ಚಿತ್ರರಂಗದಲ್ಲಿ ಹೆಸರು, ಹಣ ಗಳಿಸಿರುವ ನಟ ಜಗ್ಗೇಶ್ ಅಧ್ಯಾತ್ಮದತ್ತ ವಾಲುತ್ತಿರುವುದೇಕೆ?
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಇತ್ತೀಚಿಗೆ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ವೀವ್ ಆಗಿರುವ ನಟ ಜಗ್ಗೇಶ್ ಇತ್ತೀಚಿಗೆ ಅಧ್ಯಾತ್ಮದ ಬಗ್ಗೆ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.
ಇಂದು ಚಿತ್ರರಂಗದಲ್ಲಿ ದೊಡ್ಡ ಹೆಸರು, ಹಣಗಳಿಸಿರುವ ಜಗ್ಗೇಶ್ ಈ ಸ್ಥಾನಕ್ಕೆ ಬರಲು ಸಾಕಷ್ಟು ಶ್ರಮಿಸಿದ್ದಾರೆ. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಗ್ಗೇಶ್ ಅಸಾಧ್ಯವಾದ ಕನಸು ಕಂಡು, ಅದನ್ನು ನನಸಾಗಿಸಿಕೊಂಡು ಇಂದು ಸಾರ್ಥಕ ಬದುಕನ್ನು ಮುನ್ನಡೆಸುತ್ತಿದ್ದಾರೆ.
ಸಮಾಜದ ಆಗುಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಾ, ಯುವ ಜನಾಂಗಕ್ಕೆ ಉತ್ತಮ ಸಂದೇಶ ರವಾನಿಸುತ್ತಿರುವ ನಟ ಜಗ್ಗೇಶ್ ಗೆ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾರೆ. ಇತ್ತೀಚಿಗೆ ನೀವು ತುಂಬಾ ಅಧ್ಯಾತ್ಮದ ಕಡೆ ವಾಲುತ್ತಿದ್ದೀರಿ ಎಂದು ಕೇಳಿದ್ದಾರೆ.

ಅಭಿಮಾನಿಯ ಈ ಪ್ರಶ್ನೆಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವನ್ನೂ ಕೊಟ್ಟ ಕರ್ತನಿಗೆ ಧನ್ಯವಾದ ಅರ್ಪಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಧ್ಯಾತ್ಮದ ಬಗ್ಗೆ ಜಗ್ಗೇಶ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'40ವರ್ಷ ಹಿಂದೆ ಮಧ್ಯಮವರ್ಗದ ಮನೆಯಲ್ಲಿ ಹುಟ್ಟಿ ಅಸಾಧ್ಯವಾದ ಕನಸು ಕಂಡು ಆ ಕನಸು ನನಸಾಗಿ ಬಯಸಿದ್ದು ಪಡೆದು. ತನ್ನ ಹೊಟ್ಟೆಗೆ ಚಿಂತಿಸುತ್ತಿದ್ದವರಿಗೆ ನಂಬಿದವರಿಗೂ ಹೊಟ್ಟೆ ತುಂಬಿಸೊ ಶಕ್ತಿ ಪಡೆದು ತಂದೆ-ತಾತನಾಗಿ ಸಾರ್ಥಕ ಬದುಕು ಪಡೆದ ಮೇಲೆ, ಇದನ್ನೆಲ್ಲಾಕೊಟ್ಟ ಕರ್ತನಿಗೆ ಧನ್ಯವಾದ ಅರ್ಪಿಸುವ ಕಾರ್ಯ ಮಾಡುತ್ತಿರುವೆ. ಆ ಧನ್ಯವಾದವೇ ಆಧ್ಯಾತ್ಮಿಕ ದಾರಿ' ಎಂದು ಹೇಳಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ನಟ ಜಗ್ಗೇಶ್ 120ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನವರಸ ನಾಯಕನಾಗಿ ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಶಾಶ್ವತ ಜಾಗಪಡೆದಿದ್ದಾರೆ.
ಸದ್ಯ ಸಿನಿಮಾಗಳ ಜೊತೆಗೆ ಈಗ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ ನಟ ಜಗ್ಗೇಶ್. ಸದ್ಯ ತೋತಾಪುರಿ ಸಿನಿಮಾ ಮಾಡಿ ಮುಗಿಸಿರುವ ಜಗ್ಗೇಶ್ ರಂಗನಾಯಕ ಸಿನಿಮಾದಲ್ಲಿ ನಿರತರಾಗಿದ್ದಾರೆ. ಜಗ್ಗೇಶ್ ಕೊನೆಯದಾಗಿ ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.


Click it and Unblock the Notifications











