ಮಗ ಹುಟ್ಟಿದ ಬಳಿಕ ಬದಲಾಯ್ತು ಅದೃಷ್ಣ: ನಟ ಜಗ್ಗೇಶ್ ಭಾವನಾತ್ಮಕ ನುಡಿ
ನಟ ಜಗ್ಗೇಶ್ ಅವರಿಗೆ ಸಿನಿಮಾರಂಗದಲ್ಲಿ ಗುರುತಿಸಿ ಕೊಳ್ಳುವುದು ಸುಲಭದ ಹಾದಿ ಆಗಿರಲಿಲ್ಲ. ಅವರು ಸಿನಿಮಾಗಳಲ್ಲಿ ಪಾತ್ರ ಕೇಳಿ ಅಭಿನಯ ಮಾಡುತ್ತಿದ್ದರು. ಇದನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಈಗ ಮತ್ತೆ ಜಗ್ಗಣ್ಣ ತಮ್ಮ ಹಿಂದಿನ ದಿನಗಳನ್ನು ನೆನೆದಿದ್ದಾರೆ. ಅದಕ್ಕೆ ಕಾರಣ ಅವರ ಮೊದ ಮಗ ಗುರುರಾಜ್ ಹುಟ್ಟು ಹಬ್ಬ.
ನಟ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹಾಗಾಗಿ ಮಗನಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಮಗ ಹುಟ್ಟಿದ ಬಳಿಕ ಅವರ ಜೀವನ ಹೇಗೆ ಬದಲಾಯ್ತು, ಮಗ ಹುಟ್ಟಿದಾಗ ಜಗ್ಗೇಶ್ ಅವರು ರಾಯರ ಮುಂದೆ ಹೋಗಿ ನಿಂತಿದ್ದು ಯಾಕೆ ಎನ್ನುವುದನ್ನೂ ಕೂಡ ರಿವೀಲ್ ಪೋಸ್ಟ್ನಲ್ಲಿ ಬರೆದಿದ್ದಾರೆ.
1987 ರಲ್ಲಿ ನಟ ಜಗ್ಗೇಶ್ ಮತ್ತು ಪತ್ನಿ ಪರಿಮಳ ಅವರಿಗೆ ಮೊದಲ ಮಗು ಜನನ ಆಗುತ್ತದೆ. ಆಗ ಜಗ್ಗೇಶ್ ಅವರಿಗೆ ಕೆಲಸ ಇರಲಿಲ್ಲವಂತೆ. ದುಡಿಮೆ ಇಲ್ಲದೆ ಕಂಗಾಲಾಗಿ ಬಿಟ್ಟಿದ್ದರಂತೆ ಜಗ್ಗೇಶ್. ಆಗ ಅವರು ಹೋಗಿದ್ದು ರಾಯರ ಸನ್ನಿಧಿಗೆ.

ಮಗನ ಹುಟ್ಟಿನ ಬಳಿಕ ಜಗ್ಗೇಶ್ಗೆ ಅದೃಷ್ಟ: ಜಗ್ಗೇಶ್ ಭಾವನಾತ್ಮಕ ನುಡಿ!
ಗುರುರಾಜ್ ಹುಟ್ಟು ಹಬ್ಬಕ್ಕಾಗಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಅವರು ಹೀಗೆ ಬರೆದು ಕೊಂಡಿದ್ದಾರೆ. "1987 ನಾನು ಅಪ್ಪನಾದ ದಿನ. ಕೈಯಲ್ಲಿ ಬಿಡಿಗಾಸಿಲ್ಲಾ. ಕಾಡಿಬೇಡಿದರು ಕೆಲಸವಿಲ್ಲಾ. ಅಪ್ಪನ ಮುಂದೆ ಸೋತೆ ಎಂದು ನಿಲ್ಲಲು ಸ್ವಾಭಿಮಾನ ಅಡ್ಡಬಂತು. ಅಂದು ನಾನು ಅರಿತ ಜಗದ ಪಾಠ ಹಣ ಇಲ್ಲದವ ಹೆಣಕ್ಕೆ ಸಮವೆಂದು. ಆಗ ನಾನು ನಿಂತಿದ್ದು ಗುರುರಾಯರ ಮುಂದೆ ಮಂತ್ರಾಲಯದಲ್ಲಿ. ನನ್ನವರಾರು ನನಗಿಲ್ಲಾ, ನೀನಲ್ಲದೆ ಬೇರೆ ಗತಿಯಿಲ್ಲಾ, ನನ್ನಲಿ ಏಕೆ ಕೃಪೆಯಿಲ್ಲಾ, ಗುರುರಾಯನೆ ನೀನೆ ನನಗೆಲ್ಲಾ ಎಂದು. ನಂತರ ನನ್ನ ಬದುಕಲ್ಲಿ ನಡೆದುದ್ದೆಲ್ಲವು ರಾಯರ ವಿಸ್ಮಯ. ಇದ ಹೇಳಲು ಕಾರಣ 87 ರಲ್ಲಿ ಹುಟ್ಟಿದ ಮಗ ಗುರುರಾಜನಿಗೆ ಇಂದು 35ನೇ ಹುಟ್ಟುಹಬ್ಬ. ಅಂದು ನನ್ನ ಕಷ್ಟಕಾಲದಲ್ಲಿ ಹುಟ್ಟಿದ ಮಗ ಗುರುರಾಜ ಇಂದು ನನ್ನ ಮುದ್ದಿನ ಮೊಮ್ಮಗ ಅರ್ಜುನನಿಗೆ ಅಪ್ಪ. ಹುಟ್ಟುಹಬ್ಬದ ಶುಭಾಶಯ ಮಗನೆ God bless ".
ಹೀಗೆ ಬರೆಯುವುದರ ಮುಖಾಂತರ ಜಗ್ಗೇಶ್ ಅವರು ಮಗನಿಗೆ ಶುಭಾಶಯ ತಿಳಿಸಿದ್ದಾರೆ. ಜಗ್ಗಣ್ಣನ ಮಾತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











