ಕೊಟ್ಟಿಯೂರು ಆಲಯಕ್ಕೆ ದರ್ಶನ್ ದಿಢೀರ್ ಭೇಟಿ ಯಾಕೆ? ಆ ದೇವಸ್ಥಾನದ ಇತಿಹಾಸ, ಮಹತ್ವ ಏನು?
ನಟ ದರ್ಶನ್ ಟೆಂಪಲ್ ರನ್ ಮುಂದುವರೆದಿದೆ. ಮೊದಲಿನಿಂದಲೂ ದರ್ಶನ್ ಕರ್ನಾಟಕ ಹಾಗೂ ಹೊರರಾಜ್ಯಗಳ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಕೇರಳದ ಶ್ರೀ ಭಗವತಿ ಆಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ಮಾಡಿಸಿದ್ದು ಗೊತ್ತೇಯಿದೆ. ಈಗ ದೇವರನಾಡಿನ ಮತ್ತೊಂದು ಪುರಾಣ ಪ್ರಸಿದ್ಧ ದೇವಸ್ಥಾನಕ್ಕೆ ಫ್ಯಾಮಿಲಿ ಸಮೇತ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಇದ್ದಕ್ಕಿದ್ದಂತೆ ದರ್ಶನ್ ಕೇರಳದ ಕೊಟ್ಟಿಯೂರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ಒಂದು ಕಾರಣವೂ ಇದೆ. ಆ ದೇವಸ್ಥಾನದಲ್ಲಿ ಈಗ ವೈಶಾಖ ಮಾಸದ ಉತ್ಸವ ನಡೀತ್ತಿದೆ. ಈ ಸಮಯದಲ್ಲಿ ಅಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸುವುದು ಬಹಳ ವಿಶೇಷ. ಭಕ್ತರ ಬೇಡಿದ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ವರ್ಷದ ಒಂದು ತಿಂಗಳು ದಿನ ಮಾತ್ರ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಜೂನ್ 30ರ ಬಳಿಕ ಮಹಿಳೆಯರು ಈ ದೇವಸ್ಥಾನಕ್ಕೆ ಹೋಗಲು ಅವಕಾಶವಿಲ್ಲ. ಹಾಗಾಗಿ ನಾನಾ ಭಾಗಗಳಿಂದ ಭಕ್ತರು ಇದೇ ಸಮಯದಲ್ಲಿ ಅಲ್ಲಿಗೆ ತೆರಳಿ ದೇವರ ದರ್ಶನ ಪಡೆದು ಬರುತ್ತಾರೆ.

ಅಂದಹಾಗೆ ಕೇರಳ ಕಣ್ಣೂರಿನ ಬಾವಲಿ ನದಿಯ ಎರಡೂ ದಡಗಳಲ್ಲಿ ಅಕ್ಕರೆ ಕೊಟ್ಟಿಯೂರು ದೇವಸ್ಥಾನ ಹಾಗೂ ಇಕ್ಕರೆ ಕೊಟ್ಟಿಯೂರು ಎನ್ನುವ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಆಲಯಕ್ಕೆ ಭಕ್ತರು ವರ್ಷವಿಡೀ ಭೇಟಿ ನೀಡಬಹುದು. ಆದರೆ ಅಕ್ಕರೆ ಕೊಟ್ಟಿಯೂರು ಆಲಯ ವೈಶಾಖ ಮಾಸದ ಉತ್ಸವದ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಈಗ ಉತ್ಸವ ನಡೆಯುತ್ತಿದೆ. ಹಾಗಾಗಿ ಇದೇ ಸಮಯದಲ್ಲಿ ದರ್ಶನ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ದರ್ಶನ್ ಫ್ಯಾಮಿಲಿಗೆ ಧನ್ವಿರ್ ಗೌಡ ಸಾಥ್ ಕೊಟ್ಟಿದ್ದಾರೆ. ದರ್ಶನ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ಅಕ್ಕರೆ ಕೊಟ್ಟೂರು ದೇವಸ್ಥಾನವು ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರಿನಲ್ಲಿರುವ ಒಂದು ಪ್ರಮುಖ ಶಿವ ದೇವಾಲಯ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಆಲಯ ಪವಿತ್ರ ತೋಪುಗಳಿಂದ ಆವೃತವಾಗಿದೆ. ಇನ್ನು ಅಕ್ಕರೆ ಕೊಟ್ಟಿಯೂರು ಆಲಯವನ್ನು ದಕ್ಷ ಯಾಗದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಸತಿ ದೇವಿಯು ಇಲ್ಲಿ ತನ್ನನ್ನು ದಹಿಸಿಕೊಂಡಳು ಎಂದು ಪುರಾಣಗಳು ಹೇಳುತ್ತವೆ.

ಆಧುನಿಕತೆಗೆ ಒಗ್ಗಿಕೊಳ್ಳದೇ ಇನ್ನು ಹಳೇ ಕಾಲದ ದೇವಸ್ಥಾನವನ್ನು ಇಲ್ಲಿ ಹಾಗೆ ಉಳಿಸಿಕೊಳ್ಳಲಾಗಿದೆ. ಅರಣ್ಯಕ್ಕೆ ಹೊಂದಿಕೊಂಡಂತೆ ಕೊಳದ ಮಾದರಿಯಲ್ಲಿ ಸುತ್ತಾ ನೀರು, ನಡುವೆ ಆಲಯವಿದೆ. ಆ ನೀರಿನಲ್ಲೇ ಭಕ್ತರು ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕುತ್ತಾರೆ. ಉರುಳು ಸೇವೆ ಮಾಡುತ್ತಾರೆ. ಇನ್ನು ಉತ್ಸವದ ಸಮಯಲ್ಲಿ ಆನೆಗಳ ಮೇಲೆ ಶಿವ ಹಾಗೂ ಸತಿ ಮೂರ್ತಿಗಳ ಮೆರವಣಿಗೆ ಮಾಡಲಾಗುತ್ತದೆ.
ಸದ್ಯ ನಟ ದರ್ಶನ್ 'ಡೆವಿಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ತಂಡ ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳುತ್ತಿದೆ. ಆಕ್ಷನ್ ಸನ್ನಿವೇಶಗಳನ್ನು ಸೆರೆಹಿಡಿಯಬೇಕಿದೆ. ದಸರಾ ವೇಳೆಗೆ ಸಿನಿಮಾ ತೆರಗೆ ಬರುವ ನಿರೀಕ್ಷೆಯಿದೆ. ಮಿಲನಾ ಪ್ರಕಾಶ್ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ರಚನಾ ರೈ ನಾಯಕಿಯಾಗಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಿಂದ 'ಡೆವಿಲ್' ಸಿನಿಮಾ ತಡವಾಗಿತ್ತು. ಮುಂದೆ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. ಬಳಿಕ ತರುಣ್ ಸುಧೀರ್ ನಿರ್ದೇಶನದಲ್ಲಿ 'ಸಿಂಧೂರ ಲಕ್ಷ್ಮಣ' ಕತೆಯನ್ನು ತೆರೆಗೆ ತರುವ ಪ್ರಯತ್ನಗಳು ಜೋರಾಗಿದೆ. 'ಕಾಟೇರ' ಸಕ್ಸಸ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ದರ್ಶನ್ 'ಡೆವಿಲ್' ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











