ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
ಕನ್ನಡ ಸಿನಿಮಾ ತಾರೆಯರು ಲೋಕಸಭೆ ಚುನಾವಣೆ ಪ್ರಚಾರ ಕಣಕ್ಕಿಳಿದಿದ್ದಾರೆ. ಈಗಾಗಲೇ ಶಿವಮೊಗ್ಗದಲ್ಲಿ ನಟ ಶಿವರಾಜ್ಕುಮಾರ್ ತಮ್ಮ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಮಂಡ್ಯದಲ್ಲಿ ಕಳೆದೆರಡು ದಿನಗಳಿಂದ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಬೇಟೆ ನಡೆಸಿದ್ದಾರೆ.
ನನಗೆ ಪಕ್ಷ ಮುಖ್ಯ ಅಲ್ಲ. ವ್ಯಕ್ತಿ ಮುಖ್ಯ ಎಂದು ನಟ ದರ್ಶನ್ ಹೇಳುತ್ತಾ ಬರುತ್ತಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೂಡ ರಾಜ್ಯದ ಕೆಲವೆಡೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ದರ್ಶನ್ ಮತಯಾಚನೆ ನಡೆಸಿದರು. ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ. ಕೆ ಸುರೇಶ್ ಪರ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆದಿದೆ. 15 ವರ್ಷಗಳ ಹಿಂದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಚನೆಯಾದ ಬಳಿಕ ನಡೆಯುತ್ತಿರುವ 5ನೇ ಲೋಕಸಭಾ ಚುನಾವಣೆ ಇದಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ ಎನ್ ಮಂಜುನಾಥ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ. ಕೆ. ಸುರೇಶ್ ಈ ಬಾರಿಯೂ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದ್ದಾರೆ.
ಈಗಾಗಲೇ ಡಿ. ಕೆ ಸುರೇಶ್ ಪ್ರಚಾರ ಆರಂಭಿಸಿದ್ದಾರೆ. ಶನಿವಾರ(ಏಪ್ರಿಲ್ 19) ನಟ ದರ್ಶನ್ ಮತಯಾಚನೆಗೆ ಜೈ ಜೋಡಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕನಕಪುರ, ಕುಣಿಗಲ್, ಆನೇಕಲ್, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರು ದಕ್ಷಿಣ ಸೇರಿ ಎಂಟು ವಿಧಾನ ಸಭೆ ಕ್ಷೇತ್ರಗಳಿವೆ. ಸದ್ಯ ಆರ್. ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಕ್ಷೇತ್ರಗಳು ಲೋಕಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.

ಆರ್. ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಭಾಗಗಳಲ್ಲೇ ನಟ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ. ರೋಡ್ ಶೋ ಮೂಲಕ ದರ್ಶನ್ ಮತಯಾಚಿಸಲಿದ್ದಾರೆ. ಸಂಜೆ 4 ಗಂಟೆಗೆ ಯಶವಂತಪುರ ಮಾರ್ಕೆಟ್, 5 ಗಂಟೆಗೆ ಲಗ್ಗೆರೆ ಸರ್ಕಲ್, 6 ಗಂಟೆಗೆ ಕೊಟ್ಟಿಗೆಪಾಳ್ಯದಲ್ಲಿ ದರ್ಶನ್ ಪ್ರಚಾರದ ಭರಾಟೆ ಇರಲಿದೆ.
ಸಂಜೆ 7 ಗಂಟೆಗೆ ಉತ್ತರಹಳ್ಳಿ, 8 ಗಂಟೆ ವೇಳೆಗೆ ವೀವರ್ಸ ಕಾಲೋನಿ, ಗೊಟ್ಟಿಗೆರೆ ವಾರ್ಡ್ಗಳಲ್ಲಿ ನಟ ದರ್ಶನ್ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ. ಕೆ ಸುರೇಶ್ ಪರ ಮತಯಾಚಿಸಲಿದ್ದಾರೆ. ಈ ಎರಡು ವಿಧಾನ ಸಭೆ ಕ್ಷೇತ್ರಗಳಲ್ಲಿ ಯಾರಿಗೆ ಹೆಚ್ಚು ಮತ ಸಿಕ್ಕರೆ ಅವರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ. ಹಾಗಾಗಿ ಇದೇ ಜಾಗದಲ್ಲಿ ಮತಗಳನ್ನು ಸೆಳೆಯುವ ಪ್ರಯತ್ನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನೊಂದು ವಾರ ಬಾಕಿಯಿದೆ. ಅದಕ್ಕೂ ಮುನ್ನ ನಟ ದರ್ಶನ್ ಯಾರ್ಯಾರ ಪಡ ಮತಯಾಚನೆ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ನಟ ದರ್ಶನ್ ಪ್ರಚಾರ ನಡೆಸಿದರೂ ಅಚ್ಚರಿಪಡುವಂತಿಲ್ಲ. ಒಟ್ಟಾರೆ ದರ್ಶನ್ ಎಂಟ್ರಿಯಿಂದ ಲೋಕಸಭೆ ಚುನಾವಣೆ ಪ್ರಚಾರ ಕಣ ರಂಗೇರಿದೆ.


Click it and Unblock the Notifications











