ಸ್ಟೈಲ್ ಆಗಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ; ಇತ್ತ ಡಿ ಕಂಪನಿ ಮೂಲಕ ಹೊಸ ಸಂದೇಶ
ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳ್ಳಂ ಬೆಳಗ್ಗೆ ಬಿಗಿ ಭದ್ರತೆ ನಡೆವೆ ಪೊಲೀಸರು ದರ್ಶನ್ನ ಬಳ್ಳಾರಿ ಕಡೆ ಕರೆದೊಯ್ದರು. ಜೈಲು ಡೈರಿಯಲ್ಲಿ ಮಾಹಿತಿ ಸಂಗ್ರಹಿಸಿದ ಬಳಿಕ ಅಲ್ಲಿ ಜೈಲು ಸಿಬ್ಬಂದಿ ವಶಕ್ಕೆ ಪಡೆದರು.
ಕೈಗೆ ಕಡಗ, ಸನ್ಗ್ಲಾಸ್, ಬ್ರ್ಯಾಂಡೆಡ್ ಟೀ-ಶರ್ಟ್ ತೊಟ್ಟು ದರ್ಶನ್ ಬಳ್ಳಾರಿ ಜೈಲಿನ ಒಳಗೆ ಹೋದ ವೀಡಿಯೋಗಳು ವೈರಲ್ ಆಗುತ್ತಿದೆ. ಇನ್ನು ಸನ್ಗ್ಲಾಸ್, ಕಡ, ಕತ್ತಿನ ಮಣಿ ಹಾರ ಎಲ್ಲವನ್ನು ಪೊಲೀಸರು ಅಲ್ಲಿ ತೆಗೆಸಿದರು. ಬೆಂಗಳೂರಿನಲ್ಲಿ ರಾಜಾತಿಥ್ಯ ನೀಡಿ ಎಡವಟ್ಟು ಆಗಿದ್ದರಿಂದ ಬಳ್ಳಾರಿ ಜೈಲಿನಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಸಹ ನೀಡಲಾಗಿದೆ.

ಬೆಳಗ್ಗೆ 4.30ರ ಸುಮಾರಿಗೆ ದರ್ಶನ್ನ ಪೊಲೀಸರು ಬಳ್ಳಾರಿಗೆ ಕರೆದೊಯ್ದರು. ಶಿರಾ-ಹಿರಿಯೂರು ಮಾರ್ಗವಾಗಿ ಕರೆದೊಯ್ಯಲಾಯಿತು. 326 ಕಿಲೋ ಮೀಟರ್ ಪ್ರಯಾಣಿಸಿ ಬೆಳಗ್ಗೆ 10 ಗಂಟೆ ವೇಳೆಗೆ ಬಳ್ಳಾರಿ ಜೈಲು ತಲುಪಿದರು. ಇನ್ನು ಜೈಲಿನ ಮುಂದೆ ಕೆಲ ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕಿದರು. ಈ ವೇಳೆ ಪೊಲೀಸರು ಲಾಠಿ ಬೀಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ರೌಡಿಗಳನ್ನು ದರ್ಶನ್ ಭೇಟಿ ಮಾಡಿದ್ದು ವೀಡಿಯೋ ಕಾಲ್ನಲ್ಲಿ ಮಾತನಾಡಿದ್ದಕ್ಕೆ 3 ಎಫ್ಐಆರ್ ದಾಖಲಾಗಿದೆ. ಈಗಾಗಲೇ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು ಅಂದು ಏನಾಯಿತು ಎನ್ನುವುದನ್ನು ದರ್ಶನ್ ವಿವರಿಸಿದ್ದಾರೆ. ಇನ್ನು ದರ್ಶನ್ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 9ರವರೆಗೆ ವಿಸ್ತರಣೆ ಆಗಿದೆ.
ದರ್ಶನ್ ಮಾತ್ರವಲ್ಲ ಪ್ರಕರಣದ ಕೆಲ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಲಿದ್ದಾರೆ. ಇನ್ನು ಬಳ್ಳಾರಿ ಜೈಲು ಪ್ರವೇಶಿಸುತ್ತಿದ್ದಂತೆ 511 ಎನ್ನುವ ವಿಚಾರಣಧೀನ ಕೈದಿ ಸಂಖ್ಯೆಯನ್ನು ದರ್ಶನ್ಗೆ ನೀಡಲಾಗಿದೆ. ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ 6106 ಸಂಖ್ಯೆ ಸಿಕ್ಕಿತ್ತು. ಅದನ್ನು ಕೆಲ ಅಂದಾಭಿಮಾನಿಗಳು ಟ್ರೆಂಡ್ ಮಾಡಿದ್ದರು.
ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅಭಿಮಾನಿಗಳು ಕೆಟ್ಟ ಕೆಟ್ಟ ಪೋಸ್ಟ್ ಮಾಡುವುದು ಮುಂದುವರೆದಿದೆ. ಕೆಲ ಅಂದಾಭಿಮಾನಿಗಳು ಬಹಳ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮಾಧ್ಯಮಗಳನ್ನು ಟ್ರೋಲ್ ಮಾಡಲಾಗ್ತಿದೆ. ಇದು ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾರಕ್ಕೆ ಕಾರಣವಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾತ್, ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕೆಟ್ಟ ಪೋಸ್ಟ್ಗಳು ಕಳೆದೆರಡು ದಿನಗಳಿಂದ ಸದ್ದು ಮಾಡ್ತಿದೆ.
ಇದೀಗ ದರ್ಶನ್ ಅಧಿಕೃತ ಅಭಿಮಾನಿ ಸಂಘ, ಡಿಕಂಪೆನಿಯಿಂದ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಲಾಗಿದೆ. "ಡಿಬಾಸ್ ಸೆಲೆಬ್ರಿಟಿಗಳಲ್ಲಿ ವಿನಂತಿ. ಸಮಸ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳಲ್ಲಿ ವಿನಂತಿ. ನಮ್ಮ ಪ್ರೀತಿಯ ಡಿ ಬಾಸ್ ರವರು ಆರೋಪ ಮುಕ್ತರಾಗಿ ಬರುವವರೆಗೂ ಯಾವೂದೇ ಮಾಧ್ಯಮ, ಹಾಗೂ ಬೇರೆ ನಟರುಗಳ ಅಭಿಮಾನಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕಾಗಿ ವಿನಂತಿ. ನಮ್ಮಿಂದ ಬಾಸ್ ಗೆ ಯಾವುದೇ ತೊಂದರೆಯಾಗದಿರಲಿ" ಎಂದು ಪೋಸ್ಟ್ ಮಾಡಲಾಗಿದೆ.


Click it and Unblock the Notifications











