ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
ವಾರಪೂರ್ತಿ ಕೆಲಸ ಮಾಡುವ ಜನರು ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೀಕೆಂಡ್ ಪಾರ್ಟಿ, ವೀಕೆಂಡ್ ಪ್ರವಾಸ, ವೀಕೆಂಡ್ ರೈಡ್, ಸಿನಿಮಾ, ಪಬ್ ಹೀಗೆ ಆಧುನಿಕ ಜನರ ಮನಸ್ಥಿತಿಯೇ ಹೀಗಾಗಿದೆ. ಇದೀಗ, ರಾಜ್ಯದಲ್ಲಿ 'ವೀಕೆಂಡ್ ಅಗ್ರಿಕಲ್ಚರ್' ಎಂಬ ಕೂಗು ಕೇಳಿ ಬರುತ್ತಿದೆ.
ವಾರಾಂತ್ಯದಲ್ಲಿ ನಗರ ಪ್ರದೇಶದ ಜನರು ಕೃಷಿಚಟುವಟಿಕೆಗಳಲ್ಲಿ ಭಾಗವಹಿಸುವುದು ಸಮಾಜ ಹಾಗೂ ಮುಂದಿನ ಪೀಳಿಗೆ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯ ಇದೆ. ಸಹಜವಾಗಿ 'ವೀಕೆಂಡ್ ಅಗ್ರಿಕಲ್ಚರ್' ಎನ್ನುವುದು ಬರಿ ಮಾತಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಕಾರ್ಯರೂಪಕ್ಕೆ ಬಂದಿರುವ ಉದಾಹರಣೆ ಬಹಳ ಕಡಿಮೆ. ಇದೀಗ, ಕರ್ನಾಟಕ ಕೃಷಿ ಇಲಾಖೆ 'ವೀಕೆಂಡ್ ಅಗ್ರಿಕಲ್ಚರ್' ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹೆಜ್ಜೆಯಿಟ್ಟಿದೆ. ಮುಂದೆ ಓದಿ...

ಕೃಷಿ ಇಲಾಖೆಗೆ ದರ್ಶನ್ ರಾಯಭಾರಿ
ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನಟ ದರ್ಶನ್ ನೇಮಕಗೊಂಡಿದ್ದಾರೆ. ಇತ್ತೀಚಿಗಷ್ಟೆ ದರ್ಶನ್ ಅವರನ್ನು ಭೇಟಿ ಮಾಡಿದ ಕೃಷಿ ಸಚಿವ ಬಿಸಿ ಪಾಟೀಲ್ ಈ ವಿಚಾರವನ್ನು ಘೋಷಣೆ ಮಾಡಿದ್ದರು. ''ರಾಜ್ಯದ ಅನ್ನದಾತರ ಏಳಿಗೆಗೆ ಕೈಜೋಡಿಸುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು'' ಎಂದು ಪೋಸ್ಟ್ ಸಹ ಹಾಕಿದ್ದರು.

'ವೀಕೆಂಡ್ ಅಗ್ರಿಕಲ್ಚರ್'ಗೆ ಡಿ-ಬಾಸ್ ಸಾಥ್
ರಾಜ್ಯದ ಕೃಷಿ ಇಲಾಖೆಯಲ್ಲಿ ಹಲವಾರು ಮಹತ್ತರ ಬದಲಾವಣೆ ಹಾಗೂ ನಾಡಿನ ಯುವ ಜನತೆಗೆ "ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ" ಪರಿಚಯಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ನಟ ದರ್ಶನ ಅವರು ಮುಕ್ತ ಮನಸ್ಸಿನಿಂದ ಕೈ ಜೋಡಿಸಿದ್ದಾರೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ. 'ಚಿತ್ರರಂಗದ ವೃತ್ತಿ ಬದುಕಿನ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ದರ್ಶನ ಅವರು ನಾಡಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ, ಅವರ ಪರಿಸರ ಪ್ರಜ್ಞೆ, ಪ್ರಾಣಿ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳೆಡಗಿನ ಒಲವು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದೆ' ಎಂದು ಧನ್ಯವಾದ ತಿಳಿಸಿದ್ದಾರೆ.

'ಮಹರ್ಷಿ' ಚಿತ್ರದಲ್ಲಿ ವೀಕೆಂಡ್ ಅಗ್ರಿಕಲ್ಚರ್
'ವೀಕೆಂಡ್ ಅಗ್ರಿಕಲ್ಚರ್' ಎನ್ನುವುದು ಬಹಳ ಜನರ ಕಲ್ಪನೆ. ಬಹಳ ವರ್ಷದಿಂದಲೂ ಇಂತಹದೊಂದು ಸಂಸ್ಕೃತಿ ಯುವಕರಲ್ಲಿ ಬೆಳೆಯಬೇಕು ಎನ್ನುವ ಆಶಯವೂ ಇದೆ. ಆದರೆ, ಇದು ಹೆಚ್ಚು ಪ್ರಭಾವ ಬೀರಿಲ್ಲ. 2019ರಲ್ಲಿ ಮಹೇಶ್ ಬಾಬು ನಟನೆಯ 'ಮಹರ್ಷಿ' ಚಿತ್ರದಲ್ಲಿ 'ವೀಕೆಂಡ್ ಅಗ್ರಿಕಲ್ಚರ್' ಕುರಿತು ವಿಶೇಷವಾಗಿ ತೋರಿಸಲಾಗಿತ್ತು. ಈ ಸಿನಿಮಾದ ನೋಡಿದ ಬಳಿಕ 'ವೀಕೆಂಡ್ ಅಗ್ರಿಕಲ್ಚರ್' ಎನ್ನುವುದು ಕೆಲವರಿಗೆ ಮಾದರಿಯೂ ಆಗಿರುವ ಉದಾಹರಣೆಗಳು ವರದಿಯಾಗಿದೆ.

ವಾರಾಂತ್ಯದಲ್ಲಿ ಕೃಷಿ ಮಾಡುವ ಯುವ ಜನತೆ!
ವಾರಪೂರ್ತಿ ಕಂಪನಿ ಅಥವಾ ಇನ್ನಿತರ ಖಾಸಗಿ ಕೆಲಸಗಳಲ್ಲಿ ಮಾಡುವ ಅನೇಕ ಯುವ ಜನರು, ವೀಕೆಂಡ್ನಲ್ಲಿ ಕೃಷಿ ಚಟುವಟಿಕೆ ತೊಡಗಿಕೊಳ್ಳುತ್ತಿದ್ದಾರೆ. ಈಗ ಕೃಷಿ ಇಲಾಖೆಯೇ ಖುದ್ದು ಇಂತಹದೊಂದು ಸಂಸ್ಕೃತಿಯನ್ನು ಪ್ರೋತ್ಸಾಹ ಮಾಡುತ್ತಿರುವುದು ಉತ್ತಮ ನಿರ್ಧಾರ. ಇದಕ್ಕೆ ನಟ ದರ್ಶನ್ ಅಂತಹ ನಟನನ್ನು ಆಯ್ಕೆ ಮಾಡಿಕೊಂಡಿರುವುದು ಸಹ ಸ್ವಾಗತರ್ಹ ಎಂದು ಹೇಳಲಾಗುತ್ತಿದೆ.

ರೈತರ ಪರ ನಿಂತ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೈತರ ಪರ ಸದಾ ದನಿಯಾಗಿದ್ದಾರೆ. ತಮ್ಮ ಸಿನಿಮಾಗಳಲ್ಲಿ ರೈತ ಪರ ಕಾಳಜಿ ವಹಿಸುತ್ತಾರೆ. ರೈತರ ಮಹತ್ವವನ್ನು ತೋರಿಸುತ್ತಾರೆ. ಮೈಸೂರಿನಲ್ಲಿ ಫಾರ್ಮ್ಹೌಸ್ ಹೊಂದಿದ್ದು, ಪ್ರಾಣಿಗಳನ್ನು ಸಾಕುತ್ತಾರೆ. ಇದೇ ಕಾರಣದಿಂದ ಕೃಷಿ ಸಚಿವ ಬಿಸಿ ಪಾಟೀಲ್ ಅವರು ಡಿ ಬಾಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.


Click it and Unblock the Notifications











