Darshan: ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಸಿಕ್ತು ಮರೆಯಲಾಗದ ಉಡುಗೊರೆ: ದರ್ಶನ್ ಏನಂದ್ರು?
ನಟ ದರ್ಶನ್ ಪ್ರಾಣಿ, ಪಕ್ಷಿ ಪ್ರೀತಿ ಎಂಥದ್ದು ಅನ್ನೋದು ಗೊತ್ತೇಯಿದೆ. ಅದರಲ್ಲೂ ಕುದುರೆ ಅಂದ್ರೆ ಚಾಲೆಂಜಿಂಗ್ ಸ್ಟಾರ್ಗೆ ಹೆಚ್ಚು ಅಚ್ಚುಮೆಚ್ಚು. ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ದರ್ಶನ್ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ಅದರಲ್ಲಿ ಕುದುರೆಗಳು ಇವೆ. ದಾಸ ಸಾಕಷ್ಟು ಬಾರಿ ಕುದುರೆ ಸವಾರಿ ಮಾಡಿರುವ ವಿಡಿಯೋಗಳು ವೈರಲ್ ಆಗಿತ್ತು.
ಇತ್ತೀಚೆಗಷ್ಟೆ ನಟ ದರ್ಶನ್ ಬಿಜಿಎಸ್ ಹಾರ್ಸ್ ರೈಡಿಂಗ್ ಸ್ಕೂಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಕುದುರೆಗಳ ಬಗ್ಗೆ ಮಕ್ಕಳಿಗೆ ಒಂದಷ್ಟು ಕಿವಿಮಾತು ಹೇಳಿದ್ದರು. ಕುದುರೆಗಳ ಸ್ವಭಾವ ಎಂಥದ್ದು ಎಂದು ತಮಗೆ ಗೊತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನ SAMVIT ಈವೆಂಟ್ನಲ್ಲಿ ದರ್ಶನ್ ಭಾಗಿ ಆಗಿದ್ದರು.

ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜು ಆವರಣದಲ್ಲಿ ಅದ್ಧೂರಿ ಸ್ವಾಗತವೇ ಸಿಕ್ಕಿತ್ತು. ಅವರಿಗೆ ಸ್ನೇಹಿತ ಸಚ್ಚಿದಾನಂದ ಸಾಥ್ ನೀಡಿದರು. ಸ್ವಾಮೀಜಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ದರ್ಶನ್ ತಮ್ಮ ನೆಚ್ಚಿನ ಕುದುರೆಯನ್ನು ನೆನಪಿಸಿಕೊಂಡರು.
"ಜಾಸ್ತಿ ಮಾತನಾಡಲ್ಲ. ಯಾಕಂದರೆ ಎಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು. 10ನೇ ಕ್ಲಾಸ್ ಪಾಸ್ ಆಗಿರುವವನು ಇಂಜಿನಿಯರ್ ವಿದ್ಯಾರ್ಥಿಗಳ ಎದುರು ಮಾತನಾಡುವುದು ಕಷ್ಟ. ವಿದ್ಯಾರ್ಥಿಗಳು ನೀವೆಲ್ಲಾ ಅಂದುಕೊಂಡಂತೆ ಲೈಫ್ ಇಲ್ಲ. ನನ್ನ ಸ್ನೇಹಿತರೇ ಕೆಲವರು ಇಂಜಿನಿಯರಿಂಗ್ ಓದಿ ಬೇರೆ ಏನೋ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಎಲ್ಲರೂ ತಮ್ಮ ಗುರಿಯ ಕಡೆ ಗಮನ ಹರಿಸಿ. ಗುರಿಯನ್ನು ಬಿಡಬೇಡಿ"

"ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಧನ್ಯವಾದ. ಯಾಕಂದರೆ ನಮ್ಮನ್ನು ಬಿಟ್ಟು ಯಾವುದೇ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಬಿಜಿಎಸ್ ಸ್ಕೂಲ್ ಜೊತೆ ನನಗೆ ಒಂದು ರೀತಿ ಅವಿನಾಭಾವ ಸಂಬಂಧ. ಎಲ್ಲೇ ಇದ್ದರೂ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೇವೆ. ನನಗೆ ಕುದುರೆ ಬೇರೆ ಕೊಟ್ಟರು. ಏನ್ ಸ್ವಾಮಿ ನನಗೆ ಕುದುರೆ ಕೊಟ್ಟಿದ್ದೀರಾ ಎಂದೆ. ಇಲ್ಲ ದರ್ಶನ್, ನಿನಗೆ ಚೆನ್ನಾಗಿರುತ್ತದೆ ಎಂದರು"
"ನನ್ನ ಕುದುರೆ ನಡುವಿನ ಸಂಬಂಧವನ್ನು ಏನೆಂದು ಹೇಳಲಿ. ಒಂದೇ ಆತ್ಮ ಎಂದು ಹೇಳ್ತೀನಿ. ನಾಯಿಗಿಂತ ನಿಯತ್ತಾದ ಪ್ರಾಣಿ ಕುದುರೆ. ತನ್ನ ಹೆಗಲ ಮೇಲೆ ಯಾರು ಏರುತ್ತಾನೆ, ಅದಕ್ಕಿಂತ ತನ್ನನ್ನು ಯಾರು ಚೆನ್ನಾಗಿ ನೋಡಿಕೊಳ್ತಾನೆ? ಪ್ರೀತಿ ಮಾಡ್ತಾನೆ, ಅವನ ಬಳಿ ಸಲುಗೆಯಿಂದ ಇರುತ್ತದೆ. ನನ್ನ ಬಳಿ ಸ್ಟಾನ್ಲಿ ಎನ್ನುವ ಕುದುರೆ ಒಂದಿತ್ತು. ನನ್ನ ಹತ್ರ ಅವನು ಏನು ಕಂಡುಕೊಂಡ್ನೋ ಅವ್ನ ಬಳಿ ನಾನು ಏನು ಕಂಡುಕೊಂಡ್ನೊ ಗೊತ್ತಿಲ್ಲ. ಅಂತಹ ಒಳ್ಳೆಯ ಕುದುರೆ ಅದು"
"ಮೈಸೂರು ರೇಸ್ಕೋರ್ಸ್ನಲ್ಲಿ ಸಾಕಷ್ಟು ಒಳ್ಳೆಯ ಜಾಕೀಗಳು ಇದ್ದಾರೆ. ಅವ್ರು ಎಂಥಹ ಕುದುರೆ ಆದರೂ ಸವಾರಿ ಮಾಡುತ್ತಾರೆ. ಅಂತಹವರನ್ನು ಕರೆದುಕೊಂಡು ಬಂದು ಸ್ಟಾನ್ಲಿ ಏರಿ ಸವಾರಿ ಮಾಡು ಅಂದೆ. ಅವ್ನು ಸ್ಟೈಲ್ ಆಗಿ ಹತ್ತಿ ಕೂತು ಹೋದ. ತಬಕ್ ಅಂತ ಬಿದ್ದು ಬಂದುಬಿಟ್ಟ. ನಾನು ಏನಾಯ್ತು ಅಂದೆ. ಗೊತ್ತಿಲ್ಲ ಭಾಯ್ ಬೀಳಿಸಿಬಿಡ್ತು ಅಂದ. ಹಾಗೆ ಕುದುರೆಗಳು ಹೇಗೆ ಅಂತ ಹೇಳೋಕ್ಕಾಗಲ್ಲ. ಸ್ವಾಮಿಜಿ ಕುದುರೆ ಕೊಟ್ಟಿದ್ದಕ್ಕೆ ಧನ್ಯವಾದ" ಎಂದು ದರ್ಶನ್ ಹೇಳಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ದರ್ಶನ್ ಸದ್ಯ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುವ ನಿರೀಕ್ಷೆಯಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಇನ್ನು 'ಗರಡಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸಿದ್ದಾರೆ.


Click it and Unblock the Notifications











