ಜೈಲಿನಲ್ಲಿ ದರ್ಶನ್ ರಾಜಾತಿಥ್ಯದ ಫೋಟೊ ಕ್ಲಿಕ್ಕಿಸಿದ್ದು ಯಾರು? ಅದು ಹೊರಗೆ ಬಂದಿದ್ದೇಗೆ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಸಾಕಷ್ಟು ಅಂತೆಕಂತೆ ಸುದ್ದಿ ಹರಿದಾಡಿತ್ತು. ಅಭಿಮಾನಿಗಳು ನೆಚ್ಚಿನ ನಟ ಜೈಲಿನಲ್ಲಿ ಹೇಗಿದ್ದಾರೋ? ಎಂದು ಆತಂಕದಲ್ಲಿದ್ದರು.
ಸದ್ಯ ವೈರಲ್ ಆಗಿರುವ ಫೋಟೊ, ವೀಡಿಯೋ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ? ಎನ್ನುವುದಕ್ಕೆ ಸಾಕ್ಷಿ ಸಿಕ್ಕಂತಾಗಿದೆ. ಆರಾಮಾಗಿ ಸಿಗರೇಟ್ ಸೇದುತ್ತಾ, ಕಾಫಿ ಹೀರುತ್ತಾ ಸಹ ಕೈದಿಗಳ ಜೊತೆ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ. ಜೈಲಿನ ಒಳಗೆ ಇರುವ ಕೈದಿಗಳಿಗೆ ಸಿಗರೇಟ್, ಮೊಬೈಲ್ ಎಲ್ಲವೂ ಸಿಗುತ್ತದೆ. ದುಡ್ಡಿದ್ದರೆ ಜೈಲಿನ ಎತ್ತರದ ಗೋಡೆಗಳ ನಡುವೆ ಏನು ಬೇಕಾದರೂ ಮಾಡಬಹುದು ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತಿತ್ತು. ಸದ್ಯ ವೈರಲ್ ಫೋಟೊ, ವೀಡಿಯೋ ನೋಡಿದ ಮೇಲೆ ಅದೆಲ್ಲಾ ನಿಜ ಎಂದು ಗೊತ್ತಾಗುತ್ತಿದೆ.

ಯಾವುದೇ ಪಶ್ಚಾತ್ತಾಪ, ಪಾಪ ಪ್ರಜ್ಞೆಯೂ ಇಲ್ಲದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಎಂಬ ನಟೋರಿಯಸ್ ರೌಡಿಗಳ ಜೊತೆ ಹರಟುತ್ತಾ ಇದ್ದಾರೆ. ಜೈಲಿನ ನಿಯಮಗಳ ಪ್ರಕಾರ ಒಳಗೆ ಸಿಗರೇಟ್, ಮಾದಕ ವಸ್ತುಗಳ ಬಳಕೆಗೆ ಅವಕಾಶವಿಲ್ಲ. ವೈದ್ಯರ ಮಾಹಿತಿ ಮೇರೆಗೆ ಕೈದಿಗಳಿಗೆ ಸಿಗರೇಟ್ ಕೊಡಬಹುದು. ಆದರೆ ದರ್ಶನ್ಗೆ ಅದಕ್ಕಿಂತಲೂ ಮೀರಿದ ರಾಜಾತಿಥ್ಯ ಸಿಗುತ್ತಿರುವುದು ಗೊತ್ತಾಗುತ್ತಿದೆ.
ಜೈಲು ಸಿಬ್ಬಂದಿಗೆ ಕೈದಿಗಳು ದುಡ್ಡು ಕೊಟ್ಟರೆ ಮೊಬೈಲ್, ಸಿಗರೇಟ್, ಮಾದಕ ವಸ್ತುಗಳು ಸಿಗುತ್ತದೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಮುಗಿಸಿ ಬಂದವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹೊರಗಡೆ ನೀವು ಅಂದುಕೊಂಡಂತೆ ಜೈಲು ಇರುವುದಿಲ್ಲ ಎಂದು ಹೇಳಿದ್ದಾರೆ. ಉಳ್ಳವರು ಅಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುತ್ತಿರುತ್ತಾರೆ. ಈ ಫೋಟೊ, ವೀಡಿಯೋ ನೋಡಿದಮೇಲೆ ಇದೆಲ್ಲ ನಿಜ ಎನಿಸುತ್ತಿದೆ.
ಸಾಮಾನ್ಯವಾಗಿ ಜೈಲಿನ ಒಳಗೆ ಸಾಮಾನ್ಯರಿಗೆ ಪ್ರವೇಶವಿಲ್ಲ. ಒಳಗೆ ಏನೆಲ್ಲಾ ನಡೆಯುತ್ತದೆ ಎನ್ನುವುದಕ್ಕೆ ಸಾಕ್ಷಿ ಪುರಾವೆ ಸಿಗಲ್ಲ. ಹಾಗಾಗಿ ಅಲ್ಲಿ ಏನೇ ನಡೆದರೂ ಅಷ್ಟು ಸುಲಭವಾಗಿ ಹೊರ ಜಗತ್ತಿಗೆ ಗೊತ್ತಾಗಲ್ಲ. ಅದೇ ಕಾರಣಕ್ಕೆ ಒಳಗೆ ಕೆಲ ಜೈಲು ಸಿಬ್ಬಂದಿ ಹಣಕ್ಕಾಗಿ ಕೈದಿಗಳಿಗೆ ಈ ರೀತಿ ರಾಜಾತಿಥ್ಯ ನೀಡುತ್ತಾರೆ ಎನ್ನಲಾಗುತ್ತದೆ. ಸದ್ಯ ಈ ಫೋಟೊ, ವೀಡಿಯೋ ಹೊರ ಬಂದಿದ್ದಕ್ಕೆ ಅಸಲಿ ಸಂಗತಿ ಬಯಲಾಗಿದೆ.

ದರ್ಶನ್ಗೆ ರಾಜಮರ್ಯಾದೆಯ ಫೋಟೊ ಮಾತ್ರವಲ್ಲ, ವೀಡಿಯೋ ಕಾಲ್ ಮಾಡಿ ಹೊರಗಡೆ ಇರುವವರ ಜೊತೆ ಮಾತನಾಡಿರುವ ವೀಡಿಯೋ ಸಹ ವೈರಲ್ ಆಗುತ್ತಿದೆ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನ ಜೊತೆ ದರ್ಶನ್ ವೀಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಜೈಲಿನಲ್ಲಿರುವ ವೇಲು ಎಂಬ ಕೈದಿ ಈ ವೈರಲ್ ಫೋಟೊ ಕ್ಲಿಕ್ಕಿಸಿದ್ದು ಎಂದು ವರದಿಯಾಗಿದೆ.
ಈ ಫೋಟೊ, ವೀಡಿಯೋ ವೈರಲ್ ಬಳಿಕ ಕೈದಿಗಳಿಗೆ ಮೊಬೈಲ್ ಫೋನ್ ಸಿಗುತ್ತದೆ ಎನ್ನುವುದು ಗೊತ್ತಾಗುತ್ತಿದೆ. ಸುವರ್ಣ ನ್ಯೂಸ್ ವರದಿ ಪ್ರಕಾರ ವೇಲು ಎಂಬ ಕೈದಿ ಈ ಫೋಟೊ ಕ್ಲಿಕ್ಕಿಸಿದ್ದು ಅದನ್ನು ತಮ್ಮ ಪತ್ನಿಗೆ ಕಳುಹಿಸಿದ್ದಾನೆ ಎನ್ನಲಾಗ್ತಿದೆ. ಆ ಬಳಿಕವೇ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭವಾಯಿತು. ಇನ್ನು ರಾಜಾತಿಥ್ಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಗೃಹಸಚಿವರು ಆದೇಶಿಸಿದ್ದಾರೆ. ಈಗಾಗಲೇ 7 ಜನ ಜೈಲು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ.


Click it and Unblock the Notifications











