ರೈತರಿಂದ ನೇರವಾಗಿ ತರಕಾರಿ ಖರೀದಿಸಿ ರೈತರನ್ನು ಉಳಿಸಿ: ಅನ್ನದಾತರ ಬೆನ್ನಿಗೆ ನಿಂತ ದರ್ಶನ್
ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದ ಇಡೀ ದೇಶವೆ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ರೈತರು ಪಾಡು ಕೇಳುವವರೇ ಇಲ್ಲ. ಲಾಕ್ ಡೌನ್ ನಿಂದ ಪರದಾಡುತ್ತಿರುವ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಸಾಗಿಸಲಾಗದೆ ಕಂಗಾಲಾಗಿದ್ದಾರೆ.
ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ತರಕಾರಿ, ಹಣ್ಣುಗಳು ಜಮೀನಿನಲ್ಲಿಯೆ ಕೊಳೆಯುತ್ತಿವೆ. ಕೆಲವರು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಸಾಗಿಸಿದರೂ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಲಾಕ್ ಡೌನ್ ನಂತರ ತರಕಾರಿ ಬೆಲೆ ಗಗನಕ್ಕೆ ಏರಿದೆ. ಆದರೆ ರೈತರು ಮಾತ್ರ ಅಗ್ಗದ ಬೆಲೆಯಲ್ಲಿಯೆ ಮಾರಾಟ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಕಷ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪಂದಿಸಿದ್ದಾರೆ. ಮುಂದೆ ಓದಿ...

ರೈತರ ಪರ ನಿಂತ ದರ್ಶನ್
ಹಾಗಾಗಿ ಈಗ ಮಧ್ಯವರ್ತಿಗಳ ಸಹಾಯವಿಲ್ಲದೆ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ತರಕಾರಿಗಳನ್ನು ರೈತರಿಂದನೆ ಕೊಂಡುಕೊಂಡು ಅವರಿಗೆ ಸೇರಬೇಕಾದ ಹಣ ಅವರ ಪಾಲಾಗುವಂತೆ ಸಹಕರಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿದ ದರ್ಶನ್
ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ "ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ಮುಂದಾಗಿದ್ದು ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ.ಅವರಿಗೆ ಧಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ.ಧನ್ಯವಾದಗಳು"ಎಂದಿದ್ದಾರೆ.

ಕಷ್ಟ ಎಂದವರಿಗೆ ಸದಾ ಸಹಾಯ ಹಸ್ತ ಚಾಚುವ ದಚ್ಚು
ಕಷ್ಟ ಎಂದವರಿಗೆ ಸದಾ ಸಹಾಯ ಹಸ್ತ ಚಾಚುವ ಅಭಿಮಾನಿಗಳ ಪ್ರೀತಿಯ ದಾಸ ರೈತರ ಸಂಕಷ್ಟಕ್ಕು ನೆರವಾಗಿದ್ದಾರೆ. ಸದಾ ರೈತರ ಪರ ನಿಲ್ಲುವ ದರ್ಶನ್ ಈ ಬಾರಿಯೂ ರೈತರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕಷ್ಟ ಎಂದವರ ಪರ ನಿಲ್ಲುವ ದರ್ಶನ್ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ.
ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾಗಿ
ಕೊರೊನಾ ವೈರಸ್ ಹಾವಳಿಯಿಂದ ಒಂದೊತ್ತು ಊಟಕ್ಕೂ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ದರ್ಶನ್ ಟ್ವೀಟ್ ಮಾಡಿ "ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು" ಎಂದು ಟ್ವೀಟ್ ಮಾಡಿದ್ದರು.

ಡಿ ಬಾಸ್ ಅಭಿಮಾನಿಗಳ ಸಹಾಯ
ದರ್ಶನ್ ಅಭಿಮಾನಿಗಳು ರಾಜ್ಯದಾದ್ಯಂತ ಬಡವರಿಗೆ. ಹಸಿದವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಊಟ, ತಿಂಗಳ ರೇಷನ್, ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಬೀದಿ ಬೀದಿ ಸುತ್ತಾಡಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಕೆಲಸಕ್ಕೆ ರಾಜಕಾರಣಿಗಳಿಂದ ಮೆಚ್ಚುಗೆಯು ವ್ಯಕ್ತವಾಗಿದೆ.


Click it and Unblock the Notifications











