ಮಗನಿಗೆ ಬಹಳ ಒಳ ಏಟು ಬಿದ್ದಿದೆ: ಪುತ್ರ ಯತಿರಾಜ್ ಬಗ್ಗೆ ಜಗ್ಗೇಶ್ ಭಾವುಕ ಟ್ವೀಟ್
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಪುತ್ರ ಯತಿರಾಜ್ ಚಲಾಯಿಸುತ್ತಿದ್ದ ಕಾರು ನಿನ್ನೆ (ಜುಲೈ 1) ಬೆಂಗಳೂರು-ಹೈದರಾಬಾದ್ ಹೆದ್ದಾರಿ ಅಗಲಗುರ್ಕಿ ಬಳಿ ಅಪಘಾತಕ್ಕೆ ಇಡಾಗಿತ್ತು. ಅದೃಷ್ಟವಶಾತ್ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ಯತಿರಾಜ್ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ
ಪುತ್ರನ ಆರೋಗ್ಯದ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದು ಮಗನಿಗೆ ಬಹಳ ಒಳ ಏಟು ಬಿದ್ದಿದೆ ಎಂದು ಹೇಳಿದ್ದಾರೆ. ನಿನ್ನೆ ಅಪಘಾತದ ಬಳಿಕ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಜಗ್ಗೇಶ್ ಅಪಘಾತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದರು. ಜಗ್ಗೇಶ್ ಟ್ವೀಟ್ ಡಿಲೀಟ್ ಮಾಡಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಬಳಿಕ ಮತ್ತೆ ಟ್ವೀಟ್ ಮಾಡಿ ಜಗ್ಗೇಶ್ ಮಗನ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಟ್ವೀಟ್ ಡಿಲೀಟ್ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

"ಜೀವನದಲ್ಲಿ ಸಂಸಾರದ ಸರ್ವಸದಸ್ಯರ ಭಾರಹೊತ್ತು, ತನಗಾಗಿ ಏನು ಬಯಸದೆ. ತನ್ನವರಿಗಾಗಿ ಬಂದದ್ದೆಲ್ಲಾ ಸಹಿಸಿ ನೋವುನುಂಗಿ ಹೆಜ್ಜೆ ಹಾಕುವ ಮೌನಯೋಗಿ ಅಪ್ಪ. ಇಂದು ಬಹಳ ನೆನಪಾದ ನನ್ನ ಅಪ್ಪ. ಅವನ ತ್ಯಾಗದ ಮುಂದೆ ಇಂದು ನಾನು ತೃಣ ಎನಿಸಿತು. ಮಗನಿಗೆ ಬಹಳ ಒಳ ಏಟು ಬಿದ್ದಿದೆ, ಪಕ್ಕೆಮೂಳೆ ಬಲತೊಡೆ ligamentಗೆ ಬಲವಾದ ಪೆಟ್ಟು. ಚಿಕಿತ್ಸೆ ನಡೆಯುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕೆಟ್ಟ ಭಯ ಆವರಿಸುತ್ತಿದೆ. ಮನೆಯವರು ನೋಡದಂತೆ ವಿನಂತಿ ಮಾಡಿದರು ಹಾಗಾಗಿ ಟ್ವೀಟ್ ಡಿಲೀಟ್ ಮಾಡಿರುವುದಾಗಿ ಹೇಳಿದ್ದಾರೆ. "ಮಗನ ಕಾರ್ accident ಚಿತ್ರ ನೋಡಿದರೆ ನನಗೆ ಹೃದಯದ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಿಗ್ಗೆಯಿಂದ ಏನು ತಿನ್ನಲಾಗದೆ ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ. ಮನೆಯವರು ಅದ ನೋಡದಂತೆ ವಿನಂತಿ ಮಾಡಿದರು. ಹಾಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ ಕುಮಾರ್, "ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಮಾಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗ್ಗೇಶ್ ಅವರ ಎರಡನೇ ಪುತ್ರ ಯತಿರಾಜ್ ಕಾರು ಚಾಲನೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ'' ಎಂದಿದ್ದರು.


Click it and Unblock the Notifications











