ಜಾಮೀನು ಸಿಗುವುದು ಪಕ್ಕಾ, ಜೈಲಿನಿಂದ ಆಪ್ತರಿಗೆ ದರ್ಶನ್ ಸಂದೇಶ ರವಾನೆ!
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಕ್ಷಣಗಣನೆ ಶುರುವಾಗಿದೆ. ಶತಯಗತಾಯ ಇವತ್ತು(ಅಕ್ಟೋಬರ್ 28) ನೆಚ್ಚಿನ ನಟನಿಗೆ ಬಿಗ್ ರಿಲೀಫ್ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿ 4 ತಿಂಗಳು ಕಳೆದಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಜಾಮೀನು ಪಡೆಯಲು ಯತ್ನಿಸಿದ್ದರು. ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಬೇಲ್ ಅರ್ಜಿ ವಿಚಾರಣೆ ನಡೆಸಿ ದರ್ಶನ್ ಪರ ವಕೀಲರ ಮನವಿಯನ್ನು ನ್ಯಾಯಾಲಯ ನಿರಾಕರಿಸಿತ್ತು. ಬಳಿಕ ಹೈಕೋರ್ಟ್ನಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಒಮ್ಮೆ ವಿಚಾರಣೆ ನಡೆಸಿ ಇಂದಿಗೆ ವಿಚಾರಣೆ ಮುಂದೂಡಲಾಗಿತ್ತು.

ನಟ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಂಡನೆ ಮಾಡುತ್ತಿದ್ದಾರೆ. ಅದಕ್ಕೆ ಪ್ರಾಸಿಕ್ಯೂಷನ್ ಪ್ರಸನ್ನ ಕುಮಾರ್ ಪ್ರತಿವಾದ ಮುಂದಿಡುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ದರ್ಶನ್ ಇರಲಿಲ್ಲ, ತನಿಖಾಧಿಕಾರಿಗಳು ಸುಳ್ಳು ಸಾಕ್ಷ್ಯಾಧಾರ ಸೃಷ್ಟಿಸಿದ್ದಾರೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದರು. ಬಳಿಕ ಆರೋಗ್ಯ ಸಮಸ್ಯೆ ಕಾರಣ ನೀಡಿ ತಮ್ಮ ಕಕ್ಷಿದಾರರನಿಗೆ ಜಾಮೀನು ನೀಡಬೇಕು ಎಂದು ಆಗ್ರಹಿಸಿದ್ದರು.
ದಿನದಿಂದ ದಿನಕ್ಕೆ ದರ್ಶನ್ ಬೆನ್ನುಹುರಿ ಗಂಭೀರ ಸ್ವರೂಪ ಪಡೆಯುತ್ತಿದೆ. ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಫಿಸಿಯೋಥೆರಫಿ ಕೂಡ ಆರಂಭಿಸಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವುದಾಗಿ ಹೇಳುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದರ್ಶನ್ಗೆ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ದರ್ಶನ್ ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯರ ವರದಿ ಇಂದು ನ್ಯಾಯಾಧೀಶರ ಮುಂದಿಡಲಾಡುತ್ತಿದೆ.
ನಟ ದರ್ಶನ್ ಆರೋಗ್ಯ ಸಮಸ್ಯೆ ವಿಚಾರವೇ ಇವತ್ತು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಮುಖ ಪಾತ್ರ ವಹಿಸಲಿದೆ. ಈ ಬಾರಿ ಜಾಮೀನು ಸಿಕ್ಕೇ ಸಿಗುತ್ತದೆ ಎಂದು ನಟ ದರ್ಶನ್ ಬಹಳ ಭರವಸೆಯಿಂದ ಇದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರವನ್ನು ತಮ್ಮ ಆಪ್ತರಿಗೂ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಾಮೀನು ಸಿಗದಿದ್ದರೂ ಕೊನೆಪಕ್ಷ ಬೆಂಗಳೂರಿಗೆ ಶಿಫ್ಟ್ ಆಗಲು ನ್ಯಾಯಾಲಯದಿಂದ ಅನುಮತಿ ಸಿಗುವ ಭರವಸೆಯಲ್ಲಿ ದರ್ಶನ್ ಇದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಕುಟುಂಬ ಸದಸ್ಯರ ಜೊತೆ ಚಿತ್ರರಂಗದ ತಾರೆಯರು ಭೇಟಿ ಮಾಡಿ ಮಾಡಿದ್ದರು. ಆದರೆ ಇಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿಬಂದ ಬಳಿಕ ಬಳ್ಳಾರಿ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿತ್ತು. ಅಲ್ಲಿಗೆ ಹೋದ ಬಳಿಕ ರಕ್ತ ಸಂಬಂಧಿಗಳು ಮಾತ್ರ ಭೇಟಿ ಮಾಡಲು ಅವಕಾಶ ಎಂದು ಜೈಲಾಧಿಕಾರಿಗಳು ಹೇಳಿದ್ದರು. ಒಂದು ವೇಳೆ ಬೇರೆ ಯಾರಾದರೂ ಹೋಗಿ ಭೇಟಿ ಮಾಡಬೇಕು ಎಂದರೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದರು.
ದರ್ಶನ್ ಬಳ್ಳಾರಿ ಜೈಲಿಗೆ ತೆರಳಿದ ಬಳಿಕ ಸೆಲೆಬ್ರೆಟಿಗಳು ಹೋಗಿ ಭೇಟಿ ಮಾಡಲಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಸೇರಿದಂತೆ ಕೆಲವೇ ಆಪ್ತರಿಗೆ ಮಾತ್ರ ಭೇಟಿಗೆ ಅವಕಾಶ ಸಿಗುತ್ತಿತ್ತು. ಕೆಲವರು ಮಾತ್ರ ನ್ಯಾಯಾಲಯದ ಅನುಮತಿ ಪಡೆದು ಹೋಗಿ ಭೇಟಿ ಮಾಡಿದ್ದರು.
ದರ್ಶನ್ ಆಪ್ತರಲ್ಲಿ ಕೆಲವರು ಬಳ್ಳಾರಿ ಜೈಲಿಗೆ ತೆರಳಿ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮಿ ಬಳಿ ಮನವಿ ಮಾಡುತ್ತಲೇ ಇದ್ದಾರಂತೆ. "ನನಗೆ ಜಾಮೀನು ಸಿಗುತ್ತದೆ, ಆದಷ್ಟು ಬೇಗ ಬೆಂಗಳೂರಿಗೆ ಬರ್ತೀನಿ, ಯಾರು ಇಲ್ಲಿಗೆ ಬರಲು ಹೋಗಬೇಡಿ" ಎಂದು ಅವರಿಗೆ ದರ್ಶನ್ ಸಂದೇಶ ರವಾನಿಸಿದ್ದಾರೆ ಎನ್ನಲಾಗ್ತಿದೆ. ಈ ಬಾರಿ ಜಾಮೀನು ಸಿಗುವ ಬಗ್ಗೆ ದರ್ಶನ್ ಬಹಳ ಭರವಸೆಯಿಂದ ಇದ್ದಾರೆ ಎಂದು ಹೇಳಲಾಗ್ತಿದೆ.


Click it and Unblock the Notifications











