Actor Ganesh: ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ನಟ ಗಣೇಶ್ ಅಕ್ರಮ ಕಟ್ಟಡ ನಿರ್ಮಾಣ ಆರೋಪ
ಗೋಲ್ಡನ್ ಸ್ಟಾರ್ ಗಣೇಶ್ ವಿವಾದಗಳಿಂದ ಸದಾ ದೂರವೇ ಇರುತ್ತಾರೆ. ವಿವಾದಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನುವಂತಿರೋ ನಟ. ಆದ್ರೀಗ ಗಣೇಶ್ ವಿರುದ್ಧ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಜಮೀನನ್ನು ಖರೀದಿ ಮಾಡಿದ್ದರು. ಆ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡವನ್ನು ಕಟ್ಟುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಅನ್ನೋದು ಆರೋಪ.

ಗೋಲ್ಡನ್ ಸ್ಟಾರ್ ಗಣೇಶ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆಯ ಜಕ್ಕಹಳ್ಳಿ ಗ್ರಾಮದ ಸರ್ವೇ ನಂ 105ರಲ್ಲಿ ಜೆಸಿಬಿ, ಕಾಂಕ್ರೀಟ್ ಬಳಸಿಕೊಂಡು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಅನುಮತಿ ಇಲ್ಲದೆ ಕಟ್ಟಡ ಕಟ್ಟುತ್ತಿದ್ದಾರೆಂಬ ಎಂದು ಪರಿಸರವಾದಿಗಳು ಆರೋಪ ಮಾಡಿದ್ದಾರೆ.
ತಾತ್ಕಾಲಿಕ ಕಟ್ಟಡ ಕಟ್ಟಲು ಅನುಮತಿ
ಗೋಲ್ಡನ್ ಸ್ಟಾರ್ ಗಣೇಶ್ ಜಕ್ಕಹಳ್ಳಿ ಗ್ರಾಮದಲ್ಲಿ 1.2 ಎಕರೆ ಜಮೀನನ್ನು ಖರೀದಿ ಮಾಡಿದ್ದರು. ಈ ವೇಳೆ ಸೂಕ್ಷ್ಮ ಪರಿಸರ ವಲಯ ನಿರ್ವಹಣಾ ಸಮಿತಿಯಿಂದ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸದ ಮನೆ ಕಟ್ಟಲು ಅನುಮತಿ ನೀಡಿದ್ದಾರೆ. ಆದರೆ, ವಾಸಕ್ಕೆ ಅಂತ ಶಾಶ್ವತವಾಗಿ ಕಟ್ಟಡಗಳಾಗಿರಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಅಲ್ಲದೆ ತಾತ್ಕಾಲಿಕ ಮನೆಯನ್ನು ವಸತಿ ಉದ್ದೇಶಕ್ಕಷ್ಟೇ ಬಳಸಬೇಕು. ವನ್ಯಜೀವಿಗಳ ಸಂಚಾರಕ್ಕೆ ಧಕ್ಕೆ ತರಕೂಡದು. ಸಮಿತಿ ಮುಂದೆ ಹಾಜರುಪಡಿಸಿದ್ದ ಪ್ಲ್ಯಾನ್ನಂತೆ ಮನೆ ಕಟ್ಟಬೇಕು. ಯಾವುದೇ ಕಾರಣಕ್ಕೂ ವಿಸ್ತೀರ್ಣ, ಮಾದರಿ ಬದಲಿಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ.

ಇದರ ಹೊರತಾಗಿಯೂ ನಟ ಗಣೇಶ್ ಕಾಂಕ್ರಿಟ್, ಜೆಸಿಬಿ ಬಳಸಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪರಿಸರವಾದಿಗಳ ಆಕ್ರೋಶ ಹೊರ ಹಾಕಿದ್ದಾರೆ. ಇದೇ ಈಗ ಗೋಲ್ಡನ್ ಸ್ಟಾರ್ ಗಣೇಶ್ಗೆ ದೊಡ್ಡ ತಲೆ ನೋವಾಗಿದೆ.
ಪರಿಸರವಾದಿಗಳು ಏನಂತಾರೆ?
ಬಂಡೀಪುರ ಪರಿಸರ ಸೂಕ್ಷ್ಮವಲಯದಲ್ಲಿ ಕ್ಯಾರೆ ಅನ್ನದೆ ಕಾಮಗಾರಿಗಳು ನಡೆಯುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಫೋಟೋ, ವೀಡಿಯೋ ಹಾಗೂ ಮಾಹಿತಿ ನೀಡಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ವಾಸ ಮಾಡಲು ಸಣ್ಣ ಮನೆಯನ್ನ ಕಟ್ಟಿಕೊಳ್ಳುವುದಕ್ಕಷ್ಟೇ ಅನುಮತಿ ಇದೆ. ಇದು ಪಾಲನೆ ಆಗುತ್ತಿಲ್ಲ. ಶ್ರೀಮಂತರು, ಪ್ರಭಾವಿಗಳಿಗೆ ಅನುಮತಿಯಿದೆ. ಅದೇ ರೈತರು ಮಾಡಿದರೇ ತಪ್ಪು ಎಂದು ಆಕ್ರೋಶ ಹೊರ ಹಾಕಿದ್ದಾರೆ.
"ಎಲ್ಲರೂ ಕಟ್ಟಡಗಳನ್ನು ಕಟ್ಟಿಕೊಂಡು ಪ್ರಾಣಿಗಳು ರೈತರ ಕೃಷಿಭೂಮಿಯತ್ತ ದೌಡಾಯಿಸುತ್ತಿದೆ. ಜಕ್ಕಹಳ್ಳಿ, ಮಂಗಲ ಗ್ರಾಮಗಳ ಸುತ್ತಮುತ್ತ ಈ ರೀತಿ ಕಾಮಗಾರಿಗಳು ಸಾಕಷ್ಟು ನಡೆಯುತ್ತಿದೆ" ಎಂದು ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.
ಸಿಎಫ್ಒ ರಿಯಾಕ್ಷನ್ ಏನು?
ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಮಾಡುತ್ತಿರುವ ಕಟ್ಟಡ ಸಂಬಂಧ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಪರಿಸರ ಸೂಕ್ಷ್ಮ ವಲಯ ನಿರ್ವಹಣಾ ಸಮಿತಿಯಲ್ಲಿ ಓರ್ವ ಸದಸ್ಯ ಮಾತ್ರ, ಪ್ರಾದೇಶಿಕ ಆಯುಕ್ತರು ಇದರಲ್ಲಿ ಅಧ್ಯಕ್ಷರಾಗಿದ್ದು ವಿಚಾರವನ್ನು ಗಮನಕ್ಕೆ ತರುತ್ತೇನೆ. ಮುಂದಿನ ಕ್ರಮ ಅವರು ಕೈಗೊಳ್ಳಲ್ಲಿದ್ದಾರೆ. ಖಾಸಗಿ ಭೂಮಿಯಲ್ಲಿ ಅವರು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದು ತಾತ್ಕಾಲಿಕ ಮನೆಗೆ ಅನುಮತಿ ಪಡೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಗ್ರಾಪಂ ಸಿಬ್ಬಂದಿ, ತಹಸಿಲ್ದಾರ್ ಸ್ಥಳ ಮಹಜರು ಮಾಡಿಲ್ಲ ಎನ್ನಲಾಗಿದೆ. ತಾತ್ಕಾಲಿಕ ಮನೆಗೆ ಅನುಮತಿ ಪಡೆದು ಬೃಹತ್ ಕಟ್ಟಡ ನಡೆಸುತ್ತಿರೋ ಆರೋಪವೀಗ ನಟ ಗಣೇಶ್ ಮೇಲೆ ಇದೆ. ಈ ಬಗ್ಗೆ ಗಣೇಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











