನಾನು ಇವತ್ತು ಇಲ್ಲಿ ಬರಲು ಕಾರಣ, ನನ್ನ ಅಣ್ಣನ ಸಮಾನರಾದ ಜಮೀರ್ ಅಹಮದ್. ನೀವು ನನ್ನನ್ನ ಬಾಸ್ ಅಂತೀರಾ, ನಾನು ಅವರನ್ನು ಭಾಯ್ ಎನ್ನುತ್ತೀನಿ"
"ನಾನು ಯಾರ ಬಳಿಯೂ ಅಷ್ಟು ಬೇಗ ಸೋಲಲ್ಲ. ತುಂಬಾ ಲೆಕ್ಕ ಹಾಕುತ್ತೇನೆ. ಒಳಗೆ ಬರುತ್ತಿದ್ದಂತೆ ನೀವು ಅಲ್ಲೇ ಇರಿ, ನಾನು ಇಲ್ಲೇ ಇರ್ತೀನಿ ಅಂತ. ಯಾಕಂದ್ರೆ ಆಗುವುದಿಲ್ಲ ಅಲ್ವಾ? ಯಾಕಂದರೆ ನಮ್ಮದು ಏಕ್ ಮಾರ್ ಧೋ ತುಕ್ಡಾ, ಅಲ್ಲೇ ಹೇಳಿ ಹೋಗಿಬಿಡ್ತೀವಿ. ನನಗೆ ಡೌವ್ ಮಾಡೋಕೆ ಬರಲ್ಲ. ಇಷ್ಟ ಆದರೆ ತುಂಬಾ ಇಷ್ಟದಿಂದ ಹೇಳ್ತೀವಿ. ಕಷ್ಟ ಆದ್ರೆ ದೂರ ಇದ್ದುಬಿಡಪ್ಪ ಎಂದುಬಿಡ್ತೀವಿ."
"ನನಗೆ ಜಮೀರ್ ಮೇಲೆ ಅಷ್ಟು ಪ್ರೀತಿ ಏಕೆ ಅಂದ್ರೆ ಇವತ್ತಿನವರೆಗೂ ತಮಗಾಗಿ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯಲಿಲ್ಲ. ಇದನ್ನು ಇವತ್ತು ಪಬ್ಲಿಕ್ ಆಗಿ ಹೇಳಬೇಕು. ಪ್ರೀತಿಪಾತ್ರರ ಕಾರ್ಯಕ್ರಮಗಳಿಗೆ ಕರೆದಿದ್ದಾರೆ. ಆಪ್ತರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆದು ಹೋಗಿದ್ದೆ. ಚುನಾವಣೆ ಸಮಯದಲ್ಲಿ ಕೇಳ್ದೆ. ಪ್ರಚಾರಕ್ಕೆ ಬರಬೇಕಾ? ಅಂತ. ಬರಬೇಡ ಅಂದ್ರು. ಅವತ್ತೇ ಗೊತ್ತಾಯ್ತು, ಅವರು ಅದಕ್ಕೋಸ್ಕರ ನನ್ನ ಜೊತೆಗಿಲ್ಲ ಅಂತ"
"ನಾವು ತುಂಬಾ ಜನರ ಪರ ಪ್ರಚಾರ ಮಾಡಿದ್ದೀವಿ. ಅವ್ರು ಗೆದ್ದಮೇಲೆ, ಸೋತಮೇಲೆ ನಮ್ಮನ್ನು ತಿರುಗಿಯೂ ನೋಡಿಲ್ಲ. ಆದರೆ ಜಮೀರ್ ಅಹಮದ್ ಯಾವತ್ತು ಕೇಳಿಲ್ಲ. ಎಷ್ಟೋ ಜನ ನನ್ನ ಬಳಿ ಸಹಾಯ ಕೇಳಿ ಬಂದಾಗ ನನ್ನ ಕೈಯಲ್ಲಿ ಸಾಧ್ಯ ಆಗದಿದ್ದಾಗ ಜಮೀರ್ ಅಹಮದ್ ಸಹಾಯ ಮಾಡಿದ್ದಾರೆ. ಅದು ಶಸ್ತ್ರ ಚಿಕಿತ್ಸೆಗಳಿರಬಹುದು, ವಿದ್ಯಾಭ್ಯಾಸವೇ ಇರಬಹುದು. ಎಷ್ಟೋ ಜನರನ್ನು ವಿದೇಶಕ್ಕೆ ಕಳುಹಿಸಿ ಓದಿಸಲು ಸಹಾಯ ಮಾಡಿದ್ದಾರೆ. ಅದಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಅದಕ್ಕೆ ಸಾಕ್ಷಿ ನಾನು"
"ನನ್ನ ಕೈಯಲ್ಲಿ ಅಷ್ಟು ಸಹಾಯ ಮಾಡಲು ಸಾಧ್ಯವಿಲ್ಲದಾಗ ಹೇಳುತ್ತಿದ್ದೆ. ಕೆಲವೊಮ್ಮೆ ಕೇಳಿದ ಕೂಡಲೇ ಅಷ್ಟು ಹಣ ಕೊಟ್ಟು ಕೆಲವರು ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಅಂತಹ ಗುಣ ಇರುವ ವ್ಯಕ್ತಿ. ಮಡಿಕೇರಿಯ ಸ್ನೇಹಿತರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸಹಾಯ ಕೇಳಿದಾಗ ಮೊದಲು 5 ಲಕ್ಷ ಕೊಟ್ಟಿದ್ದು ಜಮೀರ್ ಪುತ್ರ ಝೈದ್ ಖಾನ್. ತಂದೆ ಮಗ ಹೇಗೆ ಅಂತ ನಾನು ಹೇಳ್ತೀದ್ದೀನಿ."

"ಜಮೀರ್ ಭಾಯ್ ನಿನ್ನೆ ಫೋನ್ ಮಾಡಿ ಇವತ್ತು ಬರಲು ಹೇಳಿದ್ದರೂ ಬರುತ್ತಿದ್ದೆ. ಏನೇ ಕೆಲಸ ಇದ್ದರೂ ಬಿಟ್ಟು ಬರುತ್ತಿದ್ದೆ. ಯಾವುದೇ ಕೆಲಸ ಇದ್ದರೂ ಅದೊಂದು ದಿನ ನಾನು ಬರಲ್ಲ ಅಂತೀನಿ. ಅದು ನಮ್ಮ ತಂದೆ ಕಾರ್ಯ. ವರ್ಷಕ್ಕೊಮ್ಮೆ ಮಾಡೋದು. ಅವತ್ತು ಯಾರೇ ಕರೆದರೂ ಬರಲ್ಲ ಎಂದುಬಿಡ್ತೀನಿ. ಇವತ್ತು ಆ ಕಾರ್ಯ ಇದ್ದಿದ್ದರೂ ಕೂಡ ನಾಳೆ ಮಾಡೋಣ ಅಂತ ಬರ್ತಿದ್ದೆ. ಯಾಕಂದರೆ ಭಾಯ್ ಕರೆದಿದ್ದಾರೆ ಎಂದು. ಅಂತಹ ಭಾಂದ್ಯವ್ಯ ನಮ್ಮದು" ಎಂದು ದರ್ಶನ್ ವಿವರಿಸಿದ್ದಾರೆ.


Click it and Unblock the Notifications











