'ಇಂದಿನ ಸಿನಿಮಾ ನಂಬಿ ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ'- ಜಗ್ಗೇಶ್
ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್ ಅಂತವರನ್ನು ನೋಡಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಕನಸು ಹೊತ್ತು ಬಂದಿವರು ಅನೇಕರು ಇಂದು ಚಿತ್ರರಂಗದಲ್ಲಿದ್ದಾರೆ.
ಪ್ರತಿಭೆ, ಅದೃಷ್ಟ ಇದ್ದವರಿಗೆ ಯಶಸ್ಸು ಕಂಡು ಮುಂದೆ ಸಾಗಿದರು. ಉಳಿದವರು ಅಲ್ಲಿಯೇ ನಿಂತುಬಿಟ್ಟರು. ಈಗಿನ ಚಿತ್ರರಂಗ ಬದಲಾಗಿದೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಅನುಮಾನದಿಂದ ನೋಡುವಂತಾಗಿದೆ. ಭವಿಷ್ಯ ರೂಪಿಸಿಕೊಳ್ಳಲು ಬರುವ ಯುವಕರು ಎಲ್ಲಿ ಜೀವನ ಹಾಳು ಮಾಡಿಕೊಂಡು ಬಿಡುತ್ತಾರೆ ಎಂಬ ಆತಂಕ ಹೆಚ್ಚು.
ಇಂತಹ ಆತಂಕವನ್ನು ನವರಸ ನಾಯಕ ಜಗ್ಗೇಶ್ ಸಹ ವ್ಯಕ್ತಪಡಿಸಿದ್ದಾರೆ. ಯುವಕನೊಬ್ಬ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂಬ ಆಸೆಯಿಂದ ಜಗ್ಗೇಶ್ ಅವರನ್ನು ಸಲಹೆ ಕೇಳಿದ್ದಾನೆ.

ಜಗ್ಗೇಶ್ ಸರ್....ನನಗೆ ಡೈರೆಕ್ಟರ್ ಆಗಬೇಕು ಎಂಬ ಕನಸು. ನಾನು ಈಗ ಎರಡು ವರ್ಷ ಡಿಪ್ಲೋಮಾ ಮಾಡ್ತಿದ್ದೀನಿ. ಆಮೇಲೆ ಇಂಜಿನಿಯರಿಂಗ್ ಹೋಗ್ಲಾ ಅಥವಾ ಸಿನಿಮಾ ಇಂಡಸ್ಟ್ರಿಗೆ ಬರ್ಲಾ? ನಿರ್ದೇಶಕ ಆಗಬೇಕು ಎನ್ನುವುದು ನನಗೆ ದೊಡ್ಡ ಕನಸು'' ಎಂದು ಟ್ವಿಟ್ಟರ್ ಮೂಲಕ ಕೇಳಿದ್ದಾನೆ.
ಅದಕ್ಕೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿ ''ದಯಮಾಡಿ ಓದಿ ದಡ ಸೇರಿ! ಇಂದಿನ ಸಿನಿಮಾ ನಂಬಿ ತಂದೆ ತಾಯಿ ಕನಸು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ! ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ! ಬೇಕಾದರೆ ಸಂತೋಷಕ್ಕೆ ಹವ್ಯಾಸ ಆಗಿ ಬಳಸಿ ವೃತ್ತಿಯಾಗಿ ಅಲ್ಲ! ಬೆರಳೆಣಿಸುವ ಕೆಲವರ ಬಿಟ್ಟು 98%ಸಿನಿಮ ಜನ ಸಂಕಷ್ಟದಲ್ಲಿ ಇದ್ದಾರೆ.'' ಎಂದು ವಾಸ್ತವ ತೆರೆದಿಟ್ಟಿದ್ದಾರೆ.
ಕೊರೊನಾ ವೈರಸ್ನಿಂದ ಚಿತ್ರರಂಗ ಆರೇಳು ತಿಂಗಳಿನಿಂದ ಸ್ತಬ್ದವಾಗಿತ್ತು. ಈ ಅವಧಿಯಲ್ಲಿ ಹಲವು ನಿರ್ಮಾಪಕ-ನಿರ್ದೇಶಕ-ತಂತ್ರಜ್ಞರು, ಕಾರ್ಮಿಕರು, ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದರು. ವೃತ್ತಿಯಿಲ್ಲದೆ ಜೀವನ ಸಾಗಿಸಲು ಕಷ್ಟಪಟ್ಟಿದ್ದರು. ಈಗ ಚಿತ್ರರಂಗ ಮತ್ತೆ ಕೆಲಸ ಶುರು ಮಾಡಿದೆ. ಚಿತ್ರಮಂದಿರಗಳು ತೆರೆದಿದೆ.


Click it and Unblock the Notifications











