Darshan: 'ಕಾಟೇರ' ಟೈಟಲ್ ಸಿಕ್ಕಿದ್ದು ಹೇಗೆ? 'ಗರಡಿ' ವೇದಿಕೆಯಲ್ಲಿ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜಬರ್ದಸ್ತ್ ಟೈಟಲ್ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಿನಿಮಾ ಮೂಡಿ ಬರ್ತಿದೆ.
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ D56 ಹೆಸರಿನಲ್ಲಿ ಸಿನಿಮಾ ಆರಂಭವಾಗಿತ್ತು. ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಷನ್ ಪೋಸ್ಟರ್ ಸಮೇತ ಸಿನಿಮಾ ಟೈಟಲ್ ರಿವೀಲ್ ಆಗಿತ್ತು. ಚಿತ್ರದಲ್ಲಿ 70ರ ದಶಕದ ಕತೆಯನ್ನು ಕಟ್ಟಿಕೊಡಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ಹಿನ್ನೆಲೆಯಲ್ಲಿ ಈ ಸಿನಿಮಾ ಕತೆ ಸುತ್ತುತ್ತದೆ.

'ಕಾಟೇರ' ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಟೈಟಲ್ ಅರ್ಥ ಏನು? ಅಂತೆಲ್ಲಾ ಭಾರೀ ಚರ್ಚೆ ಆಗಿತ್ತು. ಚಿತ್ರಕ್ಕೆ 'ಚೌಡಯ್ಯ' ಹಾಗೂ 'ಕಾಟೇರ' ಹೆಸರುಗಳನ್ನು ಚಿತ್ರತಂಡ ಫೈನಲ್ ಮಾಡಿತ್ತು. ಕೊನೆಗೆ 'ಕಾಟೇರ' ಫಿಕ್ಸ್ ಆಗಿತ್ತು. ಅಷ್ಟಕ್ಕೂ ಚಿತ್ರಕ್ಕೆ ಈ ಟೈಟಲ್ ಸಿಕ್ಕಿದ್ದು ಹೇಗೆ? ಯಾರು ಕಾರಣ? ಅನ್ನೋದು ಈಗ ರಿವೀಲ್ ಆಗಿದೆ. ರಾಣೆಬೆನ್ನೂರಿನಲ್ಲಿ ನಡೆದ 'ಗರಡಿ' ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಬಳಗದಲ್ಲಿ ಗುರ್ತಿಸಿಕೊಂಡಿರುವ ಪೈಲ್ವಾನ್ ಕಾರ್ತಿಕ್ ಅವರಿಂದ ಈ ಟೈಟಲ್ ಸಿಕ್ತು ಎಂದು ನಟ ದರ್ಶನ್ ಹೇಳಿದ್ದಾರೆ. ವೇದಿಕೆಗೆ ಕಾರ್ತಿಕ್ನ ಕರೆದ ದರ್ಶನ್ "ಈತನನ್ನು ನನಗೆ ಪರಿಚಯ ಮಾಡಿಸಿದ್ದು ನಮ್ಮ ದೇಸಿ ಗೌಡರು. ಅವತ್ತು ಅಣ್ಣ ಇವನು ಕಾಟಿ ಅಂತ ಹೇಳಿದ್ರು. ಕಾಟಿನ ಏನ್ ಕಾಟಿ ಅಂತ ನಾನು ಕೇಳ್ದೆ. ಅವನ ಹೆಸರು ಕಾರ್ತಿಕ್ ಅಂತ. ನಾವು ಕಾಟಿ ಅಂತ ಕರೀತ್ತೀವಿ ಅಂದ್ರು. ಚೆನ್ನಾಗಿದೆ ಅಲ್ವಾ ಇದು? ಅನ್ನಿಸಿತು. ಕಾಟಿನ ಕೊಂಚ ಬದಲಿಸಿ ಕಾಟೇರ ಅಂತ ಮಾಡ್ಕೊಂಡೆ ಅದಕ್ಕೆ ಇವ್ನೇ ಕಾರಣ" ಎಂದು ದರ್ಶನ್ ಹೇಳಿದ್ದಾರೆ.
ಈ ಹಿಂದೆ ಚಿತ್ರದ ಸಂಭಾಷಣೆಕಾರ ಮಾಸ್ತಿ ಮಾತನಾಡಿ "ಕಾಟೇರ ಅಂದ್ರೆ ನಿರ್ದಿಷ್ಠವಾದ ಒಂದು ಅರ್ಥವಿಲ್ಲ. ಅದೊಂದು ಹೆಸರು ಅಷ್ಟೇ. ತುಂಬಾ ಊರುಗಳಲ್ಲಿ ಕಾಟೇರಮ್ಮ ಅನ್ನೋ ಒಂದು ದೇವರು ಇದೆ. ಕಾಟೇರಮ್ಮ ಅಂದರೆ ತಾಯಿ ಕಾಳಿ, ದುಷ್ಟರ ರಕ್ತ ಕುಡಿಯುವಂತಹ ಒಂದು ದೇವತೆ. ಆ ಅರ್ಥದಲ್ಲಿ ಬರುತ್ತೆ" ಎಂದಿದ್ದರು.
ಅಂದಹಾಗೆ 'ಕಾಟೇರ' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. 2 ಹಾಡುಗಳು ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಹಾಗೂ ಮಾಸ್ತಿ ಸಂಭಾಷಣೆಯಿದೆ. ಖಡಕ್ ಟೈಟಲ್ನಿಂದಲೇ 'ಕಾಟೇರ' ಸಿನಿಮಾ ಸದ್ದು ಮಾಡ್ತಿದೆ. ಆನಂದ್ ಆಡಿಯೋ ಸಂಸ್ಥೆಗೆ ಆಡಿಯೋ ರೈಟ್ಸ್ ಮಾರಾಟವಾಗಿದೆ. ದೀಪಾವಳಿ ಸಂಭ್ರಮದಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗುತ್ತೆ ಎನ್ನಲಾಗುತ್ತಿದೆ. ಇನ್ನು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಆಗಿ ಅಣ್ಣಾವ್ರು ಹೇಳಿದ್ದ ಡೈಲಾಗ್ ಅನ್ನು ಈ ಚಿತ್ರದಲ್ಲಿ ದರ್ಶನ್ ಹೇಳಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ತರುಣ್ ಜೊತೆ ಸೇರಿ ಜಡೇಶ್ ಹಂಪಿ 'ಕಾಟೇರ' ಚಿತ್ರಕ್ಕೆ ಕತೆ ಒದಗಿಸಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ನವೆಂಬರ್ 10ರಂದು ರಿಲೀಸ್ ಆಗಲಿದೆ.


Click it and Unblock the Notifications











