ಕೆಂಪೇಗೌಡರ ಜಯಂತಿ ಶುಭಾಶಯ ಕೋರಿದ ದರ್ಶನ್ ಮಾಡಿದರೊಂದು ಯಡವಟ್ಟು
ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ನಾಡಿನೆಲ್ಲೆಡೆ ಸರಳವಾಗಿ ಆಚರಿಸಲಾಗಿದೆ. ಹಲವಾರು ರಾಜಕಾರಣಿಗಳು, ಸೆಲೆಬ್ರಿಟಿಗಳು ಕೆಂಪೇಗೌಡ ಜಯಂತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ನಟ ದರ್ಶನ್ ಸಹ ಕೆಂಪೇಗೌಡರ ಜಯಂತಿಯ ದಿನದಂದು ಚಿತ್ರವೊಂದನ್ನು ಪ್ರಕಟಿಸಿ ಶುಭಾಶಯಗಳನ್ನು ಕೋರಿದ್ದಾರೆ, ಆದರೆ ಕೆಂಪೇಗೌಡರ ಚಿತ್ರದ ಬದಲಿಗೆ ವೀರ ಮದಕರಿ ನಾಯಕರ ಚಿತ್ರವನ್ನು ದರ್ಶನ್ ಬಳಸಿದ್ದಾರೆ.
ಕೆಂಪೇಗೌಡರ ಹಾಗೂ ವೀರ ಮದಕರಿ ನಾಯಕರ ಚಿತ್ರಗಳು ಬಹುವಾಗಿ ಹೋಲುತ್ತವೆ ಎರಡರಲ್ಲೂ ತುಸುವಷ್ಟೆ ವ್ಯತ್ಯಾಸ ಆದರೆ ಈ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿರುವ ದರ್ಶನ್, ಕೆಂಪೇಗೌಡರ ಜಯಂತಿ ಶುಭಾಶಯ ಕೋರಲು ವೀರ ಮದಕರಿ ನಾಯಕರ ಚಿತ್ರವನ್ನು ಹಾಕಿದ್ದಾರೆ.

ದರ್ಶನ್ ಹಾಕಿರುವ ಪೋಸ್ಟ್ ಏನು?
'ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ' ಎಂದು ಕಾಳಜಿಯುಕ್ತ ಪೋಸ್ಟ್ ಅನ್ನೇ ದರ್ಶನ್ ಹಾಕಿದ್ದಾರೆ ಆದರೆ ಚಿತ್ರವನ್ನು ಹಾಕುವಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

ಎರಡೂ ಚಿತ್ರದಲ್ಲಿ ಇರುವ ವ್ಯತ್ಯಾಸವೇನು?
ವೀರ ಮದಕರಿ ನಾಯಕರ ಚಿತ್ರ ಹಾಗೂ ಕೆಂಪೇಗೌಡರ ಚಿತ್ರಗಳಲ್ಲಿ ಬಹು ಸಾಮ್ಯತೆ ಇದೆ. ಕೆಂಪೇಗೌಡರ ಚಿತ್ರದಲ್ಲಿನ ಮುಕುಟ ಕೋಡು ನೇರವಾಗಿದ್ದರೆ, ವೀರ ಮದಕರಿ ನಾಯಕರ ಚಿತ್ರದಲ್ಲಿನ ಮುಕುಟ ತುಸು ಓರೆಯಾಗಿರುತ್ತದೆ. ಹಲವು ಚಿತ್ರಗಳು, ವಿಗ್ರಹಗಳಲ್ಲಿ ಕೆಂಪೇಗೌಡರ ಕಿರೀಟಕ್ಕೆ ಕೋಡು ಇರುವುದಿಲ್ಲ. ಹಲವರು ಕೆಂಪೇಗೌಡರ ಹಾಗೂ ವೀರ ಮದಕರಿ ಅವರ ಚಿತ್ರವನ್ನು ಗೊಂದಲ ಮಾಡಿಕೊಳ್ಳುತ್ತಾರೆ.

ತಪ್ಪು ಚಿತ್ರ ಹಾಕಿದ್ದಕ್ಕೆ ಅಸಮಾಧಾನ
ಕೆಂಪೇಗೌಡರ ಚಿತ್ರದ ಬದಲಿಗೆ ವೀರ ಮದಕರಿ ನಾಯಕರ ಚಿತ್ರವನ್ನು ದರ್ಶನ್ ಬಳಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳೇ ಹೀಗೆ ತಪ್ಪು ಮಾಹಿತಿ ಹಂಚಿಕೊಳ್ಳುವುದು ಥರವಲ್ಲ ಎಂದಿದ್ದಾರೆ ಇನ್ನು ಕೆಲವರು.

ದರ್ಶನ್ ಪರವಾಗಿಯೂ ಕಮೆಂಟ್ ಹಾಕಿದ್ದಾರೆ
ದರ್ಶನ್ ಅವರ ಪರವಾಗಿಯೂ ಕೆಲವರು ಕಮೆಂಟ್ ಮಾಡಿದ್ದು, 'ಹಲವಾರು ವಿದ್ಯಾವಂತರೇ ಕೆಂಪೇಗೌಡರ ಜಯಂತಿಗೆ ಮದಕರಿ ನಾಯಕರ ಚಿತ್ರ ಬಳಸುತ್ತಾರೆ. ದರ್ಶನ್ ಅವರು ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮನಸ್ಸಿನಿಂದಲೇ ಪೋಸ್ಟ್ ಹಾಕಿದ್ದಾರೆ ಆದರೆ ಕಣ್ತಪ್ಪಿ ಚಿತ್ರಗಳನ್ನು ಬಳಸಿದ್ದಾರೆ ಎಂದಿದ್ದಾರೆ.


Click it and Unblock the Notifications











