ವಿಷಾದದ ಬಗ್ಗೆ ಪತ್ರ.. 4 ದಿನ ಕಳೆದರೂ ತುಟಿಬಿಚ್ಚದ ದಾಸ: ಈ ಮೌನ ಯಾಕೆ?
2 ವರ್ಷಗಳ ಹಿಂದೆ ನಟ ದರ್ಶನ್ ಮಾಧ್ಯಮಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸುದ್ದಿ ಮಾಧ್ಯಮಗಳು ದರ್ಶನ್ಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದೇ ಅಘೋಷಿತ ಬಹಿಷ್ಕಾರ ಹೇರಿರುವುದು ಗೊತ್ತೇಯಿದೆ. ಆದರೆ 4 ದಿನಗಳ ಹಿಂದೆ ದರ್ಶನ್ ಸುದ್ದಿಮಾಧ್ಯಮಗಳಿಗೆ ಪತ್ರ ಬರೆದು ಆ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು.
"ಯಾವುದೋ ಗಳಿಗೆಯಲ್ಲಿ ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ." ದರ್ಶನ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಈ ಪತ್ರವನ್ನು ಯಾರೋ ಸುದ್ದಿ ಮಾಧ್ಯಮ ಕಚೇರಿಗಳಿಗೆ ತಲುಪಿಸಿದ್ದಾರೆ. ದರ್ಶನ್ ಆಪ್ತರು ಹೇಳುವ ಪ್ರಕಾರ ಇದನ್ನು ದರ್ಶನ್ ಅವರೇ ಕಳುಹಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ದರ್ಶನ್ ಮಾತ್ರ ತುಟಿಕ್ಪಿಟಿಕ್ ಅಂದಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಯಾವುದೇ ಮಾಹಿತಿ ನೀಡಿಲ್ಲ.

ಸಾಕಷ್ಟು ಜನ ಅಭಿಮಾನಿಗಳು ಈ ಪತ್ರವನ್ನು ನಂಬಲು ಸಿದ್ಧರಿಲ್ಲ. ನಮ್ಮ ನೆಚ್ಚಿನ ನಟ ಈ ರೀತಿ ಪತ್ರ ಬರೆಯಲು ಸಾಧ್ಯವೇ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಇದು ಫೇಕ್ ಲೆಟರ್. ಯಾರೋ ಬೇಕು ಅಂತಲೇ ದರ್ಶನ್ ಅವರ ಹೆಸರಿಗೆ ಮಸಿ ಬಳಿಯಲು ಈ ಪತ್ರದ ನಾಟಕ ಮಾಡಿದ್ದಾರೆ. ಆ ಪತ್ರದಲ್ಲಿ ದಿನಾಂಕವನ್ನು ನಮೂದಿಸಿಲ್ಲ. ಲೆಟರ್ ಹೆಡ್ನಲ್ಲಿರುವ ತೂಗುದೀಪ ಚಿತ್ರಕ್ಕೂ ದರ್ಶನ್ ಅವರ ಬ್ಯಾನರ್ನ ಲೋಗೊಗು ವ್ಯತ್ಯಾಸವಿದೆ. ಇನ್ನು ದರ್ಶನ್ ಅವರ ಸಹಿ ಕೂಡ ಬೇರೆ ತರ ಕಾಣಿಸುತ್ತಿದೆ ಎನ್ನುತ್ತಿದ್ದಾರೆ.
ಸಾಕಷ್ಟು ಜನರಿಗೆ ದರ್ಶನ್ ಈ ಪತ್ರವನ್ನು ಬರೆದಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದು ನಕಲಿ ಪತ್ರ ಅಂತಲೇ ಅಂದುಕೊಂಡಿದ್ದಾರೆ. ಆದರೆ ದರ್ಶನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಒಂದು ವೇಳೆ ಪತ್ರ ನಕಲಿ ಆಗಿದ್ದರೆ, ತಮ್ಮ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೂಡ ದರ್ಶನ್ ಹೇಳುತ್ತಿಲ್ಲ. 4 ದಿನ ಕಳೆದರೂ ಆ ಪತ್ರದ ಸತ್ಯಾಸತ್ಯತೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಇನ್ನು ದರ್ಶನ್ ಸ್ನೇಹಿತರ ಪರ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ವೈರಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ.

ನಿನ್ನೆಯಷ್ಟೆ ಸ್ನೇಹಿತರಾದ ವಿನಯ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿ ಆಗಿದ್ದರು. ಬಿಡದಿ ಬಳಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಖುಷಿಪಟ್ಟರು. ಹೊಸ ಸಿನಿಮಾ ನಿರ್ಮಾಣ ಸಂಸ್ಥೆಗೆ ಶುಭಾಶಯ ಕೋರಿದರು. ಆದರೆ ಬೇರೆ ಯಾವುದೇ ವಿಚಾರಗಳ ಬಗ್ಗೆ ಮಾತನಾಡಲಿಲ್ಲ. ಮುಖ್ಯವಾಗಿ ವೈರಲ್ ಪತ್ರದ ಬಗ್ಗೆಯೂ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ಈ ಪತ್ರ ಅಸಲಿಯೋ? ನಕಲಿಯೋ? ಎನ್ನುವ ಗೊಂದಲ ಮುಂದುವರೆದಿದೆ.
ವೈರಲ್ ಪತ್ರದಲ್ಲಿ ಏನಿದೆ?
ಎಲ್ಲಾ ಮಾಧ್ಯಮ ಮಿತ್ರರಿಗೂ ನಮಸ್ಕಾರ..
75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್ ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು. ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು.

ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ.
ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು, ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು.
ಇಂತಿ ನಿಮ್ಮ ದಾಸ
(ದರ್ಶನ್ ತೂಗುದೀಪ)


Click it and Unblock the Notifications











