'ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ' ಎಂದಿದ್ದೇಕೆ ನಟ ಜಗ್ಗೇಶ್?
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಜ್ಯೋತಿಷ್ಯದ ಬಗ್ಗೆ ಬೇಸರ ಹೊರಹಾಕಿದ್ದಾರೆ. 2020 ತುಂಬಾ ಕೆಟ್ಟ ವರ್ಷ, ಈ ವರ್ಷವನ್ನು ಜೀವನದಿಂದ ಡಿಲೀಟ್ ಮಾಡಬೇಕು ಅಂತ ಎಲ್ಲರೂ ಹೇಳುತ್ತಾರೆ. ನಟ ಜಗ್ಗೇಶ್ ಕೂಡ ಈ ವರ್ಷದ ಮೇಲೆ ತುಂಬಾ ಕೋಪಗೊಂಡಿದ್ದಾರೆ.
ಕೊರೊನಾ ವೈರಸ್ ಇಡೀ ಮನುಕುಲವನ್ನೆ ನಾಶ ಮಾಡುತ್ತಿದೆ. ಅಮಾಯಕರನ್ನು ಬಲಿ ಪಡೆಯುತ್ತಿದೆ. ಇಡೀ ವಿಶ್ವವನ್ನೆ ಆವರಿಸಿರುವ ಕೊರೊನಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 2020ರಲ್ಲಿ ಇಂತಹ ಒಂದು ದೊಡ್ಡ ಸಮಸ್ಯೆ ಬರುತ್ತೆ, ಮನುಕುಲವನ್ನೇ ನಾಶ ಮಾಡುತ್ತೆ ಅಂತ ಯಾವ ಜ್ಯೋತಿಷ್ಯರು ಭವಿಷ್ಯ ಹೇಳಲಿಲ್ಲ ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಜಗ್ಗೇಶ್ ಸಮಾಜದ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಯಾವುದೇ ಸಮಸ್ಯೆ ಕಂಡು ಬಂದರು, ಯಾವುದೇ ಘಟನೆ ಬಗ್ಗೆಯಾದರೂ ಜಗ್ಗೇಶ್ ಮೊದಲು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದೀಗ ಜ್ಯೋತಿಷ್ಯದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

"2020 ಆರಂಭಕ್ಕೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ. ಕೆಲ ರಾಶಿಗಳಿಗೆ ಶನಿಗುರು ಉತ್ತಮ ಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿ ಬಿಟ್ಟರು. ಆದರೆ ಕೊರೊನಾ ವಿಶ್ವ ಮನು ಕುಲಕ್ಕೆ ಹೀಗೆ ಗುಮ್ಮಿ ಅಮಾಯಕರ ಸಾವು, ನೋವು, ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜ್ಯೋತಿಷ್ಯಕಿಂತ ನಿಮ್ಮ ನೀವು ನಂಬಿ. ನೀವು ಸರಿ ಇದ್ದರೆ ಜೀವ ಜಗ ಸರಿಯಿರುತ್ತದೆ." ಎಂದು ಹೇಳಿದ್ದಾರೆ.
ಇನ್ನೂ ಇತ್ತೀಚಿಗೆ ಇಹಲೋಕ ತ್ಯಜಿಸಿದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡಿದ್ದ ಜಗ್ಗೇಶ್, ಚೀನಾ ವಿರುದ್ಧ ಹರಿಹಾಯ್ದಿದ್ದರು. ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿ, ಅಮಾಯಕರ ಪ್ರಾಣ ತೆಗೆಯುತ್ತಿದೆ, ಚೀನಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications











