'ಕಪ್ಪಾಗಿ ಹುಟ್ಟಿದ್ದು ಕರ್ಮನಾ' ಎಂದಿದ್ದೇಕೆ ವಿಜಯ್? ಜಗ್ಗೇಶ್-ವಿಜಿ ನಡುವೆ ನಡೆದ ಸಂಭಾಷಣೆ ಏನು?
ಶ್ರಮಪಟ್ಟು ಜೀವನ ಕಟ್ಟಿಕೊಂಡರು ಸಮಾಜ ಚರ್ಮದ ಬಣ್ಣದಿಂದ ಅಳೆಯುತ್ತೆ ಎಂದು ನಟ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಣ ಭೇದದಿಂದ ನೊಂದಿರುವ ವಿಜಿ ತನ್ನ ನೋವನ್ನು ನಟ ಜಗ್ಗೇಶ್ ಬಳಿ ಹೇಳಿಕೊಂಡಿದ್ದಾರೆ.
ಕಪ್ಪು ಬಣ್ಣದವರಿಗೆ ಚಿಕ್ಕ ತಪ್ಪು ಮಾಡಿದರೂ ಅವರ ಸಾಧನೆಯನ್ನು ಕಡೆಗಣಿಸಿ ಅವರನ್ನು ಹಂಗಿಸುತ್ತಾರೆ. ಆದರೆ ಬಿಳಿ ಬಣ್ಣದವರ ಸಾಧನೆ ಶೂನ್ಯವಾಗಿದ್ದು ಅವರ ಆಂತರ್ಯವೆಲ್ಲ ಕೊಳೆತು ನಾರುತ್ತಿದ್ದರೂ ಸಮಾಜ ಅವರನ್ನು ಬೇಗ ನಂಬುತ್ತೆ ಎಂದು ವಿಜಯ್, ಹಿರಿಯ ನಟ ಜಗ್ಗೇಶ್ ಬಳಿ ಬೇಸರ ಹೊರಹಾಕಿದ್ದಾರೆ. ಅಷ್ಟಕ್ಕು ದುನಿಯಾ ವಿಜಯ್ ವರ್ಣಭೇದದ ಬಗ್ಗೆ ಮಾತನಾಡಿದ್ದೇಕೆ. ವಿಜಯ್ ಮತ್ತು ಜಗ್ಗೇಶ್ ನಡುವೆ ನಡೆದ ಸಂಭಾಷಣೆ ಏನು? ಮುಂದೆ ಓದಿ...

ಜಗ್ಗೇಶ್ ಗೆ ಫೋನ್ ಮಾಡಿ ವಿಜಿ ಹೇಳಿದ್ದೇನು?
"ಇಂದು 9 ಗಂಟೆಗೆ ದುನಿಯಾ ವಿಜಿ ಕರೆ ಮಾಡಿ, ಅಣ್ಣ ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ? ಎಂದು ದುಃಖದಿಂದ ಕೇಳಿಬಿಟ್ಟ. ನಾನು ಯಾಕೆ ಈ ಪ್ರಶ್ನೆ ಎಂದು ಕೇಳಿದೆ. ಅದಕ್ಕೆ ಅವನು ಹೇಳಿದ್ದು. ನೋಡಿ ಅಣ್ಣ ನಾವು ಎಷ್ಟೇ ಶ್ರಮಪಟ್ಟು ಜೀವನ ಕಟ್ಟಿಕೊಂಡರೂ ಸಮಾಜ ಚರ್ಮದ ಬಣ್ಣದಿಂದ ನಮ್ಮನ್ನು ಅಳೆಯುತ್ತಾರೆ. ನಾವು ನೂರು ಶ್ರೇಷ್ಠ ಸಾಧನೆ ಮಾಡಿ ಸಣ್ಣತಪ್ಪು ಅರಿಯದಂತೆ ನಮ್ಮಿಂದ ಆಗಿಬಿಟ್ಟರೆ ನಮ್ಮ ಸಾಧನೆ ಶೂನ್ಯ ಮಾಡಿ ಹಂಗಿಸಿ ಬಿಡುತ್ತಾರೆ."

ಡ್ರಗ್ಸ್ ದಂಧೆಯ ಮಹಾಮಹಿಮರ ಹೆಸರು ಹೇಳಿದ ವಿಜಯ್
"ಬಿಳಿ ಚರ್ಮದ ಮನುಜರು ಆಂತರ್ಯವೆಲ್ಲಾ ಕೊಳೆತು ಸಾಧನೆ ಶೂನ್ಯವಾದರು ಅವರ ಬಿಳಿ ಬಣ್ಣಕ್ಕೆ ಸಮಾಜ ಅವರನ್ನು ನಂಬಿ ಬಿಡುತ್ತಾರೆ ಎಂದ. ನಾನು ಅದಕ್ಕೆ ಉದಾಹರಣೆ ಎಂದು ಕೇಳಿದಾಗ ಡ್ರಗ್ಸ್ ದಂಧೆಯಲ್ಲಿನ ಮಹಾಮಹಿಮರ ಹೆಸರು ಹೇಳಿದ. ಉತ್ತರವಿಲ್ಲದೇ ಕ್ಷಣಕಾಲ ಮೌನವಾಗಿ ನನ್ನ ಮೈ ಚರ್ಮ ನೋಡಿಕೊಂಡೆ ಕಾರಣ ನಾನು ವಿಜಿಗಿಂತ ಕಪ್ಪು. ಅದಕ್ಕೆ ನಾನು ವಿಜಿಗೆ ಇದ್ದ ಅನುಮಾನ ದುಃಖ ದೂರ ಮಾಡಲು ಈ ಉದಾಹರಣೆ ಹೇಳಿದೆ."

ವಿಜಿಗೆ ಸಮಾಧಾನ ಮಾಡಿದ ಜಗ್ಗೇಶ್
"ನೋಡು ವಿಜಿ ನಾವು ಹುಟ್ಟಿದ್ದು ಮದ್ಯಮವರ್ಗದ ಗ್ರಾಮೀಣ ಭಾಗದ ಬಡ ಕುಟುಂಬದ ತಂದೆ ತಾಯಿ ಉದರದಲ್ಲಿ. ಅನ್ನಕ್ಕೆ ಕೂಲಿ ಮಾಡಿ ತಿನ್ನುವ ದೇಹ ಪರಿಸರದಲ್ಲಿ ಬೆಂದು ಕೃಷ್ಣ ವರ್ಣವಾಗಿರುತ್ತದೆ ಅಂತ ಉದರದಲ್ಲಿ ಕಪ್ಪಾಗಿ ಹುಟ್ಟುವುದು ನಮ್ಮ ಜನ್ಮಾಂತರ ಪುಣ್ಯ. ಜಗಕ್ಕೆ ಗುರು ಕೃಷ್ಣ ಕಪ್ಪು. ಶತ್ರು ಸಂಹಾರಕ ಭೈರವ ಕಪ್ಪು. ಲಯಕಾರಕ ಶಿವ ಕಪ್ಪು. ಕಾಳಿಮಾತೆ ಕಪ್ಪು. ದೇಹ ಕಪ್ಪಾಗಿದ್ದರು ಪರವಾಗಿಲ್ಲಾ ಆದರೆ ಹೃದಯ ಕಪ್ಪಾಗಿ ಇರಬಾರದು."
Recommended Video

ಬಿಳಿ ಚರ್ಮಕ್ಕೆ ಮರುಳಾಗುವುದು 100% ಸತ್ಯ
"ಬಿಳಿ ಚರ್ಮಕ್ಕೆ of course ಜನ ಮರುಳಾಗೋದು 100% ಸತ್ಯ. ಗುಣವಂತಹೆಣ್ಣು ಕಪ್ಪಗಿದ್ದರೆ ಮೂಗು ಮುರಿದು ಬಿಳಿ ಹೆಣ್ಣನ್ನು ಬೇಗ ಒಪ್ಪಿ ಮದುವೆ ಆಗಿ ನಂತರ ಜೀವನ ಪೂರ ಬಾಯಿ ಬಡಿದುಕೊಂಡು ಬಾಳುವವರ ಉದಾಹರಣೆಯಾಗಿ ಬಹಳ ಮಂದಿ ನೋಡಿದ್ದೇವೆ. ವಿಶೇಷವಾಗಿ ನಮ್ಮ ಕಲಾರಂಗದಲ್ಲಿ ಚರ್ಮ ಬಿಳಿ ಇದ್ದರಂತು ಅವರ ಮೇಲೆ ದೇವತೆ ರಂಬೆ ಕೊಂಬೆ ಕೆರೆಕಟ್ಟೆ ಎಂದು ಹಾಡು ಬರೆದು ಮರೆಸುತ್ತಾರೆ. ಜಾಲತಾಣವೆಲ್ಲಾ ಅಂತ ಬಿಳಿ ಸುಂದರಿಯೇ ಆವರಿಸಿ ಹಾರಾಡುತ್ತಾರೆ. ಎಷ್ಟೋ ಪ್ರತಿಭೆ ಕಪ್ಪು ಇದ್ದರೆ ಅವಕಾಶ ವಂಚಿತರಾಗುತ್ತಾರೆ. ಅದು ಅವರವರ ಅದೃಷ್ಟ. ಎಂದು ಸಮಾಧಾನ ಹೇಳಿದೆ. ಅವನು ದೂರವಾಣಿ ಇಟ್ಟಮೇಲೆ ತಲೆಯಲ್ಲಿ ಕಪ್ಪು ಎನ್ನುವ ಹುಳ ಆವರಿಸಿತು. ಮೈ ಬಣ್ಣ ಕಪ್ಪಗಿದ್ದರು ಪರವಾಗಿಲ್ಲಾ ಚಿಂತನೆ ಅಪರಂಜಿಯಂತೆ ಇರಲಿ. ನಾವು ಶವವಾಗಿ ಸುಟ್ಟಾಗ ಕಪ್ಪು ಬಿಳಿ ಭೇದವಿಲ್ಲದೆ ದೇಹ ಬೂದಿಯಾಗುತ್ತದೆ."


Click it and Unblock the Notifications











