"ರಂಗನಾಯಕ' ನನ್ನ ಸಿನ್ಮಾ ಅಲ್ಲ, ಯಾರದ್ದೋ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ": ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಂತ್ರಾಲಯದಲ್ಲಿ ಪೂಜೆ ನೆರವೇರಿಸಿ ಜಗ್ಗೇಶ್ ಹುಟ್ಟುಹಬ್ಬ ಆಚರಿಸುತ್ತಾ ಬರುತ್ತಿದ್ದಾರೆ. ಈ ವರ್ಷ ಕೂಡ ರಾಯರ ಸನ್ನಿಧಿಯಲ್ಲಿ ಜಗ್ಗೇಶ್ ವಿಶೇಷ ದಿನವನ್ನು ಕಳೆಯುತ್ತಿದ್ದಾರೆ.
ನಟ ಜಗ್ಗೇಶ್ 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವಾರದ ಜಗ್ಗಣ್ಣ ನಟಿಸಿದ 'ರಂಗನಾಯಕ' ಸಿನಿಮಾ ಬಿಡುಗಡೆಯಾಗಿ ಹೀನಾಯವಾಗಿ ಸೋಲುಂಡಿದೆ. ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಈ ಬಗ್ಗೆ ಮೌನ ಮುರಿದಿರುವ ಜಗ್ಗೇಶ್ ಮಂತ್ರಾಲಯದ ದೇವಸ್ಥಾನದಿಂದಲೇ ವಿಶೇಷ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಬೇಸರವಾಗಿದ್ದರೆ ಕ್ಷಮಿ ಎಂದಿದ್ದಾರೆ. ಜೊತೆಗೆ ಮಾತನಾಡುವ ಭರದಲ್ಲಿ ಯಾರ ಮನಸ್ಸಿಗಾದರೂ ನೋವು ಮಾಡಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ಮನುಷ್ಯನ ಜೀವನ ಬಹಳ ಶ್ರೇಷ್ಠ. 60 ವರ್ಷ ಜೀವನದ ಅಂದ್ರೆ ಬಹಳ ದೊಡ್ಡ ಆಯುಷ್ಯ. 61ನೇ ವಸಂತಕ್ಕೆ ಕಾಲಿಟ್ಟಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಅನ್ನ ಹುಡುಕಿ ಬಂದವನು ನಾನು. ತಾಯಿ ಮಾರ್ಗದರ್ಶನದಂತೆ ರಾಯರ ದೇವಸ್ಥಾನಕ್ಕೆ ಬಂದು ಒಳ್ಳೆಯದಾಯಿತು. ವಿಶ್ವದಲ್ಲಿ ತಂದೆ-ತಾಯಿಗಿಂತ ಶ್ರೇಷ್ಠವಾದ ದೇವರಿಲ್ಲ. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಂದೆ-ತಾಯಿಯನ್ನು ಇಲ್ಲಿಗೆ ಕಳುಹಿಸಿದ್ದಾನೆ. ಏನಾದರೂ ತಪ್ಪು ಮಾಡಿದ್ದರೆ ತಂದೆ-ತಾಯಿ ಕಾಲಿಗೆ ಎರಗಿ ಒಳ್ಳೆಯದಾಗುತ್ತದೆ" ಎಂದು ಜಗ್ಗೇಶ್ ಮಾತು ಆರಂಭಿಸಿದ್ದಾರೆ.
"1980ರಲ್ಲಿ ವೃತ್ತಿ ಅರಸಿ ಆಟೋ ಡ್ರೈವರ್ ಆಗಿ ಜೀವನ ಸಾಗಿಸಿದರೆ ಸಾಕು ಎಂದುಕೊಂಡಿದ್ದೆ. ಮಂತ್ರಾಲಯಕ್ಕೆ ಬಂದು ರಾಯರ ಸೇವೆ ಸಲ್ಲಿಸಿದ ಬಳಿಕ ರಾಯರು ನಿರ್ಮಾಪಕ, ನಿರ್ದೇಶಕರ ಮನಸ್ಸಿನಲ್ಲಿ ನಿಂತು ನನ್ನ ಭಕ್ತನಿಗೆ ಅವಕಾಶ ಕೊಡಿ ಎಂದು ಹೇಳಿದ ಬಳಿಕ ಅಂಬೆಗಾಲಿಟ್ಟು ಬಂದೆ. ಸಣ್ಣ ಪುಟ್ಟ ಪಾತ್ರಗಳಿಂದ ನಾನು ಮುಂದೆ ಹೇಗೆ ಬೆಳೆದೆ ಎಂದು ನಿಮಗೆ ಗೊತ್ತು. ಇದಕ್ಕೆ ರಾಯರ ಕೃಪೆ ಕಾರಣ" ಎಂದು ಜಗ್ಗೇಶ್ ತಮ್ಮ ಇಷ್ಟದೈವದ ಬಗ್ಗೆ ಮಾತನಾಡಿದ್ದಾರೆ.
ಜಗ್ಗೇಶ್ ವೇದಿಕೆಯೊಂದರಲ್ಲಿ ಮಾತನಾಡುತ್ತಾ ಬಿಗ್ಬಾಸ್ ಖ್ಯಾತಿಯ ವರ್ತೂರ್ ಸಂತೋಷ್ ಬಗ್ಗೆ ಆಡಿದ ಮಾತು ವೈರಲ್ ಆಗುತ್ತು. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. 'ಯಾವನೋ ಕಿತ್ತೋದ್ ನನ್ ಮಗ..' ಎಂದು ಹೇಳಿದ್ದರು. ಈ ಬಗ್ಗೆ ಇದೀಗ ಅವರು ಪ್ರತಿಕ್ರಿಯಿಸಿದ್ದಾರೆ.
"ನಾನು ಸ್ವಲ್ಪ ನೇರ ನುಡಿಯ ಮನುಷ್ಯ. ನೇರವಾಗಿ ಮಾತನಾಡುತ್ತೀನಿ. ಮನಸ್ಸಿನಲ್ಲಿ ವಿಷವಿಲ್ಲ. ಕೆಟ್ಟದು ಬಯಸಲ್ಲ. ಹಳ್ಳಿಯಿಂದ ಬಂದವನು. ಹಳ್ಳಿಯ ಸೊಗಡು ಇದೆ. ಅಣ್ಣಾವ್ರ ಕೂಡ ಅದೇ ರೀತಿ ಹಳ್ಳಿ ಶೈಲಿಯಲ್ಲೇ ಮಾತನಾಡುತ್ತಿದ್ದರು. ಈಗ ನನ್ನ ಬಾಯಲ್ಲಿ ಅಂತಹ ಮಾತುಗಳೇ ಬಂದುಬಿಡುತ್ತದೆ. ನಾನು ಮಾತನಾಡುವ ಭರದಲ್ಲಿ ಯಾರಿಗಾದರೂ ನೋವಾಗಿದ್ದರೆ. ದಯಮಾಡಿ ಕ್ಷಮಿಸಿ, ನಾನು ನಿಮ್ಮ ತಂದೆ ವಯಸ್ಸಿನವನು. ಬೇಕಂತ ಯಾವತ್ತೂ ಮಾತಾಡಲ್ಲ, ಕ್ಷಮಿಸಿ" ಎಂದಿದ್ದಾರೆ.
'ರಂಗನಾಯಕ' ಸಿನಿಮಾಗಳ ಬಗ್ಗೆ ವ್ಯಕ್ತವಾದ ಟೀಕೆಗಳ ಬಗ್ಗೆ ಮಾತನಾಡುವ ಮುನ್ನ ಭಾಗವತ ಪುರಾಣದ ಕಥೆಯನ್ನು ಜಗ್ಗೇಶ್ ಹೇಳಿದ್ದಾರೆ. ಬಳಿಕ ಮಾತನಾಡಿ "ಮೊನ್ನೆ ಒಂದು ಸಿನ್ಮಾ ಮಾಡ್ದೆ. ನಿಮಗೆಲ್ಲಾ ಹರ್ಟ್ ಆಗಿದೆ. ನನ್ನ ತಪ್ಪಿಲ್ಲ. ನಾನು ಮಾಡಿದ ಆ ಚಿತ್ರ ನನ್ನದಲ್ಲ. ಒಬ್ಬ ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತ ತನಗಿದ್ದ ಆಸೆ ಪ್ರಕಾರ ತನ್ನ ಕರ್ತವ್ಯ ನಿರ್ವಹಿಸಿಬಿಟ್ಟಿದ್ದಾನೆ. ನನಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅಕಸ್ಮಾತ್ ನಿಮಗೆ ಬೇಸರವಾಗಿದ್ದರೆ ಕ್ಷಮೆ ಇರಲಿ" ಎಂದು ಜಗ್ಗೇಶ್ ಹೇಳಿದ್ದಾರೆ.

"ನಾನು 'ಪ್ರೀಮಿಯರ್ ಪದ್ಮಿಣಿ', '8ಎಂಎಂ', 'ಕಾಳಿದಾಸ ಕನ್ನಡ ಮೇಷ್ಟ್ರು' ಕೊಟ್ಟಿದ್ದೀನಿ. ಯಾರದ್ದೂ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ. ಇನ್ನು ಉತ್ತಮವಾದ ಸಿನಿಮಾಗಳನ್ನು ಕೊಡುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಸಣ್ಣ ಪುಟ್ಟ ತಪ್ಪುಗಳಾಗಿದ್ದರೆ ಕ್ಷಮಿಸಿ. ರಾಯರ ಸನ್ನಿಧಿಯಲ್ಲಿ ಎಲ್ಲವನ್ನು ಹೇಳಿದ್ದೀನಿ. ನನ್ನೊಟ್ಟಿಗೆ ನೀವು ಸದಾ ಇರಿ. ಕಲೆ ಬಿಟ್ಟು ಬೇರೆ ನನಗೆ ಗೊತ್ತಿಲ್ಲ. ನನ್ನನ್ನು ಇಷ್ಟು ವರ್ಷ ಬೆಳೆಸಿದ ಮಾಧ್ಯಮಕ್ಕೆ ಧನ್ಯವಾದ. ರಾಯರ ಆಶೀರ್ವಾದ ಎಲ್ಲರ ಮೇಲಿರಲಿ" ಎಂದು ಜಗ್ಗೇಶ್ ಹೇಳಿದ್ದಾರೆ.


Click it and Unblock the Notifications











