'ಅಪಮಾನ ಅವಮಾನ ಯಶಸ್ಸಿನ ಪ್ರಥಮ ಮೆಟ್ಟಿಲು'- ಜಗ್ಗೇಶ್
''ಸಾವಿರ ಉಳಿ ಏಟು ಬಿದ್ದ ಮೇಲೆ ವಿಗ್ರಹವಾಗಿ ಪೂಜೆಗೆ ಅರ್ಹ. ಅಪಮಾನ ಅವಮಾನ ಯಶಸ್ಸಿನ ಪ್ರಥಮ ಮೆಟ್ಟಿಲು''....ಜಗ್ಗೇಶ್ ಹೇಳಿದ ಮಾತು ಈಗ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಯಾವ ಬೆಳವಣಿಗೆಗೆ ಸಂಬಂಧಿಸಿದ್ದಲ್ಲ. ತಮ್ಮದೇ ಜೀವನದಲ್ಲಿ ತಾವು ಅನುಭವಿಸಿದ ಕಷ್ಟದ ದಿನವನ್ನು ನೆನಪಿಸಿಕೊಂಡು ಹೇಳಿದ ಮಾತು.
ನಟ ಜಗ್ಗೇಶ್ ಅವರು ಮಾಂಸಪ್ರಿಯರು. ಈಗ ಸಸ್ಯಾಹಾರಿಯಾಗಿದ್ದಾರೆ. ಅದು ಬೇರೆ ಕಥೆ. ಆದರೆ, ಆರಂಭದ ದಿನಗಳಲ್ಲಿ ಮಾಂಸಾಹಾರ ಅಂದ್ರೆ ಜಗ್ಗೇಶ್ ಮೊದಲ ಪಂಕ್ತಿಯಲ್ಲಿರುತ್ತಿದ್ದ ವ್ಯಕ್ತಿ. ಹೀಗೆ, ಶೂಟಿಂಗ್ನಲ್ಲಿ ಒಮ್ಮೆ ಊಟದ ವಿಚಾರದಲ್ಲಿ ಜಗ್ಗೇಶ್ ಅಪಮಾನಕ್ಕೆ ಒಳಗಾದ ಘಟನೆಯೊಂದನ್ನು ಪುಟ್ಟ ಬಾಲಕಿಯೊಬ್ಬರು ಟಿವಿ ಕಾರ್ಯಕ್ರಮದಲ್ಲಿ ವಿವರಿಸಿದ್ದರು.
ಚಿತ್ರೀಕರಣದ ಸಮಯದಲ್ಲಿ ನಟ, ನಟಿ, ಇಡೀ ತಂಡದ ಜೊತೆ ಜಗ್ಗೇಶ್ ಸಹ ಕುಳಿತು ಮಾಂಸಾಹಾರ ಊಟ ಮಾಡುತ್ತಿದ್ದರಂತೆ. ಆಗ ಪ್ರೊಡಕ್ಷನ್ ಹುಡುಗನೊಬ್ಬ ಬಂದು ''ನೀನೊಬ್ಬ ಕ್ಯಾರೆಕ್ಟರ್ ಆರ್ಟಿಸ್ಟ್, ಇವರ ಜೊತೆ ಊಟ ಮಾಡ್ತಿದ್ದೀಯಾ'' ಎಂದು ಹೇಳಿ ಹೊರಗೆ ಕಳುಹಿಸಿದ್ದರು. ಈ ಘಟನೆ ಬಳಿಕ ತೀವ್ರವಾಗಿ ನೊಂದುಕೊಂಡ ಜಗ್ಗೇಶ್, ನಾನೊಬ್ಬ ಒಳ್ಳೆಯ ನಟ ಆಗುವವರೆಗೂ ಮಾಂಸಾಹಾರ ಮಾಡಲ್ಲ ಎಂದು ಹೇಳಿ 9 ವರ್ಷ ಸಸ್ಯಹಾರಿಯಾಗಿದ್ದರು.

ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಸ್ಮರಿಸಿಕೊಂಡ ಜಗ್ಗೇಶ್, ''ಸಾವಿರ ಉಳಿ ಏಟು ಬಿದ್ದ ಮೇಲೆ ವಿಗ್ರಹವಾಗಿ ಪೂಜೆಗೆ ಅರ್ಹ. ಅಪಮಾನ ಅವಮಾನ ಯಶಸ್ಸಿನ ಪ್ರಥಮ ಮೆಟ್ಟಿಲು. ಸಹಿಸಿ ಮುನ್ನಡೆದರೆ ಇತಿಹಾಸ ಸೃಷ್ಟಿ. ಯಾರಾದರು ಒಬ್ಬರ ಬಗ್ಗೆ ಅಣಕ ಪ್ರಶಂಸೆ ಮಾಡುತ್ತಾರೆ ಎಂದರೆ ಆತ ಅಲುಗಾಡಿಸಲಾಗದ ಗರುಡಗಂಬ ಎಂದು. ನಮ್ಮಗಮನ ಕೋಟಿ ಜನರ ಚಪ್ಪಾಳೆ ಮೇಲೆ ವಿನಹ ನೂರು ಜನರ ಅಣಕದ ಮೇಲೆ ಅಲ್ಲಾ. ಪ್ರೀತಿ ಗೆದ್ದವ ದೇವರ ಗೆದ್ದಂತೆ'' ಎಂದು ಹೇಳಿದ್ದಾರೆ.
ಜಗ್ಗೇಶ್ ಈಗ ಸಸ್ಯಹಾರಿ ಆಗಿದ್ದು ಹೇಗೆ?
ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ಹಿಂದೆಯೊಮ್ಮೆ ಹೇಳಿಕೊಂಡಿದ್ದರು. ''ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು. ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ. ಕಟುಕನಿಗೆ ತಲೆಕೊಟ್ಟದ್ದು ಮಗ ರೋದಿಸುತ್ತಿದ್ದದ್ದು ಅಮ್ಮ. ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ. 4 ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ. ದಯೇ ಧರ್ಮದ ಮೂಲ.'' ಎಂದು ಟ್ವೀಟ್ ಮಾಡಿದ್ದರು.


Click it and Unblock the Notifications











