ತಮ್ಮ ಹೇಳಿಕೆ ತಿರುಚಿ ತೇಜೋವಧೆ, ಹಲ್ಲೆ ಬೆದರಿಕೆ; ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR ದಾಖಲು
ಕನ್ನಡ ಸಿನಿಮಾ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಇತ್ತೀಚೆಗೆ ಬಿಗ್ಬಾಸ್ ಖ್ಯಾತಿ ವರ್ತೂರು ಸಂತೋಷ್ ವಿರುದ್ಧ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜಗ್ಗೇಶ್ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರ ಮನೆ ಮುಂದೆ ಧರಣಿ ಕೂರುತ್ತೇವೆ. ಮುತ್ತಿಗೆ ಹಾಕುತ್ತೇವೆ ಎಂದು ಕೆಲವರು ಎಚ್ಚರಿಕೆ ನೀಡಿದ್ದರು. ಇದೀಗ ಆ ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR ದಾಖಲಿಸಿದ್ದಾರೆ.
'ರಂಗನಾಯಕ' ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿತ್ತು. "ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು" ಎಂದು ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಹೇಳಿದ್ದರು.

ವರ್ತೂರು ಸಂತೋಷ್ ಬಗ್ಗೆ "ಕಿತ್ತೋದ್ ನನ್ಮಗ" ಎಂದು ಜಗ್ಗೇಶ್ ಹೇಳಿದ್ದು ಸರಿಯಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಕೆಲವರು ಕ್ಷಮೆಗೆ ಪಟ್ಟು ಹಿಡಿದಿದ್ದರು. ಮನೆಗೆ ಮುತ್ತಿಗೆ ಹಾಕುವ ಮಾತುಗಳನ್ನಾಡಿದ್ದರು. ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಈ ಬಗ್ಗೆ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಕ್ಷಮೆಗೆ ಆಗ್ರಹಿಸಿದ್ದರು. ಮತ್ತೊಬ್ಬ ವ್ಯಕ್ತಿ ಕೂಡ ಇದೇ ರೀತಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ವಿಚಾರ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ಮೇಲೆ ಜಗ್ಗೇಶ್ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಉತ್ತರ ವಿಭಾಗದ ಡಿಸಿಪಿಗೆ ಲಿಖಿತ ರೂಪದಲ್ಲಿ ನಟ ಜಗ್ಗೇಶ್ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
"ರಂಗನಾಯಕ ಸಿನಿಮಾ ಕಾರ್ಯಕ್ರಮ ಇತ್ತು. ಹಿಂದೆ ಹುಲಿ ಉರುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೊ ಒಬ್ಬ ಕಿತ್ತೋದವನು(ಗ್ರಾಮೀಣ ಭಾಷೆ) ಸಿಕ್ಕಿದ ಕಾರಣ ಅಂದ್ರೆ ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ್ದೆ. ಆದರೆ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ" ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಕೆಲ ಪ್ರಚಾರ ಪ್ರಿಯರು ಇಂತಹ ವಿಷಯಗಳಿಗೆ ಕಾಯುತ್ತಿರುತ್ತಾರೆ. ಯಾರ ಬಗ್ಗೆ ಆಗಲಿ ಅಥವಾ ಜಾತಿಯ ಬಗ್ಗೆ ಆಗಲಿ ನಾನು ಮಾತನಾಡಿರುವುದಿಲ್ಲ, ನನ್ನ ವೈಯಕ್ತಿಕ ಅನುಭವ ಮಾಧ್ಯಮದ ಮುಂದೆ ಹೇಳಿದ್ದೇನೆ. ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಹೆಬ್ಬಗೋಡಿ ನಾರಾಯಣ ಸ್ವಾಮಿ ಹಾಗೂ ಆತನ ಮಾತು ಅನುಸರಿಸಿ ವಿಡಿಯೋ ಮಾಡಿದ ಮತ್ತೊಬ್ಬರ ಮೇಲೆ ಕ್ರಮ ಕಾನೂನು ಕ್ರಮಕ್ಕೆ ಒತ್ತಾಯ" ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಜಗ್ಗೇಶ್ ಹೇಳಿಕೆ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯಿಸಿದ್ದರು. "ಬಿಡಿ ಅವ್ರು ದೊಡ್ಡೋರು. ನಾನು ಏನು ಹೇಳ್ತೀನಿ ಅಂದ್ರೆ, ಕಾಲೈ ತಸ್ಮೈ ನಮಃ ಅಷ್ಟೆ. ನಾನು ಏನು ಹೇಳ್ತೀನಿ ಅಂದ್ರೆ, ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಸೈಲೆಂಟ್ ಆಗಿ ಇದ್ದರೆ ಸಾಕು ಉತ್ತರ ಸಿಗುತ್ತದೆ" ಎಂದಿದ್ದರು.


Click it and Unblock the Notifications











