ಈ ವರ್ಷವೂ ಬರ್ತ್ಡೇ ಆಚರಣೆ ಇಲ್ಲ ಎಂದ ಗಣೇಶ್; ಕಾರಣ ಅದೇನಾ?
ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಕೂಡ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಸಹಜವಾಗಿ ಸ್ಟಾರ್ ನಟ-ನಟಿಯರ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ನೆಚ್ಚಿನ ನಟನ ನಿವಾಸಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಕೈ ಕುಲುಕು ಶುಭಾಶಯ ಕೋರಿ ಜೈಕಾರ ಹಾಕಿ ಸಂಭ್ರಮಿಸುತ್ತಾರೆ.
ಕೊರೊನಾ ಹಾವಳಿ ಶುರುವಾದ ಬಳಿಕ ನಟ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸಿಕೊಳ್ಳುವುದು ಕಮ್ಮಿ ಆಗಿದೆ. ಹುಟ್ಟುಹಬ್ಬಕ್ಕೆ ಮುನ್ನ ನಾನು ಈ ಬಾರಿ ಹುಟ್ಟುಹಬ್ಬದ ದಿನ ಮನೆಯಲ್ಲಿ ಇರಲ್ಲ. ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆರ್ಶೀವದಿಸಿ ಎಂದು ಮನವಿ ಮಾಡುತ್ತಾ ಬರುತ್ತಿದ್ದಾರೆ. ಸದ್ಯ 'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ಗಣಿ ನಟಿಸಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಸ್ಯಾಂಡಲ್ವುಡ್ನಲ್ಲಿ ನಟ ಗಣೇಶ್ ಸಿನಿಮಾಗಳ ಕ್ರೇಜ್ ಕಮ್ಮಿ ಆಗಿದೆ. 'ಗಾಳಿಪಟ-2' ಬಳಿಕ ಗೋಲ್ಡನ್ ಸ್ಟಾರ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇನ್ನು ಆಕ್ಷನ್ ಸಿನಿಮಾ ಭರಾಟೆಯ ನಡುವೆ ಸ್ಯಾಂಡಲ್ವುಡ್ನಲ್ಲಿ ರೊಮ್ಯಾಂಟಿಕ್ ಸಿನಿಮಾಗಳು ಅಷ್ಟಾಗಿ ವರ್ಕ್ ಆಗುತ್ತಿಲ್ಲ ಎಂದರೆ ತಪ್ಪಾಗಲ್ಲ.
ಜುಲೈ 2ಕ್ಕೆ ಗಣೇಶ್ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿಯೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. "ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ"
"ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್" ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಸದ್ಯ ಮಂಕಾಗಿದೆ. ಸಿನಿಮಾಗಳ ಬದಲು ಸ್ಟಾರ್ ನಟರ ವೈಯಕ್ತಿಕ ವಿಚಾರಗಳ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅದೇ ಕಾರಣಕ್ಕೆ ಇಂತಹ ಸಮಯದಲ್ಲಿ ಸಂಭ್ರಮಾಚರಣೆ ಬೇಡ ಎಂದು ಗಣೇಶ್ ನಿರ್ಧರಿಸಿದ್ದಂತೆ ಕಾಣುತ್ತಿದೆ ಎನ್ನುವುದು ಕೆಲವರ ಲೆಕ್ಕಾಚಾರ.
ಇನ್ನು ಪದೇ ಪದೆ ಗಣೇಶ್ ನಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಣೆಗೆ ಹಿಂದೇಟು ಹಾಕುತ್ತಿರುವುದು ಯಾಕೆ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಮುಂದಿನ ವರ್ಷ ಕಂಡಿತ ಸಿಗೋಣ, ಅಡ್ವಾನ್ಸ್ ಹ್ಯಾಪಿ ಬರ್ತ್ಡೇ ಎಂದು ಶುಭ ಕೋರುತ್ತಿದ್ದಾರೆ. ಇತ್ತೀಚೆಗೆ 'ಕೃಷ್ಣಂ ಪ್ರಣಯ ಸಖಿ' ಚಿತ್ರದ 'ಚಿನ್ನಮ್ಮ ಚಿನ್ನಮ್ಮ' ಸಾಂಗ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
ಸಿಂಪಲ್ ಸುನಿ ನಿರ್ದೇನದಲ್ಲಿ 'ಸ್ಟೋರಿ ಆಫ್ ರಾಯಗಢ' ಎನ್ನುವ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಸೆಟ್ಟೇರಲೇ ಇಲ್ಲ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಕೊನೆಯದಾಗಿ ಗಣೇಶ್ ನಟನೆಯ 'ಬಾನ ದಾರಿಯಲಿ' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಅಭಿಮಾನಿಗಳು ಮತ್ತಷ್ಟು ಒಳ್ಳೆ ಸಿನಿಮಾಗಳಲ್ಲಿ ನೆಚ್ಚಿನ ನಟನನ್ನು ನೋಡಲು ಕಾಯುತ್ತಿದ್ದಾರೆ.


Click it and Unblock the Notifications











