ದರ್ಶನ್ರನ್ನು ತಲೆಮೇಲೆ ಹೊತ್ತು ಮೆರೆಸುವ ಫ್ಯಾನ್ಸ್ಗಳ ನಡುವೆ ಹೀಗೊಂದು ಅಭಿಮಾನದ ಪತ್ರ..!
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರದ್ದು.
ಆದರೆ, ದುರ್ದೈವ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ದರ್ಶನ್, ಅಪವಿತ್ರ ಸಂಬಂಧಕ್ಕೆ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆವಾಸ ಕೂಡ ಅನುಭವಿಸಿದರು. ಇನ್ನು ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದಲ್ಲ ಅಂಥಾ ಅಕ್ಷರಶಃ ಕೊರಗಿದರು.

ಆದರೆ, ಇನ್ನು ಕೆಲವರು ದರ್ಶನ್ ಅವರನ್ನು ಸಮರ್ಥಿಸಿಕೊಂಡರು. ಈಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಜೈಲಿಂದ ಹೊರ ಬಂದ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಯೊಬ್ಬರು ಬಹಿರಂಗವಾದ ಪತ್ರವೊಂದನ್ನು ಬರೆದಿದ್ದಾರೆ. ಇನ್ನಾದರೂ ನನ್ನ ನಂಬಿಕೆಯನ್ನು ನೀವು ಉಳಿಸಿಕೊಳ್ತೀರಾ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ. ದರ್ಶನ್ಗೆ ಜಾಮೀನು ಮಂಜೂರಾದ ಬಳಿಕ ದರ್ಶನ್ ಅಭಿಮಾನಿ ವಿನಯ್ ಪಾಂಡವಪುರ ಬರೆದ ಪತ್ರ ಕೆಳಗೆ ಇದೆ.
ನೀವು ಈ ಘಟನೆಗೆ ಹೊಣೆಗಾರರಂತು ಹೌದು
ನನಗೆ ಈ ಕ್ಷಣಕ್ಕೆ ಇದು ತುಂಬಾನೆ ಖುಷಿಪಡುವ ಸುದ್ದಿ ಖಂಡಿತಾ ಹೌದು.ಆದರೆ , ಅದರ ಜೊತೆ ಜೊತೆಗೆ ಡಿಬಾಸ್ ರವರಿಗೆ ದೊರೆತ ಪುನರ್ಜನ್ಮ ಇದು ಆಗಿರುವುದರಿಂದ ಇದನ್ನು ಪರಿಗಣಿಸಿ , ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಇಡುವ ಪ್ರತಿ ಹೆಜ್ಜೆಯು ಜಾಗರೂಕತೆಯಿಂದ , ಜಾಣ್ಮೆಯಿಂದ ನೀವು ಇಡಬೇಕು ಮತ್ತು ಮತ್ಯಾವುದೇ ಕಾರಣಕ್ಕೂ ಈ ರೀತಿಯ ಯಾವುದೆ ಘಟನೆಗಳು ನಿಮ್ಮ ಬದುಕಿನಲ್ಲಿ ಮರುಕಳಿಸದಂತೆ ನೀವು ನೋಡಿಕೊಳ್ಳಬೇಕು ಎಂಬುದೆ ನನ್ನ ಮತ್ತು ನನ್ನಂತೆ ನಿಮಗೆ ಒಳ್ಳೆಯದನ್ನ ಮಾತ್ರ ಬಯಸುವ ನಿಜವಾದ ಅಭಿಮಾನಿಗಳ ಆಶಯ.
ನೀವು ತಪ್ಪು ಮಾಡಿದ್ದೀರೊ ಇಲ್ಲವೊ , ಅದು ನ್ಯಾಯಾಲಯಕ್ಕೆ ಬಿಟ್ಟಿದ್ದು ., ಆದರೆ ನೀವು ಈ ಘಟನೆಗೆ ಹೊಣೆಗಾರರಂತು ಹೌದು. ಕೆಟ್ಟ ಘಳಿಗೆ , ನೀವು ಇಲ್ಲಿಯವರೆಗೂ ಅನುಭವಿಸಿದ್ದು ಸಾಕು , ನಾವೆಲ್ಲರೂ ನೋಡಿದ್ದು ಸಾಕು , ದುಃಖ ಪಟ್ಟಿದ್ದು ಸಾಕು. ತಪ್ಪು ನಡೆಯೋದು ಸಹಜ ಕಣೋ,ತಿದ್ದಿ ನಡೆಯೋನು ಮನುಜ ಕಣೋ.ಇದೇ ನಿಮ್ಮ ಮುಂದಿನ ಭವಿಷ್ಯದ ಮಂತ್ರವಾಗಿರಬೇಕು.
ತಾವಾಯಿತು , ತಮ್ಮ ಪಾಡಾಯಿತು , ಹೆಂಡತಿ , ಮಗ , ತಾಯಿ , ತಮ್ಮ, ಮುಖ್ಯವಾಗಿ ಒಳ್ಳೆಯ ಸ್ನೇಹಿತರು , ಒಳ್ಳೆಯ ಹವ್ಯಾಸ ಮತ್ತು ಒಳ್ಳೆಯ ಸಿನಿಮಾಗಳು ಅಂತ ಅಷ್ಟಕ್ಕೆ ಮಾತ್ರ ತಮ್ಮ ಮುಂದಿನ ಬದುಕಿನ ದಿನಗಳನ್ನು ದಯಮಾಡಿ ಮೀಸಲಿಟ್ಟು ಬಿಡಿ. ಸ್ವಾಭಿಮಾನ ಬಿಡಬೇಡಿ ಮತ್ತು ನೀವು ಬೆಳೆದು ಬಂದಿರುವ ದಾರಿ ಮರೆಯಬೇಡಿ. ಇದಕ್ಕಿಂತ ಹೆಚ್ಚು ಈ ಕ್ಷಣಕ್ಕೆ ನಾನೇನು ಹೇಳಲು ಬಯಸಲು ಇಷ್ಟಪಡುವುದಿಲ್ಲ. ನಾನು ಮೇಲೆ ಹೇಳಿರುವ ಹಾಗೆ ಮುಂದಿನ ದಿನಗಳಲ್ಲಿ ನೀವಿದ್ದು ನಂಬಿಕೆ ಉಳಿಸಿಕೊಳ್ಳುತ್ತೀರಾ ಎಂಬುದನ್ನೆ ನಾನು ನಂಬಿದ್ದೇನೆ.ಇಂತಿ ನಿಮ್ಮ ಸದಾಕಾಲದ ಅಭಿಮಾನಿ #ಡಿಬಾಸ್
ಹೀಗೆ ವಿನಯ್ ಪಾಂಡವಪುರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ಧಾರೆ. ಇವರ ಈ ಮನದ ಮಾತುಗಳ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಪತ್ರದ ಸ್ಕ್ರೀನ್ ಶಾಟ್ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇನ್ನುಳಿದಂತೆ ದರ್ಶನ್ ಸದ್ಯ ಜಾಮೀನು ಸಿಕ್ಕ ಹಿನ್ನೆಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರಿಗೆ ತೆರಳಲು ನಿನ್ನೆ ನ್ಯಾಯಾಲಯದಿಂದ ಅನುಮತಿ ಸಿಗುತ್ತಿದ್ದಂತೆಯೇ ಮೈಸೂರಿನ ತಮ್ಮ ಫಾರ್ಮ್ ಹೌಸ್ಗೆ ತೆರಳಿದ್ದಾರೆ. ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇನ್ನು ಜೈಲಿಗೆ ತೆರಳುವ ಮುನ್ನ ದರ್ಶನ್ ಡೆವಿಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ಈ ಚಿತ್ರದ ಕಥೆ ಏನಾಯ್ತು. ಚಿತ್ರದ ಚಿತ್ರೀಕರಣವನ್ನು ದರ್ಶನ್ ಮತ್ತೆ ಶುರು ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಕೂಡ ಅನೇಕ ಅಭಿಮಾನಿಗಳನ್ನು ಕಾಡುತ್ತಿದೆ.


Click it and Unblock the Notifications











